ಯತ್ನಾಳ್ ಸಂಚಲನ : ದೇವೇಗೌಡರನ್ನು ಬಿಟ್ಟರೆ.. ಪಕ್ಷ ಕಟ್ಟಿ ಗೆದ್ದವರಿಲ್ಲ : ಏನ್ ಹೇಳುತ್ತೆ ಇತಿಹಾಸ..?

Untitled design 2025 03 31t154935.134

ರಾಜ್ಯದಲ್ಲೀಗ ಬಸನಗೌಡ ಪಾಟೀಲ ಯತ್ನಾಳ್ ಹೊಸ ಪಕ್ಷ ಕಟ್ಟೋ ಸೂಚನೆ ಕೊಟ್ಟಿದ್ದಾರೆ. ಹೊಸ ಪಕ್ಷ ಕಟ್ಟಿದ ತಕ್ಷಣ, ಅದು ಗೆದ್ದೇಬಿಡುತ್ತೆ.. ಬಿಜೆಪಿಯನ್ನೋ.. ಕಾಂಗ್ರೆಸ್ಸನ್ನೋ.. ಜೆಡಿಎಸ್ ಪಕ್ಷವನ್ನೋ ಹೀನಾಯ ಸ್ಥಿತಿಗೆ ತಂದು ಬಿಡುತ್ತೆ ಅನ್ನೋ ವಾದವನ್ನ ಯತ್ನಾಳ್ ಅವರ ಅಭಿಮಾನಿಗಳು ಹೇಳಬಹುದು. ಆದರೆ ಇತಿಹಾಸ ಹೇಳೋದೇ ಬೇರೆ. ರಾಜ್ಯದಲ್ಲಿ ಹೊಸ ಹೊಸ ರಾಜಕೀಯ ಪಕ್ಷಗಳ ಉದ್ಭವ ಹೊಸದೇನಲ್ಲ. ಆದರೆ ಇಷ್ಟೂ ವರ್ಷಗಳ ಇತಿಹಾಸದಲ್ಲಿ ಗೆದ್ದಿರೋದು ಹೊಸ ಪಕ್ಷ ಕಟ್ಟಿ ಗೆದ್ದಿರೋದು ಒಬ್ಬರೇ ಒಬ್ಬ ನಾಯಕ. ಇದು ಅಚ್ಚರಿ ಎನಿಸಿದರೂ ಸತ್ಯ. ಹಾಗಂತ ಪಕ್ಷ ಕಟ್ಟಿದ್ದವರೇನೂ ಸಾಮಾನ್ಯ ನಾಯಕರಲ್ಲ. ಅಂತದ್ದೊಂದು ಇತಿಹಾಸವನ್ನ ನೋಡೋದಾದ್ರೆ..

ಕರ್ನಾಟಕ ಕ್ರಾಂತಿ ರಂಗ : 1979
ಪಕ್ಷ ಸ್ಥಾಪಿಸಿದವರು : ದೇವರಾಜ ಅರಸು
1979ರಲ್ಲಿ ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರನ್ನು ಇಂದಿರಾ ಗಾಂಧಿ ಉಚ್ಚಾಟನೆ ಮಾಡಿದ್ದರು. ಚಿಕ್ಕಮಗಳೂರು ಕ್ಷೇತ್ರದಿಂದ ಇಂದಿರಾ ಗೆದ್ದರಲ್ಲ, ಆಗ ಚಿಕ್ಕಮಗಳೂರಿನಲ್ಲಿ ಎಲ್ಲಿ ಹೋದರೂ, ದೇವರಾಜ ಅರಸು ಅವರಿಗೆ ಇಂದಿರಾ ಗಾಂಧಿಗಿಂತ ಹೆಚ್ಚು ಜಯಘೋಷ, ಚಪ್ಪಾಳೆ ಬೀಳುತ್ತಿದ್ದವಂತೆ. ಇದನ್ನು ಸಹಿಸಿಕೊಳ್ಳದ ಸಂಜಯ್ ಗಾಂಧಿ, ಬಂಗಾರಪ್ಪನವರ ನೇತೃತ್ವದಲ್ಲೊಂದು ಸಮಿತಿ ಮಾಡಿ, ರಾತ್ರೋರಾತ್ರಿ ಅರಸು ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದರಂತೆ. ಅದಾದ ನಂತರ ದೇವರಾಜ ಅರಸು ಕರ್ನಾಟಕ ಕ್ರಾಂತಿರಂಗ ಹುಟ್ಟುಹಾಕಿದರು. ಆದರೆ, ಯಶಸ್ವಿಯಾಗಲಿಲ್ಲ. ಅರಸು ಅವರ ಪಕ್ಷ ಒಂದೇ ಒಂದು ಕ್ಷೇತ್ರ ಗೆದ್ದಿತ್ತು. ವಿಚಿತ್ರ ಎಂದರೆ ಅದಾದ ಮೇಲೆ ಯಾವ ಅರಸು ವಿರುದ್ಧ ಉಚ್ಚಾಟನೆಯ ಶಿಫಾರಸು ಮಾಡಿದ್ದರೋ, ಅದೇ ಬಂಗಾರಪ್ಪ, ಕ್ರಾಂತಿರಂಗವನ್ನು ಮುನ್ನಡೆಸಿದರು. ಅವರೂ ಗೆಲ್ಲಲಿಲ್ಲ. ಮುಂದೆ ಕ್ರಾಂತಿರಂಗ ಕಾಂಗ್ರೆಸ್ ಜೊತೆ ವಿಲೀನವಾಯ್ತು.

ADVERTISEMENT
ADVERTISEMENT

1996ರಲ್ಲಿ ಕೆಸಿಪಿ ಕಟ್ಟಿದ್ದ ಬಂಗಾರಪ್ಪ
ಕರ್ನಾಟಕ ಕಾಂಗ್ರೆಸ್ ಪಕ್ಷ ಸ್ಥಾಪನೆ
ಶೇ.8.5 ರಷ್ಟು ಮತ, 6 ಕ್ಷೇತ್ರ ಗೆಲುವು
1998ರಲ್ಲಿ ಕರ್ನಾಟಕ ವಿಕಾಸ ಪಕ್ಷ. ಸೋಲು

1996ರಲ್ಲಿ ರಾಜ್ಯ ರಾಜಕೀಯ ಇತಿಹಾಸದಲ್ಲಿ ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಿದ್ದು ಸಾರೆಕೊಪ್ಪ ಬಂಗಾರಪ್ಪ. ಕರ್ನಾಟಕ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದ ಬಂಗಾರಪ್ಪ, ಗೆದ್ದಿದ್ದು 6 ಕ್ಷೇತ್ರಗಳಲ್ಲೇ ಆದರೂ, ಶೇ.8.5ರಷ್ಟು ವೋಟು ಪಡೆದಿದ್ದರು. ಲೋಕಸಭೆ ಪ್ರವೇಶಸಿದ್ದರು. ಅದಾದ ಮೇಲೆ ಎರಡೇ ವರ್ಷಗಳಲ್ಲಿ ಕರ್ನಾಟಕ ವಿಕಾಸ ಪಕ್ಷ ಎಂದು ಹೆಸರು ಬದಲಾಯಿತು. ಆದರೆ ಗೆಲ್ಲಲು ಸಾಧ್ಯವಾಗಲಿಲ್ಲ.ಮುಂದೆ ಅದೇ ಬಂಗಾರಪ್ಪ ಮತ್ತೆ ಕಾಂಗ್ರೆಸ್ಸ ಸೇರಿದರು. ಗೆದ್ದರು. ಅದಾದ ಮೇಲೆ ಬಿಜೆಪಿ ಸೇರಿದರು. ಗೆದ್ದರು. ಸಮಾಜವಾದಿ ಪಕ್ಷ ಸೇರಿದರು. ಗೆದ್ದರು. ನಂತರ ಜಾತ್ಯತೀತ ಜನತಾ ದಳ ಸೇರಿ, ಸೋತರು.

2012ರಲ್ಲಿ ಯಡಿಯೂರಪ್ಪ ಕಟ್ಟಿದ ಕೆಜೆಪಿ
2013ರಲ್ಲಿ ಕೆಜೆಪಿಗೆ ಶೇ.10ರಷ್ಟು ಮತ
203 ಕ್ಷೇತ್ರಗಳಲ್ಲಿ ಸ್ಪರ್ಧೆ, 6ರಲ್ಲಿ ಗೆಲುವು
2014ರಲ್ಲಿ ಮತ್ತೆ ಬಿಜೆಪಿ ಸೇರಿದ ಯಡಿಯೂರಪ್ಪ

ರಾಜ್ಯದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ್ದು ಯಡಿಯೂರಪ್ಪ ಸ್ಥಾಪಿಸಿದ ಕರ್ನಾಟಕ ಜನತಾ ಪಕ್ಷ. 2012ರಲ್ಲಿ ಯಡಿಯೂರಪ್ಪ ಸ್ಥಾಪಿಸಿದ್ದ ಕೆಜೆಪಿ, ಶೇ.10ರಷ್ಟು ವೋಟು ಪಡೆಯಿತು. 6 ಕ್ಷೇತ್ರಗಳಲ್ಲಿ ಗೆದ್ದಿತ್ತು. ಆದರೆ, ಬಿಜೆಪಿಯನ್ನು 30-35 ಕ್ಷೇತ್ರಗಳಲ್ಲಿ ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಅದಾದ ನಂತರ ಒಂದೇ ವರ್ಷದಲ್ಲಿ ಯಡಿಯೂರಪ್ಪ ಬಿಜೆಪಿ ಸೇರಿದರು. 2014ರಲ್ಲಿ ಬಿಜೆಪಿ ಸೇರ್ಪಡೆಯಾದರು. ಅಲ್ಲಿಗೆ ಕರ್ನಾಟಕ ಜನತಾ ಪಕ್ಷ, ಇತಿಹಾಸದ ಪುಟ ಸೇರಿತು.

ಗೆದ್ದಿದ್ದು ಒಬ್ಬರೇ.. ದೇವೇಗೌಡ..!
1999ರಲ್ಲಿ ಜಾತ್ಯತೀತ ಜನತಾ ದಳ
ಈಗಲೂ ಅಸ್ಥಿತ್ವದಲ್ಲಿರುವ ಜೆಡಿಎಸ್
ಜನತಾ ದಳ ಇಬ್ಭಾಗವಾದಾಗ 1999ರಲ್ಲಿ ದೇವೇಗೌಡರ ನೇತೃತ್ವದಲ್ಲಿ ರಚನೆಯಾದ ಜಾತ್ಯತೀತ ಜನತಾ ದಳ. ಇಂದಿಗೂ ಅಸ್ಥಿತ್ವದಲ್ಲಿದೆ. ಜಾತ್ಯತೀತ ಜನತಾ ದಳಕ್ಕೆ ದೇವೇಗೌಡರೇ ಸಾರಥಿ. ರಾಮಕೃಷ್ಣ ಹೆಗಡೆ ಉಚ್ಚಾಟನೆ ನಂತರ ಛಿದ್ರವಾಗುತ್ತಾ ಸಾಗಿದ ಜನತಾ ದಳ, ಬಿಹಾರ, ಒಡಿಶಾ, ಉತ್ತರ ಪ್ರದೇಶ, ಮಹಾರಾಷ್ಟ್ರ.. ಹೀಗೆ ಹಲವು ರಾಜ್ಯಗಳಲ್ಲಿ ವಿಭಜನೆಯಾಗುತ್ತಾ ಹೋಗಿ, ಕರ್ನಾಟಕದಲ್ಲಿ ಜಾತ್ಯತೀತ ಜನತಾ ದಳವಾಯ್ತು.

ಜೆಡಿಎಸ್ ಪಕ್ಷ ಎರಡು ಬಾರಿ ಸಿಎಂ ಪಟ್ಟಕ್ಕೇರಿ ಅಧಿಕಾರ ಅನುಭವಿಸಿದೆ. ಈಗಲೂ ಕೂಡಾ 18 ಶಾಸಕರು, ಇಬ್ಬರು ಸಂಸದರ ಸ್ಥಾನದೊಂದಿಗೆ ಅಸ್ಥಿತ್ವದಲ್ಲಿದೆ. ಜೆಡಿಎಸ್‌ಗೆ ಮಾಜಿ ಪ್ರಧಾನಿ ದೇವೇಗೌಡರು, ಪ್ರಧಾನಿ ಹುದ್ದೆಗೇರಿದ ಏಕೈಕ ಕನ್ನಡಿಗ, ಒಕ್ಕಲಿಗ ಸಮುದಾಯದ ದೊಡ್ಡ ವೋಟ್ ಬ್ಯಾಂಕ್ ನೆರವಾಗುತ್ತಲೇ ಇದೆ. ರಾಜಕೀಯ ಪಕ್ಷ ಮತ್ತು ಕರ್ನಾಟಕದ ಇತಿಹಾಸ ನೋಡಿದರೆ, ಎಕೆ ಸುಬ್ಬಯ್ಯ , ವಿಜಯ ಸಂಕೇಶ್ವರ , ವಿಜಯ್ ಮಲ್ಯ , ಬಿ.ಶ್ರೀರಾಮುಲು , ಜನಾರ್ದನ ರೆಡ್ಡಿ, ವಾಟಾಳ್ ನಾಗರಾಜ್ ಇವರೆಲ್ಲ ರಾಜಕೀಯ ಪಕ್ಷ ಸ್ಥಾಪಿಸಿ ಸೋತವರು. ಸೋತು ಗೆದ್ದವರು. ಸೋಲಿಸಿ ಗೆದ್ದವರು.

ದೇವೇಗೌಡರ ಜತೆ ಅಂದು ಸಿದ್ದರಾಮಯ್ಯ, ಎಂಪಿ ಪ್ರಕಾಶ್, ಸಿ.ಎಂ ಇಬ್ರಾಹಿಂ, ಪಿಜಿ ಆರ್ ಸಿಂದ್ಯಾ ಅಂತ ಘಟಾನುಘಟಿ ನಾಯಕರಿದ್ರು..ಸಮುದಾಯಕ್ಕೆ ‌ಒಬ್ಬರು ಇಬ್ಬರು ಪ್ರಮುಖ ನಾಯಕರು ಜೆಡಿಎಸ್ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಹೀಗಾಗಿಯೇ 2004 ರಲ್ಲಿ ಜೆಡಿಎಸ್ 58 ಸ್ಥಾನ ಗೆಲ್ಲಲು ಕಾರಣವಾಯಿತು. ಆದ್ರೆ ಬಳಿಕ ದೇವೇಗೌಡರ ಕುಟುಂಬ ರಾಜಕಾರಣ ಹಾಗೂ ಒಕ್ಕಲಿಗ ಸಮುದಾಯದ ನಾಯಕರ ಬೆಳವಣಿಗೆ ಜತೆಗೆ ಇತರೆ ಸಮುದಾಯದ ಪರ್ಯಾಯ ನಾಯಕರ ಬೆಳವಣಿಗೆ ಸಹಿಸುತ್ತಿಲ್ಲ ಅಂತ ಸಿದ್ದರಾಮಯ್ಯ,ಇಬ್ರಾಹಿಂ, ಪಿಜಿ ಆರ್ ಸಿಂದ್ಯಾ,ಉಗ್ರಪ್ಪ, ಮಹಾದೇವಪ್ಪ, ಮಹಾದೇವ ಪ್ರಸಾದ್ ಹಾಗೂ ಎಂಪಿ ಪ್ರಕಾಶ್ ಜೆಡಿಎಸ್ ಇಂದ ಹೊರಬಂದ್ರು..

ಇದು ನಡೆದಿದ್ದು ಕೇವಲ ನಾಲ್ಕು ವರ್ಷಗಳಲ್ಲಿ(2005-08) ಆದಾದ ಬಳಿಕ ಜೆಡಿಎಸ್ ಅಪ್ಪ‌ ಮಕ್ಕಳ ಪಕ್ಷ ಅಂತ ಬಿಂಬಿಸುವಲ್ಕಿ ಸಿದ್ದರಾಮಯ್ಯ ಅಂಡ್ ಟೀಮ್ ಸಕ್ಸಸ್ ಆಗಿ ಜೆಡಿಎಸ್ 50 ಗಡಿ ದಾಟಲು ಆಗಲಿಲ್ಲ.2008ರಲ್ಲಿ ಜೆಡಿಎಸ್ ವಚನ ಭ್ರಷ್ಟ ಆರೋಪ ಹೊತ್ತು ಚುನಾವಣೆ ಎದುರಿಸಿ ಗೆದ್ದಿದ್ದು 28 ಸ್ಥಾನ,2013 ರಲ್ಲಿ ಬಿಜೆಪಿ ಭ್ರಷ್ಟಾಚಾರ ವಿರುದ್ಧ ದಾಖಲೆ ಕುಮಾರಸ್ವಾಮಿ ಬಿಡುಗಡೆ ಮಾಡಿದ್ರು ಸುದ್ದಿ ಗೆ ಅಷ್ಟೇ ಸಿಮೀತವಾಗಿ ಟಿವಿ ಪೇಪರ್ ಗಳಲ್ಲಿ ಹೆಡ್ ಲೈನ್ ಗೆ ಸಿಮೀತವಾಗಿದ್ದು ಬಿಟ್ರೆ ಚುನಾವಣೆಯಲ್ಲಿ ಮತದಾರನ ಮನ ಗೆಲ್ಲಲು ಸಾಧ್ಯವಾಗದೇ ಗೆದ್ದಿದ್ದು ಕೇವಲ 44 ಸ್ಥಾನ..2018 ರಲ್ಲಿ ಗೆದ್ದಿದ್ದು ಕೇವಲ 36 ಸ್ಥಾನ,2023 ರಲ್ಲಿ ಗೆದ್ದಿದ್ದು ಕೇವಲ 19 ಸ್ಥಾನ ಅರ್ಥಾತ್‌ ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಪೈಪೋಟಿ ನಡುವೆ ಮೂರನೇ ಪಕ್ಷ ಅಷ್ಟೊಂದು ದೊಡ್ಡ ಮಟ್ಟದ ರಾಜಕೀಯ ಲಾಭ ಪಡೆಯುವ ಅವಕಾಶ ಇಲ್ಲ ಅನ್ನೋದು ಜೆಡಿಎಸ್ ಪರಿಸ್ಥಿತಿ ನೋಡಿದ್ರೆ ಗೊತ್ತಾಗುತ್ತೆ..

ಇವರೆಲ್ಲರ ಜೊತೆಗೆ ಯತ್ನಾಳ್ ಅವರು ಹಿಂದುತ್ವದ ಆಧಾರದಲ್ಲಿ ಕಟ್ಟುತ್ತಿರುವ ಹೊಸ ಪಕ್ಷ ಏನಾಗಲಿದೆ.. ಅದೇ ಕುತೂಹಲ. ಸದ್ಯಕ್ಕೆ ಹೊಸ ಪಕ್ಷದ ಘೋಷಣೆಯಷ್ಟೇ ಹೊರಬಿದ್ದಿದೆ. ಆ ಪಕ್ಷದ ರೂಪುರೇಷೆ ಹೊರಬಿದ್ದಿಲ್ಲ.

Exit mobile version