ಸಿಎಂ ಬದಲಾವಣೆ ವಿಚಾರ: ಸಚಿವ ಚಲುವರಾಯಸ್ವಾಮಿ ಸ್ಪೋಟಕ ಹೇಳಿಕೆ

Untitled design 2025 10 28t124733.815

ಮಂಡ್ಯ: ಕರ್ನಾಟಕದ ರಾಜಕೀಯ ವಲಯದಲ್ಲಿ ಮುಖ್ಯಮಂತ್ರಿ (ಸಿಎಂ) ಬದಲಾವಣೆ ಕುರಿತ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಕೃಷಿ ಸಚಿವ ಚಲುವರಾಯಸ್ವಾಮಿ ಮಂಡ್ಯದಲ್ಲಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಸಂಪುಟ ಬದಲಾವಣೆಯಾಗಲಿ ಅಥವಾ ನಾಯಕತ್ವ ಬದಲಾವಣೆಯಾಗಲಿ, ಕಾಂಗ್ರೆಸ್ ಹೈಕಮಾಂಡ್ ಮತ್ತು ಶಾಸಕರ ನಡುವೆ ಒಮ್ಮತದ ತೀರ್ಮಾನವಾಗಲಿದೆ ಎಂದು ಅವರು ಪರೋಕ್ಷವಾಗಿ ಸಿಎಂ ಬದಲಾವಣೆಯ ಸುಳಿವು ನೀಡಿದ್ದಾರೆ.

ಅಕ್ಟೋಬರ್ 28, 2025 ರಂದು ಮಂಡ್ಯದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಷ್ಟೇ ಮುಖ್ಯವಾದ ಹೈಕಮಾಂಡ್ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಸಿಎಂ ಬದಲಾವಣೆಯಾಗಲಿ, ಸಂಪುಟ ಮರುರಚನೆಯಾಗಲಿ, ಎಲ್ಲವೂ ಒಳ್ಳೆಯ ರೀತಿಯಲ್ಲಿ, ಗೊಂದಲವಿಲ್ಲದೇ ತೀರ್ಮಾನವಾಗಲಿದೆ ಎಂದರು. \

ಸಚಿವರು ತಮ್ಮ ಹೇಳಿಕೆಯಲ್ಲಿ ಸಿಎಂ ಬದಲಾವಣೆಯ ಕುರಿತು ನಮ್ಮೊಂದಿಗೆ ಹೈಕಮಾಂಡ್ ಇನ್ನೂ ಚರ್ಚೆ ನಡೆಸಿಲ್ಲ. ಆದರೆ, ಈ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಮತ್ತು ಹೈಕಮಾಂಡ್ ಒಟ್ಟಿಗೆ ಕೂತು ಒಳ್ಳೆಯ ತೀರ್ಮಾನ ಕೈಗೊಳ್ಳಲಿದ್ದಾರೆ. ಇದು ಬಿಜೆಪಿಯಂತೆ ಗೊಂದಲದಿಂದ ಕೂಡಿರುವುದಿಲ್ಲ. ನಮ್ಮ ಪಕ್ಷದಲ್ಲಿ ಶಾಸಕರು ಮತ್ತು ಹೈಕಮಾಂಡ್ ಒಂದೇ ರೀತಿಯ ಮಹತ್ವವನ್ನು ಹೊಂದಿದ್ದಾರೆ ಎಂದು ಒತ್ತಿಹೇಳಿದರು.

ಚಲುವರಾಯಸ್ವಾಮಿ ಅವರು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಉಲ್ಲೇಖಿಸಿ ಪರಮೇಶ್ವರ್ ಅವರು ಕಾಂಗ್ರೆಸ್‌ನ ಹಿರಿಯ ನಾಯಕರು. ಅವರು ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಆದರೆ, ಸಿಎಂ ಬದಲಾವಣೆಯ ವಿಷಯದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಹೇಳಿಕೆಯಿಂದ, ಸಿಎಂ ಸ್ಥಾನಕ್ಕೆ ಪರಮೇಶ್ವರ್ ಅವರ ಹೆಸರು ಕೂಡ ಚರ್ಚೆಯಲ್ಲಿರುವ ಸಾಧ್ಯತೆಯನ್ನು ಊಹಿಸಲಾಗುತ್ತಿದೆ.

ಸಚಿವರು ಮಾತನಾಡುವಾಗ, ರೀ-ಷಫಲ್ ಆಗುತ್ತದೆಯೋ, ನಾಯಕತ್ವ ಬದಲಾವಣೆಯಾಗುತ್ತದೆಯೋ, ಏನಾಗುತ್ತದೆ, ಯಾವಾಗ ಆಗುತ್ತದೆ ಎಂಬುದು ಗೊತ್ತಿಲ್ಲ. ಆದರೆ, ಎಲ್ಲವೂ ಸುಗಮವಾಗಿ ನಡೆಯಲಿದೆ. ವಿರೋಧ ಪಕ್ಷದವರಿಗೆ ಖಾರವಾಗಿ ಏನೂ ಸಿಗದಂತೆ ತೀರ್ಮಾನವಾಗಲಿದೆ ಎಂದು ವಿರೋಧ ಪಕ್ಷವಾದ ಬಿಜೆಪಿಗೆ ಟಾಂಗ್ ನೀಡಿದರು.

ಬಿಹಾರ ವಿಧಾನಸಭೆ ಚುನಾವಣೆಯು ಮುಗಿದ ನಂತರ ಕಾಂಗ್ರೆಸ್ ಹೈಕಮಾಂಡ್ ಈ ವಿಷಯದ ಬಗ್ಗೆ ಗಂಭೀರ ಚರ್ಚೆ ನಡೆಸಲಿದೆ ಎಂದು ಚಲುವರಾಯಸ್ವಾಮಿ ಸೂಚಿಸಿದ್ದಾರೆ. ಹೈಕಮಾಂಡ್ ಈ ವಿಷಯವನ್ನು ಗೌಪ್ಯವಾಗಿರಿಸಿದೆ. ಬಿಹಾರ ಚುನಾವಣೆ ಮುಗಿದ ಬಳಿಕ, ಸಿಎಂ, ಡಿಸಿಎಂ, ಮತ್ತು ಹೈಕಮಾಂಡ್ ಒಟ್ಟಿಗೆ ಕೂತು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

Exit mobile version