ಗದಗ: ಲಕ್ಕುಂಡಿಯ ನೆಲದಡಿಯಲ್ಲಿ ಬಂಗಾರದ ನಿಧಿ ಅಡಗಿದೆ ಎಂಬ ಚರ್ಚೆ ದಟ್ಟವಾಗುತ್ತಿರುವ ಬೆನ್ನಲ್ಲೇ, 91 ವರ್ಷದ ತೋಟಯ್ಯ ಎಂಬ ವೃದ್ಧ ನೀಡಿರುವ ಹೇಳಿಕೆ ಹೊಸ ಸಂಚಲನ ಮೂಡಿಸಿದೆ. ಲಕ್ಕುಂಡಿಯಲ್ಲಿ ಮಳೆಯಾದಾಗಲೆಲ್ಲಾ ತಮಗೆ ನಿಧಿ ಸಿಕ್ಕಿದೆ ಎಂದು ಹೇಳುವ ಮೂಲಕ ಮತ್ತೆ ಚರ್ಚೆಗೆ ಕಾರಣವಾಗಿದೆ.
ಲಕ್ಕುಂಡಿ ಗ್ರಾಮದ ನಿವಾಸಿ ತೋಟಯ್ಯ ಕಾಶಯ್ಯ ಪತ್ರಿಮಠ ಅವರು ಕಳೆದ ಹಲವು ದಶಕಗಳಿಂದ ನಿಧಿ ಸಂಗ್ರಹಣೆಯನ್ನೇ ಕಾಯಕ ಮಾಡಿಕೊಂಡಿದ್ದಾರೆ. ಅವರ ಪ್ರಕಾರ, ಲಕ್ಕುಂಡಿಯ ಮಣ್ಣಿನಲ್ಲಿ ಪುರಾತನ ಕಾಲದ ಪಂಚ ನೀಲ, ಗಾಣಿಗ ನೀಲ, ಇಂದ್ರನೀಲ, ಜಂಬನೀಲದಂತಹ ಅಮೂಲ್ಯ ಹರಳುಗಳು, ಚಿನ್ನದ ನಾಣ್ಯಗಳು ಮತ್ತು ಸ್ಪಟಿಕಗಳು ಅಡಗಿವೆ. ಮಳೆಯಾದ ನಂತರ ಭೂಮಿಯ ಮೇಲ್ಪದರ ಸವೆದಾಗ ಇಂತಹ ಅಮೂಲ್ಯ ವಸ್ತುಗಳು ತಮಗೆ ಲಭ್ಯವಾಗಿವೆ ಎಂದು ಅವರು ತಿಳಿಸಿದ್ದಾರೆ.
ತಮಗೆ ಸಿಕ್ಕ ನಿಧಿಯ ಬಗ್ಗೆ ಮುಕ್ತವಾಗಿ ಮಾತನಾಡಿರುವ ತೋಟಯ್ಯ, ನನಗೆ ಸಿಕ್ಕ ಚಿನ್ನ ಮತ್ತು ನಾಣ್ಯಗಳನ್ನು ಗದಗದಲ್ಲಿ ಕಡಿಮೆ ಬೆಲೆಗೆ ಮಾರಿ ಜೀವನ ನಡೆಸುತ್ತಿದ್ದೇನೆ. ನಾನು ಸಂಗ್ರಹಿಸಿದ ಈ ಪುರಾತನ ವಸ್ತುಗಳನ್ನು ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ನೀಡುವುದಿಲ್ಲ ಎಂದು ಹೇಳಿದರು. ಪುರಾತನ ವಸ್ತುಗಳನ್ನು ಮಾರಾಟ ಮಾಡುವುದು ಕಾನೂನುಬಾಹಿರವಾಗಿದ್ದರೂ, ಅವರು ಈ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡಿರುವುದು ಅಧಿಕಾರಿಗಳಿಗೆ ಸವಾಲಾಗಿದೆ.
ತೋಟಯ್ಯ ಅವರ ಸ್ಫೋಟಕ ಹೇಳಿಕೆಗಳಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಾಲಯದ ರಹಸ್ಯ. ವೀರಭದ್ರ ದೇವರ ದೃಷ್ಟಿ ಬೀರುವ ಸ್ಥಳದಿಂದ 11 ಅಡಿ ಆಳದಲ್ಲಿ ನವರತ್ನ ಖಚಿತವಾದ ಏಳು ಅಡಿಯ ಬಂಗಾರದ ಸರ್ಪವಿದೆ. ಅಲ್ಲಿ ಮೀಸಲು ತುಪ್ಪ ಮತ್ತು ಪಂಚಾಮೃತ ಮುಟ್ಟಿಸಿದರೆ ನಿಧಿ ಹೊರಬರುತ್ತದೆ ಎಂದು ನಾನು ಪುಸ್ತಕದಲ್ಲಿ ಓದಿದ್ದೇನೆ ಮತ್ತು ಹಿರಿಯರಿಂದ ಕೇಳಿದ್ದೇನೆ ಎಂದು ಅವರು ಕುತೂಹಲಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.
ಇಷ್ಟೇ ಅಲ್ಲದೆ, ಈ ಹಿಂದೆ ಕೆಲವರು ವಾಮಾಚಾರ ಮಾಡಿ ಈ ನಿಧಿಯನ್ನು ಪಡೆಯಲು ಯತ್ನಿಸಿದ್ದರು ಎಂಬ ವಿಚಾರವನ್ನು ತಿಳಿಸಿದ್ದಾರೆ. ಈ ಹೇಳಿಕೆಗಳ ಬೆನ್ನಲ್ಲೇ ಲಕ್ಕುಂಡಿಯಲ್ಲಿ ಪುರಾತತ್ವ ಇಲಾಖೆಯಿಂದ ಅಧಿಕೃತ ಉತ್ಖನನ ಆರಂಭವಾಗುವ ಸಾಧ್ಯತೆಗಳಿವೆ.ಲಕ್ಕುಂಡಿಯಲ್ಲಿ ಎಲ್ಲಿ ಅಗೆದರೂ ನಿಧಿ ಸಿಗುತ್ತದೆ ಎಂಬ ಮಾತು ಕೇಳಿಬರುತ್ತಿರುವುದರಿಂದ ಸ್ಥಳೀಯರಲ್ಲಿ ಕುತೂಹಲದ ಜೊತೆಗೆ ಆತಂಕವೂ ಮನೆ ಮಾಡಿದೆ. ನಿಧಿಗಳ್ಳರ ಕಾಟ ಹೆಚ್ಚಾಗಬಹುದೆಂಬ ಭೀತಿ ಎದುರಾಗಿದೆ.





