ಹಣಕ್ಕಾಗಿ ಹೆತ್ತ ಮಗುವನ್ನೇ ಮಾರಿದ ದಂಪತಿ: ನರ್ಸ್ ಸೇರಿದಂತೆ ಮೂವರ ಬಂಧನ

Untitled design 2025 05 29t144000.253

ಚಿಕ್ಕಮಗಳೂರು : ಕೇವಲ ಎರಡು ದಿನದ ಹೆಣ್ಣು ಮಗುವನ್ನು 1 ಲಕ್ಷಕ್ಕೆ ಮಾರಾಟ ಮಾಡಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹರಾವರಿ ಗ್ರಾಮದಲ್ಲಿ ನಡೆದಿದೆ. ರತ್ನ ಎಂಬ ಮಹಿಳೆ ಸದಾನಂದ ಎಂಬುವವರು ಮಗು ಮಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

 ರತ್ನ ಮತ್ತು ಸದಾನಂದ ದಂಪತಿಗೆ ಈಗಾಗಲೇ ಮೂವರು ಮಕ್ಕಳಿದ್ದು, ಆಶ್ಚರ್ಯಕರವಾಗಿ ಇಬ್ಬರನ್ನು ಈ ಹಿಂದೆಯೇ ಮಾರಾಟ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಘಟನೆಯಲ್ಲಿ ಸಹಕರಿಸಿದ ಕೊಪ್ಪ ತಾಲೂಕಿನ ಆಸ್ಪತ್ರೆಯ ನಿವೃತ್ತ ನರ್ಸ್ ಕುಸುಮ ಕೂಡ ಪೊಲೀಸರ ವಶಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ಕುಸುಮ, ಈ ವ್ಯಾಪಾರದಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಈ ಶಿಶುವನ್ನು ಕಾರ್ಕಳದ ರಾಘವೇಂದ್ರ ಎಂಬ ವ್ಯಕ್ತಿಗೆ 1 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ರಾಘವೇಂದ್ರನಿಗೆ ಈ ವಹಿವಾಟಿನಲ್ಲಿ ಯಾವ ರೀತಿಯ ಪಾತ್ರವಿತ್ತು ಎಂಬುದನ್ನು ತನಿಖೆಯ ಮೂಲಕ ಪೊಲೀಸರು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಎನ್.ಆರ್.ಪುರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ಶಿಶುವನ್ನು ರಕ್ಷಣೆ ಮಾಡಿದ್ದಾರೆ. ರಕ್ಷಿತ ಶಿಶುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದ್ದು, ಆಕೆಯ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

45 ವರ್ಷದ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿ, ಕೇವಲ ಎರಡು ದಿನಗಳಲ್ಲಿ ಅದನ್ನು ಹಣಕ್ಕೆ ಬದಲಾಯಿಸುವ ಮನಸ್ಥಿತಿಯು ಆಘಾತಕಾರಿಯಾಗಿದೆ. ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ. ಈ ದಂಪತಿಯ ಹಿಂದಿನ ಕೃತ್ಯಗಳ ಬಗ್ಗೆಯೂ ಆಳವಾದ ತನಿಖೆ ನಡೆಯುತ್ತಿದ್ದು, ಇತರ ಶಿಶು ಮಾರಾಟದ ಪ್ರಕರಣಗಳನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

Exit mobile version