ಬೆಂಗಳೂರು (ಏ.30): ಕರ್ನಾಟಕ ರಾಜ್ಯದ ಜನತೆಗೆ ಒಂದಾದ ಮೇಲೆ ಒಂದಾಗಿ ಬೆಲೆ ಏರಿಕೆ ತಂದೊಡ್ಡಿದೆ. ಡೀಸೆಲ್, ವಿದ್ಯುತ್ ಹಾಗೂ ಹಾಲಿನ ಬೆಲೆ ಹೆಚ್ಚಿಸಿದ ಸರ್ಕಾರ ಇದೀಗ ಮದ್ಯದ ದರವನ್ನು ನಾಲ್ಕನೇ ಬಾರಿಗೆ ಏರಿಸಲು ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಭಾಷಣದಲ್ಲಿ ಈ ಕುರಿತ ಪ್ರಸ್ತಾಪ ಮಾಡಿದ್ದರೂ, ಇದೀಗ ಅಬಕಾರಿ ಇಲಾಖೆ ಅಧಿಕೃತ ಅಧಿಸೂಚನೆಯನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಇದರಂತೆ, ರಾಜ್ಯದ ಜನಪ್ರಿಯ ಮತ್ತು ವ್ಯಾಪಕವಾಗಿ ಸೇವಿಸಲ್ಪಡುವ ಮದ್ಯದ ದರಗಳನ್ನು ಪ್ರತಿ ಕ್ವಾರ್ಟರ್ಗೆ ₹10 ರಿಂದ ₹15 ರವರೆಗೆ ಹೆಚ್ಚಳಗೊಳಿಸಲಾಗುತ್ತಿದೆ. ಬ್ರಾಂಡಿ, ವಿಸ್ಕಿ, ರಮ್, ಜಿನ್ ಮುಂತಾದ ಸಾಮಾನ್ಯ ಶ್ರೇಣಿಯ ಮದ್ಯಗಳ ಮೇಲೆ ಈ ಹೆಚ್ಚಳ ಪರಿಣಾಮ ಬೀರುತ್ತದೆ. ಇನ್ನು ಬಿಯರ್ ದರವನ್ನು ಎಲ್ಲಾ ವರ್ಗಗಳಲ್ಲಿ ಶೇ.10ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಮಧ್ಯಮ ದರ್ಜೆಯ ಮದ್ಯಕ್ಕೂ ಈ ಏರಿಕೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ, ಪ್ರೀಮಿಯಂ ಬ್ರ್ಯಾಂಡ್ ಅಥವಾ ಹೈ-ಎಂಡ್ ಮದ್ಯಗಳ ದರದಲ್ಲಿ ಯಾವುದೇ ಬದಲಾವಣೆ ಮಾಡುವ ಯೋಚನೆ ಇಲ್ಲ. ವೈನ್, ಫಣ್ಣಿ ಸೇರಿದಂತೆ ಕೆಲವು ಮದ್ಯಗಳ ದರವನ್ನು ಏರಿಕೆಯಿಂದ ಹೊರಗಿಡಲಾಗಿದೆ.
ಅಬಕಾರಿ ಇಲಾಖೆಯ ಉದ್ದೇಶ ಬಹಳ ಸ್ಪಷ್ಟವಾಗಿದೆ. ಮದ್ಯ ಮಾರಾಟದಿಂದ ರಾಜ್ಯ ಸರ್ಕಾರ ₹40,000 ಕೋಟಿ ಆದಾಯ ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಇತ್ತೀಚೆಗೆ ಇಂಧನ, ಹಾಲು, ವಿದ್ಯುತ್, ಸಾರಿಗೆ ಸೇವೆಗಳು ಹಾಗೂ ಇತರ ಸೇವಾ ಶುಲ್ಕಗಳಲ್ಲಿ ಏರಿಕೆ ಮಾಡುವ ಮೂಲಕ ಹಣಕಾಸು ಭದ್ರತೆ ಸಾಧಿಸಲು ಸರ್ಕಾರ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ.
ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರ ಮಾಹಿತಿಯ ಪ್ರಕಾರ, ಈ ದರ ಏರಿಕೆಯ ಹಿಂದೆ ಎರಡು ಪ್ರಮುಖ ಉದ್ದೇಶಗಳಿವೆ. ಮೊದಲು, ರಾಜ್ಯದ ಆರ್ಥಿಕ ಗುರಿಗಳನ್ನು ತಲುಪಲು ಮದ್ಯ ಮಾರಾಟದ ಆದಾಯ ಬಳಕೆ ಮಾಡುವುದು. ಎರಡನೆಯದಾಗಿ, ನೆರೆಹೊರೆ ರಾಜ್ಯಗಳೊಂದಿಗೆ ಮದ್ಯದ ದರದಲ್ಲಿ ಸಮತೋಲನ ಸಾಧಿಸುವುದು. ಗಡಿಭಾಗಗಳಲ್ಲಿ ಇತರೆ ರಾಜ್ಯಗಳಿಂದ ಬರುವ ಅಗ್ಗದ ಮದ್ಯದ ಮಾರಾಟ ಹೆಚ್ಚಾಗಿರುವುದು ಸರ್ಕಾರದ ಗಮನ ಸೆಳೆದಿದೆ. ಕರ್ನಾಟಕದಲ್ಲಿ ತಯಾರಾಗುವ ಮದ್ಯದ ಮೇಲೆ ಇತರ ರಾಜ್ಯಗಳು ನಿರ್ಬಂಧವಿದ್ದರೂ, ಆ ರಾಜ್ಯಗಳ ಮದ್ಯ ಬಾಟಲಿಗಳು ಕರ್ನಾಟಕಕ್ಕೆ ಬರಲು ಅವಕಾಶವಿದೆ. ಈ ಅಸಮತೋಲನ ಸರಿಪಡಿಸಲು ದರ ಏರಿಕೆ ಅನಿವಾರ್ಯವಾಗಿದೆ ಎಂಬ ಅಬಕಾರಿ ಇಲಾಖೆಯ ನಿಲುವು ಇದೆ.
ಜನರ ಮೇಲಿನ ಪರಿಣಾಮ
ಈ ನಿರ್ಧಾರದಿಂದ ಮದ್ಯ ಸೇವನೆ ಮಾಡುವವರು ಹಣಕಾಸಿನ ಹೊರೆ ಅನುಭವಿಸುವ ಸಾಧ್ಯತೆ ಇದೆ. ಸರ್ಕಾರ ಈ ಕುರಿತು ಯಾವುದೇ ಪರಿಗಣನೆ ಇಲ್ಲದೆ ಮುಂದಾಗಿರುವುದರಿಂದ, ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿದೆ.