ತುಮಕೂರು: ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಸಿದ್ಧಾಪುರ ಗ್ರಾಮದಲ್ಲಿ ಕೆಎಸ್ಆರ್ ಟಿಸಿ ಬಸ್ ಭೀಕರ ಅಪಘಾತಕ್ಕೀಡಾಗಿದೆ. ಬಸ್ಸಿನ ಟೈರ್ ಬ್ಲಾಸ್ಟ್ ಆಗಿ ನಿಯಂತ್ರಣ ತಪ್ಪಿದ ವಾಹನವು ರಸ್ತೆಯ ಪಕ್ಕದ ಮನೆಗೆ ನುಗ್ಗಿ, ಗೋಡೆಯನ್ನು ಧ್ವಂಸಗೊಳಿಸಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇರದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆಯು ಇಂದು ಮುಂಜಾನೆ ಸಿದ್ದಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ ನಡೆದಿದೆ. ಕೆಎಸ್ಆರ್ಟಿಸಿ ಬಸ್ ಅತಿ ವೇಗವಾಗಿ ಸಾಗುತ್ತಿತ್ತು. ಈ ಸಂದರ್ಭದಲ್ಲಿ ಬಸ್ನ ಒಂದು ಟೈರ್ ಬ್ಲಾಸ್ಟ್ ಆಗಿದ್ದು, ಚಾಲಕನಿಗೆ ವಾಹನದ ಮೇಲಿನ ನಿಯಂತ್ರಣ ಕೈತಪ್ಪಿದೆ. ಪರಿಣಾಮ ಬಸ್ ರಸ್ತೆಯಿಂದ ಜಾರಿ, ರಸ್ತೆಯ ಪಕ್ಕದಲ್ಲಿದ್ದ ಮನೆಗೆ ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ಮನೆಯ ಒಂದು ಗೋಡೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಮನೆಯೊಳಗೆ ಯಾರೂ ಇರದಿರುವುದರಿಂದ ಜೀವಹಾನಿಯಿಂದ ಮನೆಯವರು ಪಾರಾಗಿದ್ದಾರೆ.
ಅಪಘಾತದ ಸಂದರ್ಭದಲ್ಲಿ ಬಸ್ನಲ್ಲಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಕೆಲವರಿಗೆ ಕೈ, ಕಾಲುಗಳಲ್ಲಿ ಸಣ್ಣ ಗಾಯಗಳಾಗಿವೆ. ಗಾಯಗೊಂಡವರನ್ನು ತಕ್ಷಣ ತಿಪಟೂರು ತಾಲೂಕು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆಗೆ ಒಳಪಡಿಸಲಾಗಿದೆ. ಆಸ್ಪತ್ರೆಯ ವೈದ್ಯರು ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.