ರಾಜ್ಯಾದ್ಯಂತ 4-5 ದಿನ ಭಾರೀ ಮಳೆ: 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Untitled design 2025 06 11t072050.414

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ತೀವ್ರವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಗಾಲ ತೀವ್ರ ರೂಪ ಪಡೆದಿದ್ದು, ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಮಲೆನಾಡು, ಕರಾವಳಿ ಹಾಗೂ ಇತರ ಒಳನಾಡು ಭಾಗಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ಕೆಲವು ಜಿಲ್ಲೆಗಳಿಗೆ ರೆಡ್ ಮತ್ತು ಆರೆಂಜ್ ಅಲರ್ಟ್‌ ಕೂಡ ಘೋಷಿಸಲಾಗಿದೆ.

ಕರಾವಳಿ ಭಾಗಗಳಲ್ಲಿ ಮಳೆ ಮಿಂಚು

ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಅಬ್ಬರ ಶುರುವಾಗಿದೆ. ಗಾಳಿ ಸಹಿತ ಮಳೆ ಮತ್ತು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಜನರಲ್ಲಿ ಭೂಕುಸಿತದ ಭೀತಿ ವ್ಯಕ್ತವಾಗಿದೆ. ಕರಾವಳಿ ಪ್ರದೇಶದ ಜನತೆಗೆ ಎಚ್ಚರಿಕೆ ನೀಡಲಾಗಿದ್ದು, ಮೀನುಗಾರರಿಗೆ ಸಮುದ್ರ ಪ್ರವೇಶ ನಿಷೇಧಿಸಲಾಗಿದೆ.

ಉತ್ತರ ಒಳನಾಡಿಗೂ ಮಳೆ ಭೀತಿ

ರಾಯಚೂರು, ಧಾರವಾಡ, ಹಾವೇರಿ, ಗದಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲೂ ಮಳೆಯ ಸಾಧ್ಯತೆ ಇರುವುದರಿಂದ ಜನತೆ ಎಚ್ಚರದಿಂದಿರುವಂತೆ ಸೂಚಿಸಲಾಗಿದೆ. ಈ ಪ್ರದೇಶಗಳಲ್ಲಿ ಸಹಜವಾಗಿ ಬರುವ ಮಳೆ ಈಗ ಗಾಳಿಯೊಂದಿಗೆ ಬರುತ್ತಿದ್ದು, ಹಲವೆಡೆ ವಿದ್ಯುತ್ ವ್ಯತ್ಯಯ, ಮರಗಳ ಕುಸಿತ ಸಂಭವಿಸುವ ಸಾಧ್ಯತೆ ಇದೆ.

ಮಲೆನಾಡಿನ ಮತ್ತೊಂದು ಪ್ರಮುಖ ಭಾಗವಾದ ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲೂ ಗುಡುಗು ಸಹಿತ ಮಳೆ ನಿರೀಕ್ಷಿಸಲಾಗಿದೆ..

ಮೇ ತಿಂಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ದಾಖಲೆ ಮಟ್ಟದ ಮಳೆಯಾಗಿತ್ತು. ಆದರೆ ಜೂನ್ ಆರಂಭದಲ್ಲಿ ಮಳೆ ಸ್ವಲ್ಪ ಮಟ್ಟಿಗೆ ಶಾಂತವಾಗಿತ್ತು. ಇದೀಗ ಮತ್ತೆ ಮುಂಗಾರು ಚುರುಕಾಗಿ, ಮಳೆ ಮತ್ತೊಮ್ಮೆ ಉಗ್ರ ಸ್ವರೂಪ ಪಡೆದುಕೊಂಡಿದೆ. ಕೆಲ ದಿನಗಳ ವಿರಾಮದ ನಂತರ ಮಳೆ ಜನರಲ್ಲಿ ಆತಂಕ ಉಂಟುಮಾಡಿದೆ.

ಜೂನ್ 11ರ ರಾತ್ರಿ ಬೆಂಗಳೂರಿನಲ್ಲಿ ಮತ್ತೆ ಭಾರೀ ಮಳೆಯಾಗಿದ್ದು, ಮೆಜೆಸ್ಟಿಕ್, ಮಲ್ಲೇಶ್ವರಂ, ಶಿವಾನಂದ ಸರ್ಕಲ್, ಶೇಷಾದ್ರಿಪುರಂ ಸೇರಿದಂತೆ ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಟ್ರಾಫಿಕ್ ಜಾಮ್, ನೀರಿನ ತೊರೆ ಮತ್ತು ದಿನಚರಿಯಲ್ಲಿ ತೊಂದರೆ ಉಂಟಾಗಿದೆ. ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿ ಇನ್ನೂ ಮಳೆಯ ಅಬ್ಬರ ಹೆಚ್ಚಾಗಬಹುದು ಎಂದು ಎಚ್ಚರಿಸಿದೆ.

ಅಲರ್ಟ್ ವಿವರಗಳು

ಮುಂಗಾರು ಚುರುಕಾಗಿ ರಾಜ್ಯದ ಹಲವೆಡೆ ಮಳೆ ಅಬ್ಬರ ಕಾಣಿಸುತ್ತಿದ್ದು, ಜನರು ಎಚ್ಚರಿಕೆಯಿಂದಿರುವುದು ಅವಶ್ಯಕ. ಹವಾಮಾನ ಇಲಾಖೆ ನೀಡಿರುವ ಮುನ್ನೆಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಅನವಶ್ಯಕ ಸಂಚಾರ ತಪ್ಪಿಸಬೇಕೆಂದು ಸೂಚಿಸಲಾಗಿದೆ.

Exit mobile version