ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಒಂದು ಅಪರೂಪದ ಘಟನೆಯು ಎಲ್ಲರ ಗಮನ ಸೆಳೆದಿದೆ. ಮದುವೆ ಮಂಟಪದಲ್ಲಿ ತಾಳಿ ಕಟ್ಟಿದ ಮರು ಕ್ಷಣವೇ ವಧು ಪರೀಕ್ಷೆಗೆ ಹಾಜರಾಗಿರುವ ಘಟನೆ ನಡೆದಿದೆ. ಕೊಳ್ಳೇಗಾಲದ ವಾಸವಿ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಆರ್. ಸಂಗೀತಾ, ತನ್ನ ವಿವಾಹದ ದಿನವೇ ಪರೀಕ್ಷೆಗೆ ಹಾಜರಾಗಿ ಎಕ್ಸಾಮ್ ಬರೆದಿದ್ದಾಳೆ.
ಕೊಳ್ಳೇಗಾಲದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ನಂಜನಗೂಡು ತಾಲೂಕಿನ ಸಿಂಧುವಳ್ಳಿಯ ಯೋಗೇಶ್ ಜೊತೆ ಆರ್. ಸಂಗೀತಾಳ ವಿವಾಹ ಸಮಾರಂಭ ಅದ್ಧೂರಿಯಾಗಿ ನಡೆಯಿತು. ತಾಳಿ ಕಟ್ಟುವ ಕ್ಷಣದವರೆಗೂ ಎಲ್ಲವೂ ಸಾಂಪ್ರದಾಯಿಕ ವಿವಾಹದ ಸಂಭ್ರಮ ಮನೆಮಾಡಿತ್ತು. ಆದರೆ, ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಸಂಗೀತಾ, ಹಸಮಣೆಯಿಂದಲೇ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಧಾವಿಸಿ ಪರೀಕ್ಷೆ ಬರೆದಿದ್ದಾಳೆ.
ಆರ್. ಸಂಗೀತಾ, ವಾಸವಿ ಕಾಲೇಜಿನಲ್ಲಿ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದು, ತನ್ನ ಶಿಕ್ಷಣದ ಜವಾಬ್ದಾರಿಗಳನ್ನು ಎಂದಿಗೂ ಕಡೆಗಣಿಸಿರಲಿಲ್ಲ. ತನ್ನ ಅಂತಿಮ ಪರೀಕ್ಷೆಯ ದಿನಾಂಕವು ವಿವಾಹದ ದಿನಕ್ಕೆ ಸರಿಯಾಗಿ ಬಂದಾಗ, ಸಂಗೀತಾ ಎರಡೂ ಕರ್ತವ್ಯಗಳನ್ನು ಸಮರ್ಥವಾಗಿ ನಿಭಾಯಿಸಲು ನಿರ್ಧರಿಸಿದಳು.
ಮದುವೆಯ ಸಂಭ್ರಮದಲ್ಲಿ ತೊಡಗಿರುವಾಗಲೇ, ಸಂಗೀತಾ ತನ್ನ ಪರೀಕ್ಷೆಯ ತಯಾರಿಯನ್ನು ಮುಂದುವರೆಸಿದ್ದಳು. ಕುಟುಂಬದವರ ಸಹಕಾರ ಮತ್ತು ಆಕೆಯ ಗಂಡ ಯೋಗೇಶ್ರ ಬೆಂಬಲ ನೀಡಿದ್ದಾರೆ.