ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ಹಲವು ಕಡೆ ದಾಳಿ ನಡೆಸಿದ್ದಾರೆ. ಜನರಿಂದ ಲಂಚ ಪಡೆದು, ಸರ್ಕಾರಕ್ಕೆ ವಂಚಿಸಿ ಅಕ್ರಮವಾಗಿ ಗಳಿಸಿದ ಕೋಟಿ ಕೋಟಿ ಮೌಲ್ಯದ ಆಸ್ತಿಯನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಪ್ರಮುಖವಾಗಿ ಈ ನಾಲ್ವರ ಆಸ್ತಿ ಗಲಿಕೆಯನ್ನ ನೋಡೊ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
1. ಮಾರುತಿ ಯಶ್ವಂತ್ ಮಾಳ್ (ಸಿಇಒ, ಸಿದ್ದಾಪುರ):
ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸಿದ್ದಾಪುರದ ಕೋಲ್ಸಿರಸಿ ಸಹಕಾರ ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಮಾರುತಿ ಯಶ್ವಂತ್ ಮಾಳ್ ಅವರ ಬಳಿ ಅತೀ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿದೆ.
7 ನಿವೇಶನಗಳು, 4 ಬೃಹತ್ ವಾಸದ ಮನೆಗಳು ಹಾಗೂ ಒಂದು ವಾಣಿಜ್ಯ ಸಂಕೀರ್ಣ ಪತ್ತೆಯಾಗಿದೆ. ಇವುಗಳ ಮೌಲ್ಯವೇ ಸುಮಾರು 9.17 ಕೋಟಿ ರೂ.ಗಳಿಗೂ ಅಧಿಕ ಸ್ಥಿರಾಸ್ತ ಪತ್ತೆಯಾಗಿದೆ. ಹಾಗೂ 62 ಲಕ್ಷ ರೂ. ಮೌಲ್ಯದ ಐಷಾರಾಮಿ ವಾಹನಗಳು ಹಾಗೂ ಲಕ್ಷಾಂತರ ರೂ. ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಒಟ್ಟಾರೆ ಬರೋಬ್ಬರಿ 9.89 ಕೋಟಿ ರೂಪಾಯಿ ಇವರ ಬಳಿ ಸಿಕ್ಕಿರುವುದಾಗಿ ತಿಳಿದುಬಂದಿದೆ.
2. ಡಿ. ವಿಜಯಲಕ್ಷ್ಮೀ (ಎಇಇ, ರಾಯಚೂರು):
ರಾಯಚೂರಿನ ಸಿಂಧನೂರು ಉಪ ವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ವಿಜಯಲಕ್ಷ್ಮೀ ಅವರ ಆಸ್ತಿಗಳು ಈ ಕೆಳಗಿನಂತೆ ಇವೆ.
ಇವರು ಕೇವಲ ನಿವೇಶನಗಳನ್ನಷ್ಟೇ ಅಲ್ಲದೆ, ಬರೋಬ್ಬರಿ 73 ಎಕರೆ 31 ಗುಂಟೆ ಕೃಷಿ ಜಮೀನನ್ನು ಹೊಂದಿದ್ದಾರೆ. 12 ನಿವೇಶನ ಮತ್ತು 2 ಮನೆಗಳು ಇವರ ಹೆಸರಿನಲ್ಲಿವೆ. ಇವರ ಬಳಿ ಸಿಕ್ಕ ಒಟ್ಟು ಆಸ್ತಿ ಮೌಲ್ಯ 4.09 ಕೋಟಿ ರೂಪಾಯಿಯಾಗಿದೆ.
3. ಮಲ್ಲಪ್ಪ ಹನಮಂತಪ್ಪ ಯರಜರಿ (ಕೃಷಿ ಇಲಾಖೆ, ವಿಜಯಪುರ):
ಬಸವನಬಾಗೇವಾಡಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಇವರ ಬಳಿ ಭಾರೀ ಪ್ರಮಾಣದ ನಗದು ಮತ್ತು ಚಿನ್ನ ಪತ್ತೆಯಾಗಿದೆ.
14.42 ಲಕ್ಷ ರೂ. ನಗದು, ಬರೋಬ್ಬರಿ 86.47 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಹಾಗೂ 21 ಲಕ್ಷ ರೂ. ಮೌಲ್ಯದ ವಾಹನಗಳು ಪತ್ತೆಯಾಗಿವೆ. ಜೊತೆಗೆ 20 ಎಕರೆ ಕೃಷಿ ಭೂಮಿಯನ್ನೂ ಇವರು ಹೊಂದಿದ್ದಾರೆ. ಇವತ ಬಳಿ ಒಟ್ಟು ಸುಮಾರು 3.17 ಕೋಟಿ ರೂಪಾಯಿ ಪತ್ತೆಯಾಗಿದೆ.
4. ಶ್ಯಾಮಸುಂದರ್ ಮಾರುತಿ ಕಾಂಬ್ಳೆ (ಬಾಗಲಕೋಟೆ ಜಿಲ್ಲಾ ಪಂಚಾಯಿತಿ):
ಬಾಗಲಕೋಟೆ ಜಿ.ಪಂ. ಸಹಾಯಕ ಕಾರ್ಯದರ್ಶಿಯಾಗಿರುವ ಇವರಿಗೆ ಸಂಬಂಧಿಸಿದ ಮನೆ ಹಾಗೂ ಕಚೇರಿಯ ಮೇಲೂ ಲೋಕಾಯುಕ್ತ ದಾಳಿ ನಡೆಸಿದೆ. ಇವರು 15 ನಿವೇಶನ ಮತ್ತು 3 ಮನೆಗಳನ್ನು ಹೊಂದಿದ್ದಾರೆ. ಸುಮಾರು 2.04 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸರ್ಕಾರಿ ಹುದ್ದೆಯಲ್ಲಿದ್ದುಕೊಂಡು ಸಾರ್ವಜನಿಕರ ಸೇವೆಯ ಬದಲು ಸ್ವಂತ ಆಸ್ತಿ ಹೆಚ್ಚಿಸಿಕೊಳ್ಳುವುದರಲ್ಲೇ ನಿರತರಾಗಿದ್ದ ಈ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ತೀವ್ರಗೊಂಡಿದೆ.





