ಬಿಹಾರವನ್ನು ಬದಲಿಸಲು ಎಲ್ಲರೂ ಮತದಾನ ಮಾಡಿ: ಅನಿವಾಸಿ ಬಿಹಾರಿಗರಿಗೆ ಮನೋಜ್ ಭಾರತಿ ಕರೆ

Untitled design 2025 10 05t185133.474

ಬೆಂಗಳೂರು: ಬಿಹಾರದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ ಅನಿವಾಸಿ ಬಿಹಾರಿಗರೂ ಬಿಹಾರಕ್ಕೆ ಬಂದು ಮತದಾನ ಮಾಡುವ ಮೂಲಕ ಬಿಹಾರದ ಬದಲಾವಣೆಗೆ ಓಂಕಾರ ಬರೆಯಬೇಕೆಂದು ಎಂದು ಬಿಹಾರದ ಜನಸುರಾಜ್ ಪಕ್ಷದ ರಾಜ್ಯಾಧ್ಯಕ್ಷ ಶ್ರೀ ಮನೋಜ್ ಭಾರತಿಯವರು ಬಿಹಾರಿಗರಿಗೆ ಕರೆ ನೀಡಿದರು.

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಬೆಂಗಳೂರಿನಿಂದ ಬಿಹಾರ ಬದಲಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನಸುರಾಜ್ ಪಕ್ಷದ ಬಿಹಾರದ ರಾಜ್ಯಾಧ್ಯಕ್ಷರಾದ ಶ್ರೀ ಮನೋಜ್ ಭಾರತಿಯವರು ಬೆಂಗಳೂರಿನಲ್ಲಿರುವ ಅನಿವಾಸಿ ಬಿಹಾರಿಗರನ್ನು ಕುರಿತು ಮಾತನಾಡಿದರು.

ಬಿಹಾರದ ಇಂದಿನ ಸ್ಥಿತಿಗೆ ಭ್ರಷ್ಟಾಚಾರವೇ ಪ್ರಮುಖ ಕಾರಣವಾಗಿದ್ದು, ಯಾವುದೇ ರಾಷ್ಟ್ರೀಯ ಪಕ್ಷಗಳಿಗೂ ಈ ವ್ಯವಸ್ಥೆಯನ್ನು ಬದಲಿಸುವ ಇಚ್ಛಾಶಕ್ತಿಯಿಲ್ಲ. ನಮ್ಮ ಬಿಹಾರದ ಭ್ರಷ್ಟಾಚಾರದ ಬೇರು ಚುನಾವಣೆಯಲ್ಲಿಯೇ ಇದೆ. ಮೊದಲು ಚುನಾವಣಾ ವ್ಯವಸ್ಥೆಯನ್ನು ಸರಿ ಮಾಡಬೇಕಿದೆ. ಹಣ ಮತ್ತಿತರ ಆಮಿಷಗಳಿಗೆ ಒಳಗಾಗದೇ ಜನರು ಶಿಕ್ಷಣ, ಉದ್ಯೋಗ ಮತ್ತು ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಮತ ಚಲಾಯಿಸಬೇಕು. ಬಿಹಾರದಿಂದ ಹೊರಗಿರುವ ಎಲ್ಲಾ ಬಿಹಾರಿಗರೂ ಬಿಹಾರಕ್ಕೆ ಬಂದು ಮತದಾನ ಮಾಡಿ ಬಿಹಾರದ ಬದಲಾವಣೆಗೆ ಓಂಕಾರ ಬರೆಯಬೇಕೆಂದು ಮನೋಜ್ ಭಾರತಿಯವರು ಕರೆ ಕೊಟ್ಟರು.

ಪ್ರಶಾಂತ್ ಕಿಶೋರ್ ಅವರ ನೇತೃತ್ವದಲ್ಲಿ ಗಾಂಧಿ ವಿಚಾರಧಾರೆಗಳಿಂದ ಆರಂಭವಾಗಿರುವ ಜನಸುರಾಜ್ ಪಕ್ಷಕ್ಕೆ ಒಂದು ವರ್ಷ ತುಂಬಿದೆ. ಅದಕ್ಕೂ ಮೊದಲು ಪ್ರಶಾಂತ್ ಕಿಶೋರ್ ಅವರು ಎರಡು ವರ್ಷಗಳ ಕಾಲ ಪಾದಯಾತ್ರೆ ನಡೆಸಿ ಬಿಹಾರದ ನೈಜ ಪರಿಸ್ಥಿತಿಯನ್ನು ಅಧ್ಯನ ಮಾಡಿದ್ದಾರೆ. ಜನಸುರಾಜ್ ಸ್ಥಾಪನೆಯಾಗಿರುವುದು ಅಧಿಕಾರದ ಆಸೆಯಿಂದಲ್ಲ ಬದಲಾಗಿ ವ್ಯವಸ್ಥೆಯನ್ನು ಸ್ವಚ್ಛಗೊಳೊಸುವ ಮಹದುದ್ದೇಶದಿಂದ ಎಂದು ಮನೋಜ್ ಭಾರತಿಯವರು ತಿಳಿಸಿದರು.

ಕಾರ್ಯಕ್ರಮಕ್ಕೂ ಮೊದಲು ಮನೋಜ್ ಭಾರತಿಯವರನ್ನು ಡೊಳ್ಳುಕುಣಿತ ಮೊದಲಾದ ಕಲಾತಂಡಗಳೊಂದಿಗೆ ಸ್ವಾಗತಿಸಲಾಯಿತು. ನಂತರ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಕಾರ್ಯಕ್ರಮಕ್ಕೂ ಮೊದಲು ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮನೋಜ್ ಭಾರತಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇಂದು ಜನಸುರಾಜ್ ನ ಬೆಂಗಳೂರಿನ ಸ್ವಯಂಸೇವಕರು ಮತ್ತು ಬೆಂಬಲಿಗರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಶ್ರೀ ವಿನಯ್ ಕುಮಾರ್, ಶ್ರೀ ರಾಜ್ ಗುರು, ಜನಸುರಾಜ್ ಬೆಂಗಳೂರಿನ ಸಂಯೋಜಕರಾದ ಡಾ. ನಿಶ್ಚಿತ್ ಕೆ.ಆರ್ ಹಾಗೂ ಬಿಹಾರ ಮೂಲದ ಉದ್ಯಮಿಗಳು, ಮುಖಂಡರು ಮತ್ತು ನೂರಾರು ಸಂಖ್ಯೆಯ ಸ್ವಯಂ ಸೇವಕರು ಭಾಗವಹಿಸಿದ್ದರು.

Exit mobile version