ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಬೃಹತ್ ಬದಲಾವಣೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾರ್ವಜನಿಕ ಅರ್ಜಿ ಮತ್ತು ನಾಮನಿರ್ದೇಶನಗಳನ್ನು ಆಹ್ವಾನಿಸದೆ, 63 ಸದಸ್ಯರಿರುವ ವಿಶೇಷ ಆಯ್ಕೆ ಸಮಿತಿ ರಚಿಸಿದೆ. ಈ ಸಮಿತಿಯೇ ಅರ್ಹ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಿದೆ. ಸಮಿತಿಯ ಮೊದಲ ಸಭೆ ಅಕ್ಟೋಬರ್ 15ರಂದು ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ರಚಿತವಾದ ಈ ಸಮಿತಿಯಲ್ಲಿ 63 ಸದಸ್ಯರು ಸೇರಿದ್ದಾರೆ. ಸಚಿವ ಶಿವರಾಜ್ ತಂಗಡಗಿ ತಿಳಿಸಿದಂತೆ, ಕಳೆದ ಬಾರಿಯೂ ಸಮಿತಿ ಇತ್ತು. ಈ ಬಾರಿ ಎಲ್ಲಾ ಅಕಾಡೆಮಿ ಅಧ್ಯಕ್ಷರನ್ನು ಆಯ್ಕೆ ಸಮಿತಿಯಲ್ಲಿ ಸೇರಿಸಿದ್ದೇವೆ. ಹೀಗಾಗಿ ಸಮಿತಿಯ ಸದಸ್ಯರ ಸಂಖ್ಯೆ ಜಾಸ್ತಿಯಾಗಿದೆ. ಸಮಿತಿಯಲ್ಲಿ ಸಾಹಿತ್ಯ, ನಾಟಕ, ಶಿಕ್ಷಣ ಕ್ಷೇತ್ರಗಳಿಂದ ಒಬ್ಬರಿಂದ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿದೆ.
ಆಯ್ಕೆ ಸಮಿತಿಯಲ್ಲಿ ಮಾರುತಿ ಬೌದ್ಧೆ, ಕೆ.ಪಿ. ಸುರೇಶ್, ಇ.ಟಿ. ರತ್ನಾಕರ್ ತಳವಾರ, ಸಾಮಾಜಿಕ ಕಾರ್ಯಕರ್ತೆ ದು. ಸರಸ್ವತಿ, ಫಾದರ್ ಟಿಯೋಲ, ಸಾಹಿತಿ ಡಾ. ಮಾಲತಿ ಪಟ್ಟಣಶೆಟ್ಟಿ, ಪ್ರೊ. ಜಿ. ಅಬ್ದುಲ್ ಬಷೀರ್, ಚಂದ್ರಶೇಖರ ನಂಗ್ಲಿ, ಡಾ. ಎಂ.ಕೆ. ಮಾಸ್ಕೇರಿ ನಾಯಕ್, ಸುಬ್ಬು ಹೊಲೇಯಾರ್, ಡಿ.ಬಿ. ರಜಿಯಾ, ಸಬಿಹಾ ಭೂಮಿಗೌಡ, ರೈತ ಹೋರಾಟಗಾರ್ತಿ ಸುನಂದ ಜಯರಾಂ, ಪ್ರೊ. ಶಿವರಾಂ ಶೆಟ್ಟಿ ಅವರುಗಳು ಸೇರಿದಂತೆ ಹಲವರು ಸದಸ್ಯರಾಗಿದ್ದಾರೆ. ಎಲ್ಲಾ ಅಕಾಡೆಮಿಗಳ ಅಧ್ಯಕ್ಷರೂ ಈ ಸಮಿತಿಯ ಸದಸ್ಯರಾಗಿದ್ದಾರೆ.
ಸಚಿವ ಶಿವರಾಜ್ ತಂಗಡಗಿ ಅವರು ತಿಳಿಸಿದಂತೆ, ಅಕ್ಟೋಬರ್ 15ನೇ ತಾರೀಕು ಮೊದಲ ಸಭೆ ಕರೆದಿದ್ದೇನೆ. ಈ ಸಮಿತಿಯ ಜೊತೆ ಕನಿಷ್ಠ 2-3 ಸಭೆ ಮಾಡುತ್ತೇನೆ. ಎಲ್ಲಾ ಜಿಲ್ಲೆಗಳಿಂದ ಒಬ್ಬರು, ಇಬ್ಬರನ್ನು ಆಯ್ಕೆ ಮಾಡಿದ್ದೇವೆ. ಸಮಿತಿಯು ಮೆರಿಟ್ ಮೇಲೆ ಆಯ್ಕೆ ಮಾಡಲಿದೆ ಎಂದು ಸಚಿವರು ತಿಳಿಸಿದ್ದಾರೆ. ಹೀಗಾಗಿ ಎಲ್ಲರೂ ಸಲಹೆ ನೀಡಲಿ ಅಂತ ನಾವು ಸಮಿತಿ ಮಾಡಿದ್ದೇವೆ ಎಂದು ಹೇಳಿದರು.