ಇನ್ಮುಂದೆ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್: ಶ್ರೀಘ್ರದಲ್ಲೇ ವಿತರಣೆ

Untitled design 2026 06 09T125519.352

ಬೆಂಗಳೂರು, ಜೂನ್ 09: ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಗ್ಯಾರಂಟಿ ಯೋಜನೆಯಲ್ಲಿ ಸಾರಿಗೆ ಇಲಾಖೆ ಮಹತ್ವದ ಬದಲಾವಣೆ ಮಾಡಿದೆ. ಇದುವರೆಗೆ ಮಹಿಳೆಯರು ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸುತ್ತಿದ್ದ ಸಾಂಪ್ರದಾಯಿಕ ವ್ಯವಸ್ಥೆಗೆ ತೆರೆ ಎಳೆಯಲಾಗುತ್ತಿದೆ. ಶೀಘ್ರದಲ್ಲೇ ಅರ್ಹ ಮಹಿಳಾ ಪ್ರಯಾಣಿಕರಿಗೆ ಇಲಾಖೆಯ ವತಿಯಿಂದ ಉಚಿತ ಸ್ಮಾರ್ಟ್ ಕಾರ್ಡ್ ವಿತರಿಸಲು ನಿರ್ಧರಿಸಲಾಗಿದೆ.

ನೂತನ ಸಾರಿಗೆ ಸಚಿವರಾಗಿ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸೋಮವಾರ ಅಧಿಕೃತವಾಗಿ ಕಾರ್ಯಾರಂಭ ಮಾಡಿದ ಬೈರತಿ ಸುರೇಶ್ ಅವರು, ನಾಲ್ಕೂ ಸಾರಿಗೆ ನಿಗಮಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಮಹತ್ವದ ಸಭೆಯ ಬಳಿಕ ಈ ವಿಷಯವನ್ನು ಪ್ರಕಟಿಸಿದ್ದಾರೆ.

ಸ್ಮಾರ್ಟ್ ಕಾರ್ಡ್ ಯೋಜನೆಯ ಹಿನ್ನೆಲೆ ಏನು?

ಸರ್ಕಾರಿ ಗ್ಯಾರಂಟಿ ಯೋಜನೆಗಳು ಕೇವಲ ಅರ್ಹರಿಗೆ ಮಾತ್ರ ತಲುಪಬೇಕು ಹಾಗೂ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬೇಕು ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಶಯದಂತೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಪ್ರಸ್ತುತ ಕೆಲವು ದುಷ್ಕರ್ಮಿಗಳು ನಕಲಿ ಆಧಾರ್ ಕಾರ್ಡ್ ಬಳಸಿ ಉಚಿತ ಪ್ರಯಾಣ ಮಾಡುತ್ತಿರುವುದು ಪತ್ತೆಯಾಗಿದೆ. ಈ ಅವ್ಯವಹಾರಕ್ಕೆ ಸ್ಮಾರ್ಟ್ ಕಾರ್ಡ್ ಮೂಲಕ ಬ್ರೇಕ್ ಹಾಕಲು ಸರ್ಕಾರ ನಿರ್ಧರಿಸಿದೆ.

3 ಕೋಟಿ ಕಾರ್ಡ್ ವಿತರಣೆ: ವಿವರಗಳು

ರಾಜ್ಯಾದ್ಯಂತ ಸುಮಾರು 3 ಕೋಟಿಗೂ ಹೆಚ್ಚು ಜನರಿಗೆ ಈ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವ ಬೃಹತ್ ಗುರಿ ಹೊಂದಲಾಗಿದೆ. ಪ್ರಮುಖ ವಿಶೇಷತೆಗಳು

ಪ್ರಾಯೋಗಿಕ ಯೋಜನೆ (Pilot Project)

ಆರಂಭದಲ್ಲಿ ಕೆಲವು ಚುನಾಯಿತ ಮಾರ್ಗಗಳಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಜಾರಿಗೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಾಯೋಗಿಕ ಯೋಜನೆ ಯಶಸ್ವಿಯಾದ ಬಳಿಕ ರಾಜ್ಯದ ಎಲ್ಲಾ ಬಸ್‌ಗಳಿಗೆ ವಿಸ್ತರಿಸಲಾಗುವುದು.

ನಕಲಿ ಕಾರ್ಡ್ ಆಟಕ್ಕೆ ಬ್ರೇಕ್

ಹೊಸ ಸ್ಮಾರ್ಟ್ ಕಾರ್ಡ್ ನಕಲಿ ಆಧಾರ್ ಕಾರ್ಡ್ ತೋರಿಸಿ ಉಚಿತ ಪ್ರಯಾಣ ಮಾಡುವ ಖದೀಮರಿಗೆ ತಕ್ಕ ಉತ್ತರವಾಗಿದೆ. ಕಾರ್ಡ್‌ನಲ್ಲಿ ಇ-ಕೆವೈಸಿ (e-KYC) ಮಾಡಲಾಗಿರುತ್ತದೆ. ಕಂಡಕ್ಟರ್‌ಗಳು ಇನ್ನು ಮುಂದೆ ಆಧಾರ್ ಕಾರ್ಡ್ ಪರಿಶೀಲನೆ ಮಾಡಬೇಕಾಗಿಲ್ಲ. ಬದಲಿಗೆ ಟಿಕೆಟ್ ಕೊಡುವ ಇಟಿಎಂ (ETM) ಮಿಷನ್‌ನಲ್ಲಿ ಕಾರ್ಡ್ ಸ್ಟೈಪ್ ಮಾಡಿದರೆ ಸಾಕು, ಟಿಕೆಟ್ ಸ್ವಯಂಚಾಲಿತವಾಗಿ ನೀಡಲಾಗುತ್ತದೆ.

ಮೆಟ್ರೋದಲ್ಲೂ ಉಪಯೋಗ: NCMC ಮಾದರಿ

ಈ ಸ್ಮಾರ್ಟ್ ಕಾರ್ಡ್ ಕೇವಲ ಬಸ್‌ಗಳಿಗೆ ಮಾತ್ರ ಸೀಮಿತವಾಗಿರದೆ, ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಮಾದರಿಯಲ್ಲಿರಲಿದೆ. ಅಂದರೆ ನಮ್ಮ ಮೆಟ್ರೋ ಸೇರಿದಂತೆ ಇತರೆ ಸಾರಿಗೆ ವ್ಯವಸ್ಥೆಗಳಲ್ಲೂ ಇದನ್ನು ಬಳಸಬಹುದು. ಒಂದೇ ಕಾರ್ಡ್ ಮೂಲಕ ಬಸ್, ಮೆಟ್ರೋ, ಮತ್ತು ಭವಿಷ್ಯದಲ್ಲಿ ರೈಲ್ವೇ ಪ್ರಯಾಣಕ್ಕೂ ಬಳಸುವ ಸಾಧ್ಯತೆಯಿದೆ.

5,000 ಹೊಸ ಬಸ್‌ಗಳ ಖರೀದಿ

ಶಕ್ತಿ ಯೋಜನೆ ಜಾರಿಯಾದ ನಂತರ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಶೇ. 40 ರಷ್ಟು ಹೆಚ್ಚಾಗಿದೆ. ಸದ್ಯ ದಿನವೊಂದಕ್ಕೆ ಸರಾಸರಿ 75.68 ಲಕ್ಷ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಹೆಚ್ಚುತ್ತಿರುವ ಪ್ರಯಾಣಿಕರ ಒತ್ತಡವನ್ನು ನಿಭಾಯಿಸಲು ಈ ವ್ಯವಸ್ಥೆ ಮಾಡಲಾಗಿದೆ. 

ಮಹಿಳಾ ಸುರಕ್ಷತೆಗೆ ‘ನಿರ್ಭಯ’ ಆದ್ಯತೆ

ಸಚಿವ ಬೈರತಿ ಸುರೇಶ್ ಅವರು ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಖಾಸಗಿ ವಾಣಿಜ್ಯ ಕಾರುಗಳು ಹಾಗೂ ಟ್ಯಾಕ್ಸಿಗಳಲ್ಲಿ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಸಿಸ್ಟಮ್ (VLTS) ಅಳವಡಿಕೆಯನ್ನು ಚುರುಕುಗೊಳಿಸಲು ಆದೇಶಿಸಲಾಗಿದೆ.

ಪ್ರಾಯೋಗಿಕ ಯೋಜನೆಯ ಯಶಸ್ಸಿನ ನಂತರ ಸ್ಮಾರ್ಟ್ ಕಾರ್ಡ್ ವಿತರಣೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಸಾರಿಗೆ ಇಲಾಖೆಯ ಅಂದಾಜಿನ ಪ್ರಕಾರ, ಮುಂದಿನ 6-8 ತಿಂಗಳುಗಳಲ್ಲಿ ರಾಜ್ಯದ ಎಲ್ಲಾ ಮಹಿಳಾ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ತಲುಪಿಸುವ ಗುರಿಯನ್ನು ಹೊಂದಲಾಗಿದೆ. ಶಕ್ತಿ ಯೋಜನೆಯ ಈ ಹೊಸ ಅವತಾರ ಸಂಪೂರ್ಣ ಸಾರಿಗೆ ವ್ಯವಸ್ಥೆಗೆ ಆಧುನಿಕತೆ ಮತ್ತು ಪಾರದರ್ಶಕತೆಯನ್ನು ತರಲಿದೆ.

Exit mobile version