ಅಡುಗೆ ಅನಿಲ ಸಬ್ಸಿಡಿ ನಿಲ್ಲಿಸಿದ ಬಿಜೆಪಿ ವಿರುದ್ಧ ಈಶ್ವರ ಖಂಡ್ರೆ ವಾಗ್ದಾಳಿ

ಯುಪಿಎ ಸರ್ಕಾರ ಕೊಟ್ಟ ಸಬ್ಸಿಡಿ ಕಸಿದ ಬಿಜೆಪಿ ಎಂದು ಆರೋಪ

Film (67)

ಯುಪಿಎ ಕಾಲದಲ್ಲಿ ನೀಡಲಾಗುತ್ತಿದ್ದ ಅಡುಗೆ ಅನಿಲ (ಗ್ಯಾಸ್) ಸಬ್ಸಿಡಿಯನ್ನು ಹಿಂಪಡೆದು, ಜನರಿಗೆ ದ್ರೋಹ ಮಾಡಿದ ಬಿಜೆಪಿಗರಿಗೆ ಬೆಲೆ ಏರಿಕೆ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.
ಬೀದರ್ ನಗರದ ನೆಹರೂ ಕ್ರೀಡಾಂಗಣದಲ್ಲಿಂದು ನಡೆದ 2025 ಕೋಟಿ ರೂ. ಮೌಲ್ಯದ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಉಡಾನ್ ಯೋಜನೆಯಡಿ ನೀಡುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರ್ಕಾರ 3 ವರ್ಷದ ಬಳಿಕ ನಿಲ್ಲಿಸಿದ ಕಾರಣ ಬೀದರ್ ನಾಗರಿಕ ವಿಮಾನಯಾನ ಸೇವೆ ಕಳೆದ ಒಂದೂವರೆ ವರ್ಷದಿಂದ ಸ್ಥಗಿತವಾಗಿತ್ತು. ಹೀಗಾಗಿ ಬೀದರ್ ಜನರು, ವ್ಯಾಪಾರಸ್ಥರು, ಸಾಫ್ಟ್ ವೇರ್ ಉದ್ಯಮಿಗಳು, ಪ್ರವಾಸಿಗರು ವಿಮಾನ ಹತ್ತಲು ಹೈದ್ರಾಬಾದ್ ಅಥವಾ ಗುಲ್ಬರ್ಗಾಕ್ಕೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಈಗ ರಾಜ್ಯ ಸರ್ಕಾರವೇ ಸಬ್ಸಡಿ ನೀಡಿ ವಿಮಾನಯಾನ ಸೇವೆ ಆರಂಭಿಸಿದೆ ಎಂದರು.
ಕಾರ್ಯಕ್ರಮ ಬಹಿಷ್ಕರಿಸಿದ ಬಿಜೆಪಿಗೆ ನೈತಿಕತೆ ಇಲ್ಲ:
ಇಂತಹ ಐತಿಹಾಸಿಕ ಕಾರ್ಯಕ್ರಮ ಬಹಿಷ್ಕರಿಸಿದ ಬಿಜೆಪಿಯವರಿಗೆ ಬೆಲೆ ಏರಿಕೆ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಅವರ ಕಾರ್ಯಕಾಲದಲ್ಲಿ ಯಾವುದೇ ಕಾಮಗಾರಿ ಆಗಲಿಲ್ಲ. ಅಡುಗೆ ಅನಿಲ ಸಿಲಿಂಡರ್ ದರವನ್ನು 50 ರೂಪಾಯಿ ಹೆಚ್ಚಳ ಮಾಡಿದ್ದು ಕೇಂದ್ರ ಬಿಜೆಪಿ ಸರ್ಕಾರ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೀದರ್ ನಂ.1 ಆಗಬೇಕು:
ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೀದರ್ ಜಿಲ್ಲೆ ನಂ.1 ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ. ಹೃದಯರೋಗದಿಂದ ಬಳಲುವವರು ಚಿಕಿತ್ಸೆಗಾಗಿ ಕಲಬುರ್ಗಿ, ಸೋಲಾಪುರ್, ಹೈದ್ರಾಬಾದ್ ಗೆ ಹೋಗುವ ಸ್ಥಿತಿ ಇತ್ತು. ಈಗ ಬ್ರಿಮ್ಸ್ ನಲ್ಲಿ ಸೂಪರ್ ಸ್ಪೆಷಾಲಿಟಿ ಹೃದ್ರೋಗ ಚಿಕಿತ್ಸಾ ಘಟಕ ಮತ್ತು ಕ್ಯಾಥ್ ಲ್ಯಾಬ್ ನಿರ್ಮಿಸಲಾಗಿದ್ದು, ಅದರ ಉದ್ಘಾಟನೆ ನೆರವೇರುತ್ತಿದೆ. ಬೀದರ್ ಜನತೆಗೆ ಇಲ್ಲಿಯೇ ಗುಣಮಟ್ಟದ ಚಿಕಿತ್ಸೆ ಲಭಿಸಲಿದೆ ಎಂದರು.
ಕಾರಂಜಾ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ನೀಡಲು ಮನವಿ:
ಕಾರಾಂಜಾ ಜಲಾಶಯ ನಿರ್ಮಾಣಕ್ಕಾಗಿ ಬೀದರ್ ಜಿಲ್ಲೆಯ 8-9 ಗ್ರಾಮಗಳು ಮುಳುಗಡೆ ಆದವು. 70ರ ದಶಕದಲ್ಲಿ ಈ ಗ್ರಾಮಗಳ ಜನರು 20 ಸಾವಿರ ಎಕರೆ ಭೂಮಿ ಕಳೆದುಕೊಂಡರು. ಜಿಲ್ಲೆಯ ಅಭಿವೃದ್ಧಿಗಾಗಿ ತಮ್ಮ ಅಮೂಲ್ಯ ಆಸ್ತಿ ಕಳೆದುಕೊಂಡವರಿಗೆ ಕೇವಲ ಎಕರೆಗೆ 2000 -3000 ಪರಿಹಾರ ನೀಡಲಾಗಿತ್ತು. ಕೆಲವರು ಈ ಅಲ್ಪ ಪರಿಹಾರ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಏರಿದರು. ನ್ಯಾಯಾಲಯಕ್ಕೆ ಹೋದವರಿಗೆ ದೊಡ್ಡ ಪರಿಹಾರ ಸಿಕ್ಕಿತು. ಆದರೆ ಬಾಯಿಲ್ಲದವರಿಗೆ, ದಮನಿತರಿಗೆ, ಬಡವರಿಗೆ ಅನ್ಯಾಯವಾಯಿತು. ಇಂದು ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿಗಳು ಇಲ್ಲಿದ್ದೀರಿ. ಕಾರಂಜಾ ಜಲಾಶಯ ಸಂತ್ರಸ್ತರ ನೋವನ್ನು ಅರ್ಥ ಮಾಡಿಕೊಂಡು ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ನ್ಯಾಯಯುತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಇನ್ನು ಬೀದರ್ ಜಿಲ್ಲೆಯಲ್ಲಿ ಶೇ.10ರಷ್ಟು ಮಾತ್ರ ನೀರಾವರಿ ಇದೆ. ಇಲ್ಲಿ ಅನೇಕ ಕಾರಣದಿಂದ ನೀರಾವರಿಗೆ ಹೆಚ್ಚಿನ ಆದ್ಯತೆ ದೊರೆತಿಲ್ಲ. ಗೋದಾವರಿ ಬೇಸಿನ್ ನಲ್ಲಿ 23 ಟಿ.ಎಂ.ಸಿ. ನೀರು ಬಳಕೆಗೆ ಅವಕಾಶ ಇದೆ. ಆದರೆ ಅದು ಕಾರ್ಯಗತವಾಗಿಲ್ಲ, ಬಸವ ಏತ ನೀರಾವರಿ ಹಾಗೂ ನಾಲ್ಕು ಬ್ರಿಜ್ ಕಮ್ ಬ್ಯಾರೇಜ್ ಕಾರ್ಯಗತಗೊಳಿಸಬೇಕು. ಇದಕ್ಕಾಗಿ ಮುಖ್ಯಮಂತ್ರಿಗಳು ಮತ್ತು ನೀರಾವರಿ ಸಚಿವರು ವಿಶೇಷ ಆಸಕ್ತಿ ತಳೆಯಬೇಕು. ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ನಮ್ಮ ತಂದೆ ಭೀಮಣ್ಣ ಖಂಡ್ರೆ ಅವರು ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು 1969ರಲ್ಲಿ ಆರಂಭಿಸಿದರು. ಇದು ಜಿಲ್ಲೆಯ ರೈತರ ಜೀವನಾಡಿಯಾಗಿತ್ತು. ಆದರೆ 2017-18ರಿಂದ ಆಡಳಿತ ಮಂಡಳಿ ವೈಫಲ್ಯದಿಂದ ಕಾರ್ಖಾನೆ ಸ್ಥಗಿತವಾಗಿದ್ದು, ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಇದರ ಪುನಶ್ಚೇತನಕ್ಕೆ ಕ್ರಮ ಜರುಗಿಸಲು ನಾನು ಮನವಿ ಮಾಡುತ್ತೇನೆ ಎಂದರು.
ಬೀದರ್ ವಿಶ್ವ ವಿದ್ಯಾಲಯದಲ್ಲಿ ಕೇವಲ 1 ಹುದ್ದೆ ಮಾತ್ರ ಪರ್ಮನೆಂಟ್ ಇದೆ. ಈ ವಿಶ್ವವಿದ್ಯಾಲಯಕ್ಕೆ ಕಾಯಕಲ್ಪ ಆಗಬೇಕು. ಹಿಂದುಳಿದ ಬೀದರ್ ಜನರಿಗೆ ಉನ್ನತ ಶಿಕ್ಷಣ ಸಿಗಬೇಕಾದರೆ ಈ ವಿಶ್ವವಿದ್ಯಾಲಯಕ್ಕೆ ಕಾಯಕಲ್ಪ ಆಗಲೇಬೇಕು., ಇದಕ್ಕಾಗಿ ವಿಶೇಷ ಅನುದಾನ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವರಾದ ಸುಧಾಕರ್ ಅವರನ್ನು ವಿನಂತಿಸಿದರು.
ಬಸವ ಕಲ್ಯಾಣದ ಅತ್ಯಾಧುನಿಕ ಅನುಭವ ಮಂಟಪ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸೂ ಆಗಿದೆ. ಆಧುನಿ ಅನುಭವ ಮಂಟಪ ಕಾಮಗಾರಿಗೆ ನಮ್ಮ ಸರ್ಕಾರ 125 ಕೋಟಿ ಕೊಟ್ಟಿದೆ. ಮುಂದಿನ ವರ್ಷ ಏಪ್ರಿಲ್ ಒಳಗೆ ಕಾಮಗಾರಿ ಪೂರ್ಣಗೊಳಿಸುವುದು ನಮ್ಮ ಗುರಿಯಾಗಿದೆ. ಮುಂದಿನ ಏಪ್ರಿಲ್ ಒಳಗೆ ಕಾಮಗಾರಿ ಮುಗಿಸಿ ಲೋಕಾರ್ಪಣೆ ಮಾಡಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣಕ್ಕೆ ಹಿಂದಿನ ಬಿಜೆಪಿ ಸರ್ಕಾರ ಒಂದು ರೂಪಾಯಿ ಅನುದಾನ ಬಿಡುಗಡೆ ಮಾಡಲಿಲ್ಲ. ಡಿಪಿಆರ್ ಮಾಡಿಸಲಿಲ್ಲ. ಈಗ ಆರೋಪ ಮಾಡುತ್ತಾರೆ. ಇಂದು ಈ ಸಂಕೀರ್ಣಕ್ಕೆ ಶಂಕುಸ್ಥಾಪನೆ ಆಗುತ್ತಿದ್ದು ಮುಂದಿನ 18 ತಿಂಗಳಲ್ಲಿ ಇದನ್ನು ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದರು.

ADVERTISEMENT
ADVERTISEMENT
Exit mobile version