ಸರ್ಕಾರ ವೈಜ್ಞಾನಿಕ ಸಮೀಕ್ಷೆ ನಡೆಸಿ ಹೊಸ ವರದಿ ಸಲ್ಲಿಸಲು ಮುಂದಾಗಬೇಕು: ಆರ್. ಅಶೋಕ್

11 2025 04 15t151508.216
ADVERTISEMENT
ADVERTISEMENT

ಬೆಂಗಳೂರು, ಏಪ್ರಿಲ್ 15 : ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜು ವರದಿ ಬಗ್ಗೆ ರಾಜ್ಯದ ಜನತೆಗಿರುವ ತಕರಾರುಗಳು ಮತ್ತು ಅನುಮಾನಗಳನ್ನು ಇರುವ ಕಾರಣ, ಇನ್ನಾದರೂ ಒಣ ಪ್ರತಿಷ್ಠೆ ಮತ್ತು ಸ್ವಹಿತಾಸಕ್ತಿ ಬದಿಗಿಟ್ಟು ಎಲ್ಲರೂ ಒಪ್ಪುವಂತಹ ವೈಜ್ಞಾನಿಕ ಸಮೀಕ್ಷೆ ನಡೆಸಿ ಹೊಸ ವರದಿ ಸಲ್ಲಿಸಲು ಸರ್ಕಾರ ಮುಂದಾಗಬೇಕು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಎಂದು ಒತ್ತಾಯಿಸಿದ್ದಾರೆ.

 ಆರ್. ಅಶೋಕ್ ಅವರು ತಮ್ಮ ಅಧಿಕೃತ ಎಕ್ಸ್ (ಹಳೆಯ ಟ್ವಿಟರ್) ಖಾತೆಯಲ್ಲಿ ಮಾಡಿರುವ ಸುಧೀರ್ಘ ಪೋಸ್ಟ್‌ನಲ್ಲಿ, “ಒಳ್ಳೆಯದ್ದಾಗಬೇಕೆಂದಾದರೆ ಎಲ್ಲರೂ ಒಪ್ಪುವಂತಹ ವೈಜ್ಞಾನಿಕ ಹಾಗೂ ಪಾರದರ್ಶಕ ಜಾತಿ ಸಮೀಕ್ಷೆ ಮತ್ತೆ ನಡೆಸಬೇಕು. ಯಾವುದೇ ಒಣ ಪ್ರತಿಷ್ಠೆ ಅಥವಾ ರಾಜಕೀಯ ಲಾಭಕ್ಕಾಗಿ ನಿರ್ಧಾರ ತೆಗೆದುಕೊಳ್ಳುವುದು ಸಮಾಜದ ತಳಮಟ್ಟದ ವರ್ಗಗಳ ಮೇಲೆಯೇ ದುರಭಿಮಾನವೆಂದು ಪರಿಗಣಿಸಬೇಕು” ಎಂದು ಹೇಳಿದ್ದಾರೆ.

ಅವರು ಸರಕಾರದ ಮೇಲೆ ಸಿಡಿದೇಳುತ್ತಾ ಹಲವಾರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ತಕ್ಷಣದ ಅಧಿಕಾರ ಹಂಚಿಕೆ ಯೋಗವನ್ನು ಮುಂದೂಡಲು ಅಥವಾ ಅದರಿಂದ ತಪ್ಪಿಸಿಕೊಳ್ಳಲು ಈ ವರದಿಯನ್ನು ರಾಜಕೀಯ ತಂತ್ರವಾಗಿ ಬಳಸಲಾಗುತ್ತಿದೆಯೇ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.

ಹತ್ತು ವರ್ಷಗಳ ಹಿಂದೆ ನಡೆದ ಸಮೀಕ್ಷೆಯು ಅಷ್ಟು ವೈಜ್ಞಾನಿಕವಾಗಿಲ್ಲ ಎಂಬ ದೂರಿನ ಮೇಲೂ ಅವರು ಕಿಡಿಕಾರಿದ್ದಾರೆ. “ಅನೇಕ ಮನೆಗಳಿಗೆ ಸಮೀಕ್ಷಾಧಿಕಾರಿಗಳು ಹೋಗಿಲ್ಲ, ಜನರಿಂದ ಯಾವುದೇ ಮಾಹಿತಿ ಸಂಗ್ರಹಿಸಲಾಗಿಲ್ಲ, ಈ ಎಲ್ಲಾ ಲೋಪಗಳನ್ನು ಗಮನದಲ್ಲಿಟ್ಟುಕೊಂಡು ವರದಿಯನ್ನು ಮರುಪರಿಶೀಲನೆ ಮಾಡಬೇಕಾಗಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

ಕಾಂತರಾಜು ವರದಿಗೆ ಆಯೋಗದ ಕಾರ್ಯದರ್ಶಿ ಸಹಿ ಮಾಡಿಲ್ಲ ಎನ್ನುವ ವಿಷಯವನ್ನೂ ಅವರು ಎತ್ತಿಹಿಡಿದಿದ್ದಾರೆ. “ಇದು ನಿಜವಲ್ಲವೆ? ಸಹಿ ಇಲ್ಲದ ವರದಿ ಅನ್ನು ಸರಕಾರ ಬಳಸುತ್ತಿರುವುದು ಎಷ್ಟು ನ್ಯಾಯಸಮ್ಮತ? ಹಸ್ತಪ್ರತಿ ಅಥವಾ ಮೂಲ ಪ್ರತಿ ಸೀಲ್ಡ್ ಬಾಕ್ಸ್‌ನಲ್ಲಿಲ್ಲವೆಂದು ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರೇ ಹೇಳಿದ್ದಾರೆ. ಇದರ ಸತ್ಯಾಸತ್ಯತೆ ಏನು?” ಎಂದು ಪ್ರಶ್ನೆಮಾಡಿದ್ದಾರೆ.

ಧರ್ಮಗಳ ನಡುವೆ ಭೇದಭಾವ?

ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳ ಉಪಜಾತಿಗಳನ್ನು ಮಾತ್ರ ಪ್ರತ್ಯೇಕವಾಗಿ ಉಲ್ಲೇಖಿಸಿ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮದ ಅಂತರಜಾತಿಗಳನ್ನು ಸೇರಿಸದಿರುವುದರ ಹಿಂದೆ ರಾಜಕೀಯ ಗುರಿಯಿದೆ ಎಂಬ ಆರೋಪವನ್ನೂ ಅವರು ಹೊರಹಾಕಿದ್ದಾರೆ. “ಇದು ಸಾಂಪ್ರದಾಯಿಕ ಸಮುದಾಯಗಳ ವಿರುದ್ಧವಾದ ರಾಜಕೀಯ ಕುತಂತ್ರವಲ್ಲವೆ?” ಎಂದು ತೀವ್ರವಾಗಿ ಪ್ರಶ್ನಿಸಿದ್ದಾರೆ.

ವರದಿ ಸೋರಿಕೆ : ಲೋಪವೋ ಅಥವಾ ಉದ್ದೇಶಪೂರ್ವಕವೋ?

ಅವರ ಮತ್ತೊಂದು ಆರೋಪ ಮಾಧ್ಯಮಗಳಲ್ಲಿ ವರದಿಯ ಅಂಕಿಅಂಶಗಳು ಸೋರಿಕೆಯಾಗಿದೆ ಎಂಬುದು. “ಸರ್ಕಾರದ ವೈಫಲ್ಯವೋ ಅಥವಾ ಉದ್ದೇಶಪೂರ್ವಕ ಸೋರಿಕೆಯಾಗಿದೆಯೋ ಎಂಬುದು ಜನತೆಗೆ ಸ್ಪಷ್ಟವಾಗಬೇಕು. ಇಂಥ ಒಂದು ಗಂಭೀರ ಸಮೀಕ್ಷೆಯ ಮಾಹಿತಿಯು ಈ ರೀತಿ ಸೋರಿಕೆಯಾದರೆ ಅದು ಯಾರ ಹೊಣೆ?” ಎಂದು ಅವರು ಕೇಳಿದ್ದಾರೆ.

ರಾಜಕೀಯ ಲಾಭಕ್ಕಾಗಿ ಜಾತಿಗಣತಿ?

 “ಸಂಕಟ ಬಂದಾಗ ವೆಂಕಟರಮಣ ಎಂಬಂತೆ, ರಾಜಕೀಯ ಒತ್ತಡಗಳ ನಡುವೆ ಸಿದ್ದರಾಮಯ್ಯ ಅವರು ತಮ್ಮ ಸ್ಥಾನ ರಕ್ಷಿಸಲು ಈ ವರದಿಯನ್ನು ಜನರ ಗಮನ ಬೇರಡೆ ಸೆಳೆಯುವ ತಂತ್ರವಾಗಿ ಬಳಸುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದೊಳಗಿನ ಗುಸುಗುಸಾಗಿದೆಯೇ?” ಎಂದು ಅವರು ಆರೋಪಿಸಿದ್ದಾರೆ.

ಪಕ್ಷದೊಳಗಿನ ವಿರೋಧ:

ಕೇವಲ ವಿರೋಧ ಪಕ್ಷವಲ್ಲದೆ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಕೂಡ ಈ ವರದಿಗೆ ವಿರೋಧ ವ್ಯಕ್ತಪಡಿಸಿರುವುದನ್ನು ಅವರು ತೀವ್ರವಾಗಿ ಎತ್ತಿಹಿಡಿದಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ನಾಯಕರು, ಧಾರ್ಮಿಕ ಮುಖಂಡರು ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಹೇಳಿದ್ದಾರೆ.

“ಈ ವರದಿ ಅವೈಜ್ಞಾನಿಕ, ಅಪೂರ್ಣ, ಅಪುಸ್ತುತ ಮತ್ತು ಅವಾಸ್ತವಿಕವಾಗಿದ್ದು, ಸಮಗ್ರ ಸಮಾಜದ ಅಭಿಪ್ರಾಯವಿಲ್ಲದೆ ಸಿದ್ದರಾಮಯ್ಯ ಅವರು ದಿಢೀರ್ ನಿರ್ಧಾರ ತೆಗೆದುಕೊಂಡಿದ್ದು, ಜನಾಧಾರವಿಲ್ಲದ ಆಡಳಿತದ ಉದಾಹರಣೆ” ಎಂದು ಆರ್. ಅಶೋಕ್ ಹೇಳಿದ್ದಾರೆ.

Exit mobile version