ಡಿ.ಕೆ ಶಿವಕುಮಾರ್‌ ಯುಗಾರಂಭಕ್ಕೆ ಕ್ಷಣಗಣನೆ: ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ಪ್ರಮಾಣ ವಚನ ಲೈವ್ ಪ್ರಸಾರ

Untitled design 2026 06 03T154306.093

ಬೆಂಗಳೂರು: ಇಡೀ ಕರ್ನಾಟಕವೇ ಭಾರಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಆ ಐತಿಹಾಸಿಕ ಕ್ಷಣಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಜನಪ್ರಿಯ ನಾಯಕ ಡಿ.ಕೆ. ಶಿವಕುಮಾರ್ ಅವರು ಇಂದು ಸಂಜೆ ಸರಿಯಾಗಿ 4 ಗಂಟೆಗೆ ಲೋಕಭವನದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.

ರಾಜಧಾನಿ ಬೆಂಗಳೂರಿನ ಲೋಕಭವನದ ಭವ್ಯ ಗಾಜಿನ ಮನೆಯಲ್ಲಿ (ಗ್ಲಾಸ್ ಹೌಸ್) ಇಂದು ಸಂಜೆ 4.05ಕ್ಕೆ ಆಯೋಜಿಸಲಾಗಿರುವ ಈ ಹೈ-ವೋಲ್ಟೇಜ್ ಸಮಾರಂಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ಅವರ ನೂತನ ಸಂಪುಟದ ಪ್ರಮುಖ ಸಚಿವರೂ ಸಹ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮಹತ್ವದ ರಾಜಕೀಯ ಇತಿಹಾಸಕ್ಕೆ ಇಡೀ ನಾಡಿನ ಜನತೆಯನ್ನು ಸಾಕ್ಷಿಯಾಗಿಸಲು ವಾರ್ತಾ ಇಲಾಖೆ ಹೈ-ಟೆಕ್ ಮಾಸ್ಟರ್ ಪ್ಲಾನ್ ರೂಪಿಸಿದೆ.

ಪ್ರತಿ ಬಸ್ ನಿಲ್ದಾಣವೂ ಆಗಲಿದೆ ಲೈವ್ ಸ್ಟೇಡಿಯಂ

ದೂರದ ಊರುಗಳಿಗೆ ಪ್ರಯಾಣಿಸುವ ಸಾಮಾನ್ಯ ಜನರಿಗೆ ಹಾಗೂ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಈ ಸಂಭ್ರಮದ ಕ್ಷಣ ಮಿಸ್ ಆಗಬಾರದು ಎನ್ನುವ ಕಾರಣಕ್ಕೆ ರಾಜ್ಯಾದ್ಯಂತ ಇರುವ ಪ್ರಮುಖ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಇಡೀ ಸಮಾರಂಭವನ್ನು ದೊಡ್ಡ ಡಿಜಿಟಲ್ ಪರದೆಗಳ ಮೂಲಕ ಉಚಿತವಾಗಿ ನೇರ ಪ್ರಸಾರ (ಲೈವ್ ಟೆಲಿಕಾಸ್ಟ್) ಮಾಡಲು ಸರ್ಕಾರ ಸಜ್ಜಾಗಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ‘ವೃತ್ತಿ ಸೊಲ್ಯೂಷನ್ಸ್ ಲಿಮಿಟೆಡ್’ ಸಂಸ್ಥೆಯ ಸಹಯೋಗದೊಂದಿಗೆ ಈ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಕಲ್ಪಿಸಿದೆ. ಪ್ರಯಾಣಿಕರು ತಾವು ನಿಂತ ಜಾಗದಲ್ಲೇ ಹೊಸ ಸರ್ಕಾರದ ಉದಯವನ್ನು ಕಣ್ಣಾರೆ ವೀಕ್ಷಿಸಬಹುದಾಗಿದೆ.

ಯಾವೆಲ್ಲ ಬಸ್ ನಿಲ್ದಾಣಗಳಲ್ಲಿ ಲೈವ್ ಪ್ರಸಾರ?

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರಿನ ಸುಬ್ರಹ್ಮಣ್ಯ ನಗರ ಬಸ್ ನಿಲ್ದಾಣ, ಹುಬ್ಬಳ್ಳಿ, ಧಾರವಾಡ, ಕಲಬುರ್ಗಿ, ಬೆಳಗಾವಿ, ಮಂಗಳೂರು, ಶಿವಮೊಗ್ಗ, ದಾವಣಗೆರೆ, ತುಮಕೂರು, ಹಾಸನ, ಚಿಕ್ಕಮಗಳೂರು, ರಾಯಚೂರು, ಬಳ್ಳಾರಿ, ವಿಜಯಪುರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳ ಮತ್ತು ಪ್ರಮುಖ ಪಟ್ಟಣಗಳ ಬಸ್ ನಿಲ್ದಾಣಗಳಲ್ಲಿ ಈ ಲೈವ್ ಪ್ರಸಾರ ವ್ಯವಸ್ಥೆ ಇರಲಿದೆ. ಒಟ್ಟು 230 ಬಸ್ ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರತಿ ನಿಲ್ದಾಣದಲ್ಲೂ ಕನಿಷ್ಠ ಎರಡು ದೊಡ್ಡ ಪರದೆಗಳನ್ನು ಅಳವಡಿಸಲಾಗಿದೆ.

ದೇವೇಗೌಡರು, ಬಿಎಸ್ ಯಡಿಯೂರಪ್ಪ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯದ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಲೋಕಭವನದ ಗಾಜಿನ ಮನೆಯನ್ನು ದೀಪಗಳಿಂದ ಅಲಂಕರಿಸಲಾಗಿದೆ.

ಡಿ.ಕೆ. ಶಿವಕುಮಾರ್ ಅವರ ಬಹುನಿರೀಕ್ಷಿತ ಪ್ರಮಾಣ ವಚನ ಸಮಾರಂಭಕ್ಕಾಗಿ ಪಕ್ಷದ ಕಾರ್ಯಕರ್ತರು ಕಳೆದೊಂದು ವಾರದಿಂದಲೂ ತಯಾರಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡರ ಪ್ರಕಾರ, ‘ಇದು ಕೇವಲ ಒಬ್ಬ ವ್ಯಕ್ತಿಯ ಅಧಿಕಾರ ಸ್ವೀಕಾರವಲ್ಲ ಬದಲಿಗೆ ಹೊಸ ಕರ್ನಾಟಕದ ನಿರ್ಮಾಣದ ಆರಂಭ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Exit mobile version