ಪ್ರಜ್ವಲ್ ರೇವಣ್ಣ ಪ್ರಕರಣ: ಅಪರಾಧ ಸಾಬೀತುಪಡಿಸಿದ SIT ಅಧಿಕಾರಿಗಳಿಗೆ ₹25 ಲಕ್ಷ ಬಹುಮಾನ

Untitled design 2026 01 23T160146.233

ಬೆಂಗಳೂರು: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ವೀಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಅತ್ಯಂತ ಚಾಕಚಕ್ಯತೆಯಿಂದ ತನಿಖೆ ನಡೆಸಿ, ಅಪರಾಧವನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾದ ವಿಶೇಷ ತನಿಖಾ ತಂಡದ (SIT) 30 ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ರಾಜ್ಯ ಪೊಲೀಸ್ ಇಲಾಖೆಯು 25 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಘೋಷಿಸಿದೆ.

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದಿದ್ದ ಅತ್ಯಾಚಾರ ಮತ್ತು ಅಶ್ಲೀಲ ವೀಡಿಯೋ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರವು ಎಸ್‌ಐಟಿಗೆ ವಹಿಸಿತ್ತು. ಹತ್ತಾರು ಸಂತ್ರಸ್ತೆಯರ ಹೇಳಿಕೆ ಪಡೆಯುವುದು, ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸುವುದು ಮತ್ತು ವಿದೇಶಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಮರಳಿ ಕರೆತರುವಲ್ಲಿ ಈ ತಂಡ ಅತ್ಯಂತ ಶ್ರಮವಹಿಸಿತ್ತು. ತನಿಖಾ ತಂಡವು ನ್ಯಾಯಾಲಯಕ್ಕೆ ಸಲ್ಲಿಸಿದ ಸಾಕ್ಷ್ಯಧಾರಗಳು ಪ್ರಜ್ವಲ್ ರೇವಣ್ಣ ಅವರ ಅಪರಾಧವನ್ನು ಸಾಬೀತುಪಡಿಸಲು ಪ್ರಮುಖ ಕಾರಣವಾಗಿವೆ. ಈ ಕಾರ್ಯವೈಖರಿಯನ್ನು ಮೆಚ್ಚಿ ಪೊಲೀಸ್ ಮಹಾನಿರ್ದೇಶಕರು ಈ ಪ್ರೋತ್ಸಾಹ ಧನವನ್ನು ಘೋಷಿಸಿದ್ದಾರೆ.

ಬಹುಮಾನ ಪಡೆದ ಪ್ರಮುಖ ಅಧಿಕಾರಿಗಳ ಪಟ್ಟಿ

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ 30 ಮಂದಿ ಸಿಬ್ಬಂದಿಗಳಲ್ಲಿ ಪ್ರಮುಖ ಅಧಿಕಾರಿಗಳೆಂದರೆ, ಎಸ್‌ಐಟಿ ಮುಖ್ಯಸ್ಥರಾದ ಬಿ.ಕೆ. ಸಿಂಗ್, ಡಿಐಜಿ ಸೀಮಾ ಲಾಟ್ಕರ್,ಎಸ್‌ಪಿ ಸುಮನ್ ಡಿ. ಪನ್ನೇಕರ್, ಎಸ್‌ಪಿ  ಸಿ.ಎ. ಸೈಮನ್‌, ಎಸಿಪಿ ಸತ್ಯನಾರಾಯಣ ಸಿಂಗ್‌ ಜೊತೆಗೆ ಇನ್ಸ್‌ಪೆಕ್ಟರ್‌ಗಳಾದ ರಾವ್ ಗಣೇಶ್ ಜನಾರ್ಧನ್, ಶೋಭಾ ಜಿ, ಸುಮಾರಾಣಿ, ಹೇಮಂತ್ ಕುಮಾರ್ ಸೇರಿದಂತೆ ಒಟ್ಟು 30 ಜನರಿಗೆ ಈ ಬಹುಮಾನ ಸಂದಿದೆ.

ಪ್ರಕರಣದ ಹಿನ್ನೆಲೆ

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪೆನ್ ಡ್ರೈವ್ ಮೂಲಕ ಸೋರಿಕೆಯಾಗಿದ್ದ ಸಾವಿರಾರು ಅಶ್ಲೀಲ ವೀಡಿಯೋಗಳು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದವು. ಸಂತ್ರಸ್ತೆಯರು ನೀಡಿದ ದೂರಿನ ಮೇರೆಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದಂತಹ ಗಂಭೀರ ಪ್ರಕರಣಗಳು ದಾಖಲಾಗಿದ್ದವು. ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸುವಲ್ಲಿ ಮತ್ತು ಕಾನೂನು ಚೌಕಟ್ಟಿನೊಳಗೆ ಶಿಕ್ಷೆ ಕೊಡಿಸುವಲ್ಲಿ ಎಸ್‌ಐಟಿ ಅಧಿಕಾರಿಗಳ ಪಾತ್ರ ಅತಿ ದೊಡ್ಡದಾಗಿದೆ. ದಕ್ಷ ಅಧಿಕಾರಿಗಳ ಇಂತಹ ತಂಡಗಳಿಗೆ ಬಹುಮಾನ ಘೋಷಿಸುವುದು ಇಲಾಖೆಯ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

Exit mobile version