ಮಂಡ್ಯ: ಭಿಕ್ಷಾಟನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟ ಬಳಿಕ, ಅವರ ಮನೆಯಲ್ಲಿ ಬರೋಬ್ಬರಿ ₹8 ಲಕ್ಷಕ್ಕೂ ಅಧಿಕ ನಗದು ಹಣ ಪತ್ತೆಯಾಗಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ. ಗುತ್ತಲು ಬಡಾವಣೆಯಲ್ಲಿ ನಡೆದ ಈ ಘಟನೆ ಅಚ್ಚರಿ ಮೂಡಿಸಿದೆ.
ಮೃತ ವೃದ್ಧೆಯನ್ನು ನೂರ್ ಎಂದು ಗುರುತಿಸಲಾಗಿದೆ. ಕುಟುಂಬಸ್ಥರ ಆಸರೆ ಇಲ್ಲದೆ ಹಲವು ವರ್ಷಗಳಿಂದ ಮಂಡ್ಯ ನಗರದ ವಿವಿಧೆಡೆ ಭಿಕ್ಷಾಟನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನೂರ್, ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ನೂರ್ ಅವರ ನಿಧನದ ಬಳಿಕ ಸ್ಥಳೀಯರು ಹಾಗೂ ಸಂಬಂಧಿಕರು ಸೇರಿಕೊಂಡು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಅಂತ್ಯಸಂಸ್ಕಾರ ಪೂರ್ಣಗೊಂಡ ಬಳಿಕ ಅವರು ವಾಸವಿದ್ದ ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.
ಮನೆಯಲ್ಲಿ ನಾಣ್ಯ, ನೋಟುಗಳ ರಾಶಿ
ಮನೆಯೊಳಗೆ ಮೂಟೆಗಟ್ಟಲೆ ನಾಣ್ಯಗಳು ಹಾಗೂ ಕಂತೆ ಕಂತೆ ಕರೆನ್ಸಿ ನೋಟುಗಳು ಪತ್ತೆಯಾಗಿವೆ. ಮೊದಲಿಗೆ ಇಷ್ಟೊಂದು ಹಣ ಇರುವುದನ್ನು ಕಂಡು ಸ್ಥಳೀಯರು ಹಾಗೂ ಸಂಬಂಧಿಕರು ಅಚ್ಚರಿಗೊಳಗಾಗಿದ್ದಾರೆ. ಬಳಿಕ ಎಲ್ಲರೂ ಸೇರಿಕೊಂಡು ಹಣವನ್ನು ಎಣಿಕೆ ಮಾಡಿದ್ದಾರೆ.
ಹಣ ಎಣಿಸಿದಾಗ ₹8 ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹವಾಗಿರುವುದು ತಿಳಿದುಬಂದಿದೆ. ಹಲವು ವರ್ಷಗಳ ಕಾಲ ಭಿಕ್ಷಾಟನೆ ಮಾಡಿಕೊಂಡು ನೂರ್ ಈ ಹಣವನ್ನು ಕೂಡಿಟ್ಟಿದ್ದರು ಎನ್ನಲಾಗಿದೆ.
ಕುಟುಂಬದ ಸದಸ್ಯರ ನೆರವು ಇಲ್ಲದೆ ಜೀವನ ನಡೆಸುತ್ತಿದ್ದ ನೂರ್, ನಗರದ ವಿವಿಧ ಪ್ರದೇಶಗಳಲ್ಲಿ ಭಿಕ್ಷೆ ಬೇಡಿ ಬಂದ ಹಣವನ್ನು ಖರ್ಚು ಮಾಡದೆ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ. ಆದರೆ, ಅವರು ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಕೂಡಿಟ್ಟಿದ್ದರು ಎಂಬುದು ಅವರ ನಿಧನದ ಬಳಿಕವೇ ಗೊತ್ತಾಗಿದೆ.
ಅಂತ್ಯಕ್ರಿಯೆ ಬಳಿಕ ಹಣ ಪತ್ತೆ
ನೂರ್ ಅವರ ಅಂತ್ಯಕ್ರಿಯೆ ಮುಗಿದ ನಂತರ ಮನೆ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಹಣ ಪತ್ತೆಯಾಗಿದೆ. ನಾಣ್ಯಗಳು ಹಾಗೂ ನೋಟುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಸ್ಥಳೀಯರು ಮತ್ತು ಸಂಬಂಧಿಕರು ಒಟ್ಟಾಗಿ ಹಣ ಎಣಿಕೆ ಮಾಡಿದ್ದಾರೆ.
ನಂತರ ಸ್ಥಳೀಯ ಮುಖಂಡರು ಮಧ್ಯಸ್ಥಿಕೆ ವಹಿಸಿ, ಹಣದ ಕುರಿತು ಮಾತುಕತೆ ನಡೆಸಿದ್ದಾರೆ. ಬಳಿಕ ಪತ್ತೆಯಾದ ಹಣವನ್ನು ಮೃತ ನೂರ್ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
