ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44ನ ಚಿನ್ನತೇಕೂರು ಗ್ರಾಮದ ಬಳಿ ಅಕ್ಟೋಬರ್ 24,2025 ರಂದು ಮುಂಜಾನೆ 3.30 ಗಂಟೆ ಸುಮಾರಿಗೆ ಸಂಭವಿಸಿದ ಖಾಸಗಿ ಬಸ್ನ ಅಗ್ನಿ ದುರಂತವು ರಾಜ್ಯಾದ್ಯಂತ ಆಘಾತವನ್ನುಂಟುಮಾಡಿದೆ. ಹೈದರಾಬಾದ್ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾವೇರಿ ಟ್ರಾವೆಲ್ಸ್ನ ವೋಲ್ವೋ ಸ್ಲೀಪರ್ ಬಸ್, ವಿರುದ್ಧ ದಿಕ್ಕಿನಿಂದ ಬಂದ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿಗೆ ಆಹುತಿಯಾಗಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನಗೊಂಡು ಮೃತರಾಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ದುರಂತದಲ್ಲಿ ಕರ್ನಾಟಕದ ಪ್ರಯಾಣಿಕರು ಇದ್ದಾರೆಯೇ ಎಂದು ಪತ್ತೆಹಚ್ಚಲು ಕೂಡಲೇ ಆರ್ಟಿಒ ಅಧಿಕಾರಿಗಳ ತಂಡವನ್ನು ಕರ್ನೂಲು ಬಳಿಯ ಬಾಗೇಪಲ್ಲಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಚಿವ ರಾಮಲಿಂಗಾರೆಡ್ಡಿ ಅವರು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಬೆಳಗ್ಗೆಯೇ ಕರ್ನೂಲು ದುರಂತದ ಬಗ್ಗೆ ಮಾಹಿತಿ ಸಿಕ್ಕಿತು. ಈ ಘಟನೆಯು ಅತ್ಯಂತ ದುಃಖಕರವಾಗಿದ್ದು, ಹಲವು ಜೀವಗಳು ಬಲಿಯಾಗಿರುವುದು ಆಘಾತಕಾರಿಯಾಗಿದೆ. ಕರ್ನಾಟಕದಿಂದ ಯಾವುದೇ ಪ್ರಯಾಣಿಕರು ಈ ಬಸ್ನಲ್ಲಿ ಇದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆರ್ಟಿಒ ಅಧಿಕಾರಿಗಳ ತಂಡವನ್ನು ಕರ್ನೂಲು ಬಳಿಯ ಬಾಗೇಪಲ್ಲಿಗೆ ಕಳುಹಿಸಲಾಗಿದೆ. ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ಬಸ್ನಲ್ಲಿ ಸುಮಾರು 40-42 ಮಂದಿ ಪ್ರಯಾಣಿಕರು ಇದ್ದರು, ಮತ್ತು ರಾತ್ರಿಯ ಸಮಯದಲ್ಲಿ ಬಹುತೇಕರು ಗಾಢ ನಿದ್ರೆಯಲ್ಲಿದ್ದರು. ಘಟನೆಯ ಸಮಯದಲ್ಲಿ ಬಸ್ ವಿರುದ್ಧ ದಿಕ್ಕಿನಿಂದ ಬಂದ ಬೈಕ್ಗೆ ಡಿಕ್ಕಿ ಹೊಡೆದಿತು. ಬೈಕ್ ಬಸ್ನ ಕೆಳಗೆ ಸಿಲುಕಿ ಸುಮಾರು 400 ಮೀಟರ್ ಎಳೆದುಕೊಂಡು ಹೋಗಿತು, ಇದರಿಂದ ಬೈಕ್ನ ಪೆಟ್ರೋಲ್ ಟ್ಯಾಂಕ್ ಸಿಡಿದು ಬೆಂಕಿಗೆ ಕಾರಣವಾಯಿತು. ಕ್ಷಣಮಾತ್ರದಲ್ಲಿ ಬೆಂಕಿ ಬಸ್ಗೆ ವ್ಯಾಪಿಸಿತು, ಮತ್ತು ಚಾಲಕ ಮತ್ತು ಸಹಾಯಕ ಚಾಲಕ ತಕ್ಷಣ ಓಡಿಹೋದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ನಿರ್ಲಕ್ಷ್ಯದಿಂದಾಗಿ, ಬಸ್ನೊಳಗೆ ಸಿಲುಕಿದ ಪ್ರಯಾಣಿಕರಿಗೆ ತಪ್ಪಿಸಿಕೊಳ್ಳಲು ಸಮಯವೇ ಸಿಗಲಿಲ್ಲ, ಇದರಿಂದ 20ಕ್ಕೂ ಹೆಚ್ಚು ಮಂದಿ ಸುಟ್ಟು ಕರಕಲಾದರು.
ಕೆಲವು ಪ್ರಯಾಣಿಕರು ಧೈರ್ಯದಿಂದ ಕಿಟಕಿಗಳ ಗಾಜು ಒಡೆದು ತಪ್ಪಿಸಿಕೊಂಡರು. ರಮೇಶ್ ಎಂಬ ಪ್ರಯಾಣಿಕನೊಬ್ಬ ಕಿಟಕಿಯನ್ನು ಒಡೆದು, ಬನ್ನಿ, ಬನ್ನಿ ಎಂದು ಕೂಗಾಡಿ ಆರು ಜನರನ್ನು ರಕ್ಷಿಸಿದ. ಒಟ್ಟು 18ಮಂದಿ ಗಾಯಗೊಂಡ ಸ್ಥಿತಿಯಲ್ಲಿ ಪ್ರಾಣಾಪಾಯದಿಂದ ತಪ್ಪಿಸಿಕೊಂಡರು. ಗಾಯಾಳುಗಳನ್ನು ಕರ್ನೂಲು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಗುರುತು ಪತ್ತೆಗೆ ಫರೆನ್ಸಿಕ್ ತಂಡಗಳು ಕಾರ್ಯನಿರ್ವಹಿಸುತ್ತಿವೆ, ಆದರೆ ಶವಗಳ ದಹನದಿಂದ ಗುರುತಿಸುವಿಕೆ ಕಷ್ಟಕರವಾಗಿದೆ.





