ಬೆಂಗಳೂರು, ಮೇ 17, 2026: ಬೆಂಗಳೂರು ನಗರವನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ನಗರವನ್ನಾಗಿ ರೂಪಿಸುವ ಉದ್ದೇಶದಿಂದ, ಸ್ವಚ್ಛ ಭಾರತ್ ಮಿಷನ್ ಅರ್ಬನ್ 2.0 ಅಡಿ ನಗರದಲ್ಲಿ ಜನಜಾಗೃತಿಗಾಗಿ “ಸಮುದಾಯ ಬೀದಿ ನಾಟಕ” ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ಮೂರು ಪ್ರಮುಖ ಸ್ಥಳಗಳಲ್ಲಿ “ಸಮುದಾಯ ಬೀದಿ ನಾಟಕ”ಗಳ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರು ಬೀದಿ ನಾಟಕ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರ ಪಾಲಿಕೆಯ ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್ ಅವರು ಬೆಂಗಳೂರು ನಗರದ ಚರ್ಚ್ ಸ್ಟ್ರೀಟ್ನಲ್ಲಿ ನಡೆದ ಬೀದಿ ನಾಟಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಟಕ ವೀಕ್ಷಣೆ ಮಾಡಿದರು. ಸಾರ್ವಜನಿಕರಿಗೆ ಸ್ವಚ್ಛತೆಯ ಸಂದೇಶವನ್ನು ತಲುಪಿಸುವ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಸಾರ್ವಜನಿಕರು ಸ್ವಚ್ಛತೆಯ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಕರೆ ನೀಡಿದರು.
ಈ ಬೀದಿ ನಾಟಕಗಳನ್ನು ಮೂರು ಪ್ರಮುಖ ಸ್ಥಳಗಳಲ್ಲಿ ಆಯೋಜಿಸಲಾಯಿತು. ಮೊದಲನೆಯದು ಚಿಕ್ಕಪೇಟೆ ಕ್ಷೇತ್ರದ ಲಾಲ್ ಬಾಗ್ ಪಶ್ಚಿಮ ದ್ವಾರದ ಬಳಿ, ಎರಡನೆಯದು ಸಿ. ವಿ. ರಾಮನ್ ನಗರ ಕ್ಷೇತ್ರದ ಇಂದಿರಾನಗರದ ಕೆ.ಎಫ್.ಸಿ ಬಸ್ ನಿಲ್ದಾಣ ಹತ್ತಿರ, ಮತ್ತು ಮೂರನೆಯದು ಶಾಂತಿನಗರ ಕ್ಷೇತ್ರದ ಚರ್ಚ್ ಸ್ಟ್ರೀಟ್ ಮೆಟ್ರೋ ನಿಲ್ದಾಣದ ಹಿಂಭಾಗದಲ್ಲಿ ನಡೆಯಿತು. ಈ ಸ್ಥಳಗಳಲ್ಲಿ ನಾಟಕ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ವಜನಿಕರು ತ್ಯಾಜ್ಯ ವಿಂಗಡಣೆ, ಸಮರ್ಪಕ ನಿರ್ವಹಣೆ, ಜಲಮೂಲಗಳ ಸಂರಕ್ಷಣೆ, ನೀರಿನ ಮಿತ ಬಳಕೆ ಹಾಗೂ ಏಕಬಳಕೆ ಪ್ಲಾಸ್ಟಿಕ್ ನಿಷೇಧದ ಮಹತ್ವವನ್ನು ಅರಿತುಕೊಂಡರು. “ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ನಗರ ನಿರ್ಮಾಣಕ್ಕೆ ನಾವು ಬದಲಾಗೋಣ, ಬೆಂಗಳೂರು ಸ್ವಚ್ಛತೆಯೆಡೆಗೆ ಸಾಗಿಸೋಣ” ಎಂಬ ದೃಢ ಸಂಕಲ್ಪವನ್ನು ಎಲ್ಲರೂ ಸ್ವೀಕರಿಸಿದರು.
