ಬೆಂಗಳೂರು, ಫೆಬ್ರವರಿ,01: ಭಾರತದ ಕೃಷಿ ತಂತ್ರಯೋಜನೆ ಕೇವಲ ಉತ್ಪಾದನೆಯಿಂದ ಲಾಭದಾಯಕತೆಯತ್ತ ಮಾತ್ರವಲ್ಲದೆ ಇತ್ತೀಚೆಗೆ ಮಹತ್ವದ ಬದಲಾವಣೆಯನ್ನು ಕಂಡಿದ್ದು,ರೈತರನ್ನು ಉದ್ಯಮಿಗಳಾಗಿ ರೂಪಿಸುವ ಉದ್ದೇಶದಿಂದ ಮೌಲ್ಯವರ್ಧನೆ, ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಸಂಪರ್ಕಗಳ ಮೇಲೆ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಇಂದು ಕಬ್ಬನ್ ಪಾರ್ಕ ನಲ್ಲಿರುವ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ಅಗ್ರಿ ವಾಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ,ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರಂತರ ಪ್ರಯತ್ನಗಳಿಂದ ಕೃಷಿ ಉತ್ಪಾದನೆ ಸ್ಥಿರವಾಗಿ ಇತ್ತೀಚೆಗೆ ಹೆಚ್ಚಾಗಿದೆ, ಇದರಿಂದ ದೇಶವು ಇತರೆ ರಾಷ್ಟ್ರಗಳನ್ನು ಮೀರಿ ಮುನ್ನಡೆಯಲು ಸಾಧ್ಯವಾಗಿದೆ.
ಈಗ ನಮ್ಮ ಮುಂದಿರುವ ಸವಾಲುಗಳು ಕೇವಲ ಕೃಷಿ ಉತ್ಪಾದನೆ ಹೆಚ್ಚಳ ಮಾತ್ರವಲ್ಲ, ರೈತರು ತಮ್ಮ ಉತ್ಪನ್ನಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿ ನೇರವಾಗಿ ಮಾರುಕಟ್ಟೆಗೆ ತಲುಪುವ ಮೂಲಕ ಹೆಚ್ಚು ಆದಾಯ ಗಳಿಸುವಂತಾಗಬೇಕು. ಯುವ ರೈತರನ್ನು ಕೃಷಿ ಉದ್ಯಮಿಗಳಾಗಿ ಸಬಲೀಕರಿಸುವುದು ಸರ್ಕಾರದ ನೀತಿ ಚೌಕಟ್ಟಿನ ಪ್ರಮುಖ ಆದ್ಯತಾ ವಿಷಯವಾಗಿದೆ. ಈ ದೃಷ್ಟಿಕೋನದಿಂದ ಇದೇ ಫೆಬ್ರವರಿ 6 ರಿಂದ ಫೆಬ್ರವರಿ 8 ರವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಗೇಟು ಮೈದಾನದಲ್ಲಿ ನಡೆಯಲಿರುವ ಕೃಷಿ ಮೇಳ ಆಯೋಜಿಸಲಾಗುತ್ತಿದೆ ಎಂದರು.
ಮೂರು ದಿನಗಳ ಈ ಕಾರ್ಯಕ್ರಮವು ರೈತರಿಗೆ ತಂತ್ರಜ್ಞಾನ, ಬ್ರಾಂಡಿಂಗ್ ಅವಕಾಶಗಳು ಮತ್ತು ರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕ ಸಾಧಿಸುವ ವೇದಿಕೆಯಾಗಲಿದೆ. ರೈತ ಉತ್ಪಾದಕ ಸಂಸ್ಥೆಗಳು (FPOs) ಸೇರಿದಂತೆ 300ಕ್ಕೂ ಹೆಚ್ಚು ಮಳಿಗೆಗಳು ಆಧುನಿಕ ಯಂತ್ರೋಪಕರಣಗಳು, ಸಂಸ್ಕರಣಾ ತಂತ್ರಗಳು ಮತ್ತು ಕೃಷಿ ಮೌಲ್ಯ ಸರಪಳಿಯ ಸಂಪೂರ್ಣ ವ್ಯಾಪ್ತಿಯನ್ನು ಒಳಗೊಂಡ ನವೀನತೆಗಳನ್ನು ಪ್ರದರ್ಶಿಸಲಿವೆ ಎಂದು ಹೇಳಿದರು.
ಈ ಕೃಷಿ ಮೇಳವನ್ನು ಫೆಬ್ರವರಿ 6 ರಂದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದು, ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವರು ಭಾಗವಹಿಸುವ ನಿರೀಕ್ಷೆಯಿದೆ. ಹಲವು ಸಚಿವರು, ಹಿರಿಯ ಅಧಿಕಾರಿಗಳು, ಕೃಷಿ ತಜ್ಞರು ಮತ್ತು ವಿಜ್ಞಾನಿಗಳು ಭಾಗವಹಿಸಿ, ಸಮಕಾಲೀನ ಕೃಷಿ ಪದ್ಧತಿಗಳು ಮತ್ತು ಮಾರುಕಟ್ಟೆ ಆಧಾರಿತ ಕೃಷಿಯ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.
ರೈತರಿಗೆ ವಿವಿಧ ಹವಾಮಾನ ಪರಿಸ್ಥಿತಿಗಳಲ್ಲಿ ವರ್ಷಪೂರ್ತಿ ಎದುರಾಗುವ ಸವಾಲುಗಳನ್ನು ಎದುರಿಸಲು ಹಾಗೂ ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯನ್ನು ಹೊಂದಾಣಿಕೆ ಮಾಡಲು ಅಗತ್ಯ ಜ್ಞಾನ ಒದಗಿಸುವುದು ಕೃಷಿ ಇಲಾಖೆಯ ಉದ್ದೇಶವಾಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲ ಸಂಬಂಧಪಟ್ಟ ಹಿತಾಸಕ್ತಿದಾರರು ಭಾಗವಹಿಸಿ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಸಚಿವ ಎನ್.ಚಲುವರಾಯ ಸ್ವಾಮಿ ಅವರು ಮನವಿ ಮಾಡಿದರು.
ಅಗ್ರಿ ವಾಕ್ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತ ವೈಎಸ್.ಪಾಟೀಲ್, ಕೃಷಿ ಬೆಲೆ ಆಯೋಗದ ಆಯುಕ್ತ ಅರವಿಂದ ದಳವಾಯಿ, ಕೃಷಿ ಇಲಾಖೆ ನಿರ್ದೇಶಕ ಡಾ.ಜಿ.ಟಿ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಬಂಥನಾಳ್, ಸೆಕಂಡರಿ ಅಗ್ರಿಕಲ್ಚರ್ ನಿರ್ದೇಶಕ ವೆಂಕಟರಮಣರೆಡ್ಡಿ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು.
