ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯಪಾಲರು ಮತ್ತು ಕಾಂಗ್ರೆಸ್ ಸರ್ಕಾರದ ನಡುವಿನ ಘರ್ಷಣೆ ತಾರಕಕ್ಕೇರಿದೆ. ಮುಂಬರುವ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಆಗಮಿಸುತ್ತಾರೋ ಇಲ್ಲವೋ ಎಂಬ ಗೊಂದಲಕ್ಕೆ ಈಗ ತೆರೆ ಬಿದ್ದಿದ್ದು, ರಾಜ್ಯಪಾಲರ ಭೇಟಿ ಬಹುತೇಕ ಖಚಿತವಾಗಿದೆ.
ಅಧಿಕೃತ ಸಂದೇಶ ರವಾನೆ:
ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ಒಪ್ಪಿಗೆ ಸೂಚಿಸಿದ್ದಾರೆ. ಈ ಕುರಿತು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ರಾಜಭವನದಿಂದ ಅಧಿಕೃತ ಸಂದೇಶ ರವಾನೆಯಾಗಿದೆ. ಇದರಿಂದಾಗಿ ಈ ಬಿಕ್ಕಟ್ಟು ಸದ್ಯಕ್ಕೆ ತಿಳಿಯಾದಂತೆ ಭಾಸವಾಗುತ್ತಿದೆ. ರಾಜ್ಯ ಸರ್ಕಾರದ ಪ್ರಮುಖ ನಿರ್ಧಾರಗಳು ಮತ್ತು ಭ್ರಷ್ಟಾಚಾರದ ಆರೋಪಗಳ ವಿಚಾರದಲ್ಲಿ ರಾಜ್ಯಪಾಲರು ತೋರಿದ್ದ ಕಠಿಣ ನಿಲುವು ಸರ್ಕಾರಕ್ಕೆ ಇಕ್ಕಟ್ಟು ತಂದೊಡ್ಡಿತ್ತು. ಈ ಹಿನ್ನೆಲೆಯಲ್ಲಿ ಅಧಿವೇಶನಕ್ಕೆ ಅವರ ಗೈರುಹಾಜರಿಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು.
ಭಾಷಣ ಮೇಲೆ ಎಲ್ಲರ ಕಣ್ಣು
ರಾಜ್ಯಪಾಲರು ಅಧಿವೇಶನಕ್ಕೆ ಬರುವುದು ಖಚಿತವಾದರೂ, ಅಸಲಿ ಕುತೂಹಲ ಇರುವುದು ಅವರು ಮಾಡುವ ಭಾಷಣದ ಮೇಲೆ. ಸರ್ಕಾರ ಸಿದ್ಧಪಡಿಸಿರುವ ಭಾಷಣದ ಪ್ರತಿಯಲ್ಲಿರುವ 11 ಪ್ರಮುಖ ಪ್ಯಾರಾಗಳನ್ನು ರಾಜ್ಯಪಾಲರು ಓದುತ್ತಾರಾ ಎಂಬುದು ಈಗಿನ ದೊಡ್ಡ ಪ್ರಶ್ನೆ. ಸಾಮಾನ್ಯವಾಗಿ ಸರ್ಕಾರವು ತನ್ನ ಸಾಧನೆಗಳು ಮತ್ತು ಮುಂದಿನ ಯೋಜನೆಗಳನ್ನು ಒಳಗೊಂಡ ಭಾಷಣದ ಪ್ರತಿಯನ್ನು ಸಿದ್ಧಪಡಿಸುತ್ತದೆ. ಆದರೆ, ಸರ್ಕಾರದ ಕೆಲವು ನೀತಿಗಳ ಬಗ್ಗೆ ರಾಜ್ಯಪಾಲರು ಅಸಮಾಧಾನ ಹೊಂದಿದ್ದರೆ, ಅವರು ಪೂರ್ಣ ಭಾಷಣವನ್ನು ಓದದೇ ಇರುವ ಸಾಧ್ಯತೆಗಳೂ ಇವೆ.
ಸರ್ಕಾರಕ್ಕೆ ಎದುರಾಗಲಿದೆಯೇ ಮುಜುಗರ ?
ಸಂಸದೀಯ ಸಂಪ್ರದಾಯದ ಪ್ರಕಾರ, ರಾಜ್ಯಪಾಲರು ಇಡೀ ಭಾಷಣವನ್ನು ಓದದೆ, ಅದರ ಪ್ರತಿಯನ್ನು ಸದನದ ಮೇಜಿನ ಮೇಲಿಟ್ಟು, ಭಾಷಣವನ್ನು ಓದಲಾಗಿದೆ ಎಂದು ಪರಿಗಣಿಸಬೇಕು ಎಂದು ಹೇಳಿ ಹೊರಡುವ ಅವಕಾಶವಿರುತ್ತದೆ. ಒಂದು ವೇಳೆ ಥಾವರ್ ಚಂದ್ ಗೆಹಲೋಟ್ ಅವರು ಈ ಹಾದಿ ಹಿಡಿದರೆ, ಅದು ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಮುಜುಗರ ಉಂಟುಮಾಡಲಿದೆ. ಸರ್ಕಾರದ ಆಡಳಿತದ ಬಗ್ಗೆ ರಾಜ್ಯಪಾಲರಿಗೆ ವಿಶ್ವಾಸವಿಲ್ಲ ಎಂಬ ಸಂದೇಶ ಇದರಿಂದ ರವಾನೆಯಾಗಲಿದೆ.
ವಿಶೇಷವಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಅನುದಾನ ಹಂಚಿಕೆ ಮತ್ತು ಮುಡಾ ಹಗರಣದಂತಹ ವಿಚಾರಗಳಲ್ಲಿ ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ಸಾಕಷ್ಟು ಸಂಘರ್ಷ ನಡೆದಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಸರ್ಕಾರ ರೂಪಿಸಿರುವ 11 ಪ್ಯಾರಾಗಳನ್ನ ಓದುತ್ತಾರೋ ಅಥವಾ ಕೇವಲ ಔಪಚಾರಿಕವಾಗಿ ಭಾಷಣ ಮುಗಿಸುತ್ತಾರೋ ಎಂಬುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.





