ಪ್ಲಾಸ್ಟಿಕ್ ಪಿಡುಗು ನಿರ್ಮೂಲನೆಗೆ ಪಣ ತೊಡಿ: ವಿದ್ಯಾರ್ಥಿಗಳಿಗೆ ಡಾ.ಪ್ರಸಾದ್‌ ಕರೆ

Untitled design 2026 02 26T191233.850

ಧಾರವಾಡ: ಇಲ್ಲಿನ ಸನ್ಮತಿ ಮಾರ್ಗದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಪಾಸಿಬಲ್ ಟುಗೆದರ್ ಸಂಸ್ಥೆ ಪ್ರಾರಂಭಿಸಿದ ಮೆಗಾ ಪರಿಸರ ಮಿಷನ್‌ನ ʼಲೆಟ್ಸ್ ಸ್ಟಾಪ್ ಆಸ್ಕಿಂಗ್ ಫಾರ್ ಒಟಿಪಿ (ಒನ್ ಟೈಮ್ ಪ್ಲಾಸ್ಟಿಕ್)ʼ ಎಂಬ ಅಭಿಯಾನವನ್ನ ಸ್ವರ್ಣ ಗ್ರೂಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಚಿಗರುಪಾಟಿ ವಿ.ಎಸ್.ವಿ.ಪ್ರಸಾದ ನೇತೃತ್ವದಲ್ಲಿ ದಿ. 25ರಂದು ಚಾಲನೆ ನೀಡಲಾಯಿತು.

ಅಂಗಡಿ ಮಾಲಕರಿಗೆ ಪೇಪರ್ ಚೀಲಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ. ಪ್ರಸಾದ, ಪರಿಸರವನ್ನು ಕಾಪಾಡಿ ಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಅದರಲ್ಲಿ ವಿಫಲವಾಗಿರುವ ಕಾರಣದಿಂದಲೇ ಭೂಕುಸಿತ ಹಾಗೂ ಪ್ರವಾಹದಂತಹ ಸ್ಥಿತಿಗಳನ್ನು ನಾವು ಎದುರಿಸುತ್ತಿದ್ದು, ಮಕ್ಕಳೆಲ್ಲರೂ ಕೈ ಜೋಡಿಸಲು ವಿನಂತಿಸಿದರಲ್ಲದೇ ಪೋಸ್ಸಿಬಲ್ ಟುಗೆದರ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ವಿಜಯಲಕ್ಷ್ಮಿ ಪೆರಿಯವರ ಯತ್ನ ಶ್ಲಾಘನೀಯ ಎಂದರು.

ವಿದ್ಯಾರ್ಥಿಗಳೇ ಭವಿಷ್ಯದ ನಾಗರಿಕರು. ಅಂತಹ ಮಕ್ಕಳೆಲ್ಲರೂ ಪ್ಲಾಸ್ಟಿಕ್ ಪಿಡುಗನ್ನು ನಿರ್ಮೂಲನೆ ಮಾಡಲು ಪಣ ತೊಟ್ಟಲ್ಲಿ ಅದು ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಡೀ ವಿಶ್ವದಲ್ಲೇ ಇಂದು ಪ್ಲಾಸ್ಟಿಕ್ ನಿರ್ಮೂಲನೆ ಮಾಡುವ ಯತ್ನಗಳು ನಡೆದಿದ್ದು, ಪರಿಸರ ಸ್ನೇಹಿ ಪರ್ಯಾಯ ಉತ್ತೇಜಿಸಬೇಕೆಂದು ಡಾ. ಪ್ರಸಾದ್‌ ಮನವಿ ಮಾಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಾರ್ಮಿಕ ಸಚಿವ ಸಂತೋಷ್. ಎಸ್. ಲಾಡ್‌ ಒಂದು ಬಾರಿ ಬಳಕೆ ಪ್ಲಾಸ್ಟಿಕ್ ಕವರ್‌ಗಳ ಬದಲಿಗೆ ಮಕ್ಕಳು ಮಾಡಿದ ಕಾಗದ ಚೀಲಗಳನ್ನು ಅಂಗಡಿಗಳಿಗೆ ಕೊಡುವುದು ಬಹಳ ಶ್ಲಾಘನೀಯ. ಇದು ಒಂದು ಜಾಗೃತಿ ಕಾರ್ಯಕ್ರಮ ಮಾತ್ರವಲ್ಲದೆ ಜನರಲ್ಲಿ ನಿಜವಾದ ಬದಲಾವಣೆ ತರುವಂತ ಕಾರ್ಯಕ್ರಮ ಎಂದರು.

ಇನ್ನೂ ಕಾರ್ಯಕ್ರಮದಲ್ಲಿ ಮಾತನಾಡಿದ ಪೋಸ್ಸಿಬಲ್ ಟುಗೆದರ್ ಸಂಸ್ಥಾಪಕಿ ವಿಜಯಲಕ್ಷ್ಮಿ ಪೆರಿ , ಈ ಮಿಷನ್ ಬದಲಾವಣೆಯನ್ನು ಸೃಷ್ಟಿಸಲು ಮತ್ತು ಹುಬ್ಬಳ್ಳಿ-ಧಾರವಾಡವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಜನರ ಚಳುವಳಿಯಾಗಿದೆ ಎಂದು ಹೇಳಿದರು.

ಪಾಸಿಬಲ್ ಟುಗೆದರ್, ಹುಬ್ಬಳ್ಳಿ–ಧಾರವಾಡದಾದ್ಯಂತ ಪೇಪರ್ ಬ್ಯಾಗ್ ಮೇಕಿಂಗ್ ಕಾಂಪಿಟೇಶನ್ಮೂಲಕ ವಿದ್ಯಾರ್ಥಿಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಪೇಪರ್ ಬ್ಯಾಗ್‌ಗಳನ್ನು ಸಂಗ್ರಹಿಸಿದೆಯಲ್ಲದೆ ಮಕ್ಕಳಲ್ಲಿ ಹಾಗೂ ಪಾಲಕರಲ್ಲಿ ಜಾಗೃತಿ ಮೂಡಿಸಲು ಪ್ಲಾಸ್ಟಿಕ್ ಬಳಕೆ ಕುರಿತಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿತ್ತು. ವಿಜೇತ ಶಾಲೆಗಳಿಗೆ ,ಶಿಕ್ಷಕರಿಗೆ ಸ್ಮರಣಿಕೆ ವಿತರಿಸಲಾಯಿತು.

ಈ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಆರ್ಯನ್ ಶಾಲೆ, ಶ್ರೀಮತಿ ವಿಮಲಾ ಕುಲಕರ್ಣಿ ಮೆಮೋರಿಯಲ್ ಶಾಲೆ, ಚಿನ್ಮಯ  ಸಿಬಿಎಸ್‌ಇ ಶಾಲೆ, ಎಚ್.ಎಫ್ ಕಟ್ಟಿಮನಿ ಶಾಲೆ, ಧಾರವಾಡದ ಜೆಎಸ್ ಎಸ್ ಮಂಜುನಾಥೇಶ್ವರ ಮುರುಘಾಮಠ ಶಾಲೆ, ಕರ್ನಾಟಕ ಶಾಲೆ, ಜಯದೇವಿತಾಯಿ ಲಿಗಾಡೆ ಶಾಲೆಗಳು ಭಾಗವಹಿಸಿತ್ತು. ಸ್ಪರ್ಧೆಯಲ್ಲಿ ಜೆಎಸ್ ಎಸ್ ಮಂಜುನಾಥೇಶ್ವರ ಸ್ಟೇಟ್ ಇಂಗ್ಲಿಷ್ ಮೀಡಿಯಂ ಶಾಲೆಯು ಪ್ರಥಮ ಬಹುಮಾನ ಪಡೆಯಿತು.

ಜೆಎಸ್ ಎಸ್ ಮಂಜುನಾಥೇಶ್ವರ ಸ್ಟೇಟ್ ಇಂಗ್ಲಿಷ್ ಮೀಡಿಯಂ ಶಾಲೆಯ ನಾಲ್ಕನೇ ತರಗತಿಯ ವಿಧ್ಯಾರ್ಥಿನಿ ರಿತ್ವಿಕಾ ಕರಿಗಾರ್ ಬಂಪರ್ ಬಹುಮಾನ ಗೆದ್ದಿದ್ದು, ಆರ್ಯನ್ ಶಾಲೆಯ ಜಿಯ ಮಧುರ್ಕರ್ , ಜೆಎಸ್ ಎಸ್ ಮುರುಘಾಮಠ ಶಾಲೆಯ ಅಂಕಿತಾ, ಜೆಎಸ್ ಎಸ್ ಸ್ಟೇಟ್ ಸಿಲೆಬಸ್ ವಿದ್ಯಾಗಿರಿ ಶಾಲೆಯ ಪ್ರಿಷಾ ಪವಾರ್ ಹಾಗೂ ಶ್ರೀಮತಿ ವಿಮಲಾ ಕುಲಕರ್ಣಿ ಮೆಮೋರಿಯಲ್ ಶಾಲೆಯ ಶ್ರೇಯಾ ಶಿರಸಂಗಿ ಕೈ ಗಡಿಯಾರಗಳನ್ನು ಬಹುಮಾನ ರೂಪದಲ್ಲಿ ಪಡೆದರು.

ಕಾರ್ಯಕ್ರಮದಲ್ಲಿ ಡಿಡಿಪಿಐ ಎಸ್ ಎಸ್.ಕೆಳದಿಮಠ, ಏಕಸ್ ಕಂಪನಿಯ ಸಿಟಿಒ ರವಿ ಗುತ್ತಲ , ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಂ.ಆರ್. ಪಾಟೀಲ್ ಉಪಸ್ಥಿತರಿದ್ದರು.

Exit mobile version