ಲೋಕ ಶಾಂತಿ-ಸಮೃದ್ಧಿಗೆ ಸಂಕಲ್ಪ: ಉದ್ಯಮದ ನಡುವೆ ಸ್ವರ್ಣ ವಿನಾಯಕನ 12ನೇ ಮಹೋತ್ಸವದ ಅದ್ದೂರಿ ಆಚರಣೆ

Untitled design 2026 03 21T200904.116

ಹುಬ್ಬಳ್ಳಿ: ಉದ್ಯಮದ ಬೆಳವಣಿಗೆಯ ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಅಪೂರ್ವ ಸಂದೇಶವನ್ನು ಸಾರುವ ರೀತಿಯಲ್ಲಿ ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ವತಿಯಿಂದ ಸ್ವರ್ಣ ವಿನಾಯಕ ದೇವಾಲಯದ 12ನೇ ವಾರ್ಷಿಕೋತ್ಸವವನ್ನು ಭಕ್ತಿಭಾವದಿಂದ ಹಾಗೂ ಅದ್ದೂರಿಯಾಗಿ ಆಚರಿಸಲಾಯಿತು.

ಹುಬ್ಬಳ್ಳಿ ತಾಲೂಕಿನ ಚಳಮಟ್ಟಿ ಗ್ರಾಮದ ಹೊರವಲಯದಲ್ಲಿರುವ ಸ್ವರ್ಣಾ ಗ್ರೂಪ್ ಫ್ಯಾಕ್ಟರಿ ಆವರಣದಲ್ಲಿ ಸ್ಥಾಪಿತವಾಗಿರುವ ವಿಘ್ನೇಶ್ವರ ದೇವಾಲಯವು ಕಳೆದ 12 ವರ್ಷಗಳಿಂದ ಭಕ್ತರಿಗೆ ಆಧ್ಯಾತ್ಮಿಕ ಕೇಂದ್ರವಾಗಿದ್ದು, ಈ ವಾರ್ಷಿಕೋತ್ಸವವು ವಿಶೇಷ ಮಹತ್ವ ಪಡೆದುಕೊಂಡಿತು.

ಈ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿಸಲಾಯಿತು. ಮೊದಲ ದಿನ ಅಶ್ಲೇಷಾ ಬಲಿ ಹಾಗೂ ಮೃತ್ಯುಂಜಯ ಹೋಮ ನಡೆದರೆ, ಎರಡನೇ ದಿನ ಚಂಡಿಕಾ ಹೋಮ ಮತ್ತು ಗಣ ಹೋಮಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.

ಶನಿವಾರ ಸಂಸ್ಥೆಯ ಮುಖ್ಯಸ್ಥರಾದ ಡಾ. ಸಿ.ಎಚ್.ವಿ.ಎಸ್.ವಿ ಪ್ರಸಾದ ಹಾಗೂ ಅವರ ಪತ್ನಿ ಲೋಕ ಕಲ್ಯಾಣ, ಶಾಂತಿ ಮತ್ತು ಸಮೃದ್ಧಿಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಅಶಾಂತಿ ಹಾಗೂ ಸಂಘರ್ಷಗಳು ನಿವಾರಣೆಯಾಗಲಿ ಎಂಬ ಸಂಕಲ್ಪವನ್ನು ಈ ಧಾರ್ಮಿಕ ಕಾರ್ಯಕ್ರಮದ ಮೂಲಕ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಭಕ್ತರು, ಸಿಬ್ಬಂದಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಚಳಮಟ್ಟಿ, ಚವರಗುಡ್ಡ ಹಾಗೂ ಅಂಚಟಗೇರಿ ಭಾಗದ ಜನರು ಡಾ. ಪ್ರಸಾದ ಅವರ ಧಾರ್ಮಿಕತೆ ಮತ್ತು ಸಾಮಾಜಿಕ ಕಾಳಜಿಯನ್ನು ಕೊಂಡಾಡಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ಡಾ.ವಿಜಯ ಸಂಕೇಶ್ವರ, ಆನಂದ ಸಂಕೇಶ್ವರ, ನಂದಕುಮಾರ, ಗೋವಿಂದ ಜೋಶಿ, ಅಶೋಕ ಶೆಟ್ಟರ್, ಶೇಷಗಿರಿ ಕುಲಕರ್ಣಿ, ಜಗದೀಶ್ ಹಿರೇಮಠ, ಅರವಿಂದ ಕಲಬುರ್ಗಿ, ಮಹದೇವ ಕರಮರಿ ಸೇರಿದಂತೆ ಮುಂತಾದ ಗಣ್ಯಮಾನ್ಯರು ಪಾಲ್ಗೊಂಡಿದ್ದರು.

Exit mobile version