ಹಬ್ಬಕ್ಕೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್: ಗೃಹಲಕ್ಷ್ಮಿಯರ ಖಾತೆಗೆ ಒಟ್ಟಾಗಿ ₹6,000 ಜಮೆ

Untitled design 2026 03 17T173513.996

ಬೆಂಗಳೂರು: ರಾಜ್ಯದ ಕೋಟ್ಯಂತರ ಮಹಿಳೆಯರು ಬಹುಕಾಲದಿಂದ ಕಾಯುತ್ತಿದ್ದ ‘ಗೃಹಲಕ್ಷ್ಮಿ’ ಯೋಜನೆಯ ಹಣ ಅಂತಿಮವಾಗಿ ಬಿಡುಗಡೆಯಾಗಿದೆ. ಯುಗಾದಿ ಮತ್ತು ರಂಜಾನ್ ಹಬ್ಬಗಳ ಸರಣಿ ಸಂಭ್ರಮದಲ್ಲಿರುವ ಗೃಹಿಣಿಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಬಾಕಿ ಇದ್ದ ಮೂರು ಕಂತುಗಳ ಹಣವನ್ನು ಒಟ್ಟಾಗಿ ಬಿಡುಗಡೆ ಮಾಡಿದೆ. ಈ ಮೂಲಕ ಪ್ರತಿ ಅರ್ಹ ಫಲಾನುಭವಿಯ ಖಾತೆಗೆ ಬರೋಬ್ಬರಿ 6,000 ರೂಪಾಯಿ ಜಮೆಯಾಗುತ್ತಿದ್ದು, ಹಬ್ಬದ ಖರ್ಚಿಗೆ ಸಹಾಯಕವಾಗಿದೆ.

ತಾಂತ್ರಿಕ ಕಾರಣಗಳಿಂದ ಕಳೆದ ಕೆಲವು ತಿಂಗಳುಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ವಿಳಂಬವಾಗಿತ್ತು. ಇದರಿಂದಾಗಿ ಮಹಿಳೆಯರಲ್ಲಿ ಆತಂಕ ಮೂಡಿತ್ತು. ಆದರೆ, ಈಗ 27ನೇ ಕಂತಿನ ಹಣದ ಜೊತೆಗೆ ಬಾಕಿ ಇದ್ದ ಹಿಂದಿನ ಎರಡು ಕಂತುಗಳನ್ನು ಸೇರಿಸಿ ಸರ್ಕಾರ ಬಿಡುಗಡೆ ಮಾಡಿದೆ. ಈಗಾಗಲೇ ರಾಜ್ಯದ 1.1 ಕೋಟಿಗೂ ಅಧಿಕ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಪ್ರಕ್ರಿಯೆ ಚಾಲನೆಯಲ್ಲಿದೆ.

ಸದ್ಯದ ಮಾಹಿತಿಯ ಪ್ರಕಾರ, ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಣ ವರ್ಗಾವಣೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಹಾಸನ, ಕೊಡಗು. ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಗದಗ, ಬಾಗಲಕೋಟೆ, ಕಲಬುರಗಿ ಜಿಲ್ಲೆಯ ಮಹಿಳೆಯ ಖಾತೆಗ ಈಗಾಗಲೇ ಹಣ ಜಮೆಯಾಗಿದೆ. ಉಳಿದ ಜಿಲ್ಲೆಗಳಲ್ಲಿ ಬ್ಯಾಂಕ್ ಪ್ರಕ್ರಿಯೆಗಳು ನಡೆಯುತ್ತಿದ್ದು, ಮುಂದಿನ 48 ರಿಂದ 72 ಗಂಟೆಗಳ ಒಳಗೆ (3 ದಿನಗಳ ಒಳಗಾಗಿ) ಎಲ್ಲಾ ಅರ್ಹ ಫಲಾನುಭವಿಗಳ ಖಾತೆಗೂ ಹಣ ತಲುಪಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಖಚಿತಪಡಿಸಿದೆ.

ನಿಮ್ಮ ಖಾತೆಗೆ 6,000 ರೂ. ಜಮೆಯಾಗಿದೆಯೇ ಎಂದು ತಿಳಿಯಲು ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಈ ಕೆಳಗಿನ ವಿಧಾನಗಳ ಮೂಲಕ ನೀವೇ ಪರಿಶೀಲಿಸಬಹುದು:

  1. ಡಿಬಿಟಿ ಕರ್ನಾಟಕ (DBT Karnataka) ಆ್ಯಪ್: ಗೂಗಲ್ ಪ್ಲೇ ಸ್ಟೋರ್‌ನಿಂದ ಈ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ, ನಿಮ್ಮ ಆಧಾರ್ ಸಂಖ್ಯೆ ಬಳಸಿ ಲಾಗಿನ್ ಆಗಿ ‘ಗೃಹಲಕ್ಷ್ಮಿ’ ಸ್ಟೇಟಸ್ ಪರಿಶೀಲಿಸಿ.

  2. ಬ್ಯಾಂಕ್ ಪಾಸ್‌ಬುಕ್ ಅಪ್‌ಡೇಟ್: ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಪಾಸ್‌ಬುಕ್ ಎಂಟ್ರಿ ಮಾಡಿಸಿ ಅಥವಾ ಎಟಿಎಂ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಿ.

  3. ಮೊಬೈಲ್ ಸಂದೇಶ: ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬ್ಯಾಂಕ್‌ನಿಂದ ಎಸ್‌ಎಂಎಸ್ ಬಂದಿದೆಯೇ ಎಂದು ಗಮನಿಸಿ.

ಯುಗಾದಿಯ ಹೊಸ ವರ್ಷದ ಆಚರಣೆ ಮತ್ತು ರಂಜಾನ್ ಉಪವಾಸದ ಸಂಭ್ರಮದಲ್ಲಿರುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸರ್ಕಾರದ ಈ ನಡೆ ದೊಡ್ಡ ಮಟ್ಟದ ನೆಮ್ಮದಿ ತಂದಿದೆ. ಹಬ್ಬದ ಹೊಸ ಬಟ್ಟೆ, ಸಿಹಿ ತಿಂಡಿ ಮತ್ತು ಮನೆ ಬಳಕೆಯ ವಸ್ತುಗಳ ಖರೀದಿಗೆ ಈ 6,000 ರೂಪಾಯಿ ಸಹಕಾರಿಯಾಗಲಿದೆ.

Exit mobile version