ಕಾಂಗ್ರೆಸ್ ಮುಖಂಡನ ಹ*ತ್ಯೆ ಕೇಸ್: 8 ಆರೋಪಿಗಳ ಬಂಧನ

Untitled design 2026 04 12T180001.684

ಧಾರವಾಡ, ಏಪ್ರಿಲ್ 12: ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪನಗರ ಠಾಣೆ ಪೊಲೀಸರು ಆರೋಪಿಗಳ ಬಂಧನ ಕಾರ್ಯಾಚರಣೆ ನಡೆಸಿದ್ದಾರೆ. ಕೊಲೆ ಪ್ರಕರಣದ ಒಟ್ಟು 9 ಆರೋಪಿಗಳ ಪೈಕಿ 8 ಮಂದಿಯನ್ನು ಬಂಧಿಸಲಾಗಿದೆ. ಆದರೆ ಮತ್ತೊಬ್ಬ ಆರೋಪಿ ಕೈಫ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ಕೊಲೆಗೆ ಹಿಂದಿನ ವೈಯಕ್ತಿಕ ದ್ವೇಷ ಮತ್ತು ರಿಯಲ್ ಎಸ್ಟೇಟ್ ವ್ಯವಹಾರವೇ ಪ್ರಮುಖ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ.

ಹೇಗೆ ನಡೆಯಿತು ಕೊಲೆ?

ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಶಾ ಹಾಗೂ ಫೈರೋಜ್ ಪಠಾಣ್ ನಡುವೆ ಹಿಂದಿನಿಂದಲೂ ವೈಮನಸ್ಸಿತ್ತು. ಕೆಲ ತಿಂಗಳ ಹಿಂದೆ, ಫೈರೋಜ್ ತನ್ನ ಕೆಲವರೊಂದಿಗೆ ಮಹಮ್ಮದ್ ಶಾ ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ಅಲ್ಲದೆ, ಈ ಘಟನೆಯನ್ನು ಪದೇ ಪದೇ ಇತರರ ಬಳಿ ಹೇಳಿ ತಮಾಷೆ ಮಾಡುತ್ತಿದ್ದರು. ಇದು ಮಹಮ್ಮದ್ ಶಾನ ಕೋಪಕ್ಕೆ ಕಾರಣವಾಗಿತ್ತು. ಅದೇ ಸಮಯದಲ್ಲಿ, ರೌಡಿ ಶೀಟರ್ ಮುತ್ತುಂ ಸೊಗಲದ್ ಮತ್ತು ಫೈರೋಜ್ ನಡುವೆ ರಿಯಲ್ ಎಸ್ಟೇಟ್ ವ್ಯವಹಾರದ ವಿಚಾರವಾಗಿಯೂ ಮನಸ್ತಾಪ ಉಂಟಾಗಿತ್ತು. ಹೀಗೆ ದೂರಾದವರೆಲ್ಲ ಒಂದಾಗಿ ಈ ಕೊಲೆಯ ಸಂಚನ್ನು ರೂಪಿಸಿದ್ದರು.

ಬಂಧಿತ ಆರೋಪಿಗಳು ಯಾರು?

ಪೊಲೀಸರು ಬಂಧಿಸಿರುವ ಆರೋಪಿಗಳಲ್ಲಿ ಪ್ರಮುಖರಾದ ಮಹಮ್ಮದ್ ಶಾ, ಸದ್ಧಾಂ, ಗೌಸ್, ಪರ್ವೇಜ್, ಸಮೀರ್ ಸೇರಿದ್ದಾರೆ. ಇದಲ್ಲದೆ, ಹುಬ್ಬಳ್ಳಿಯಲ್ಲಿ ಹಿಂದೆ ಭೀಕರವಾಗಿ ಹತ್ಯೆಯಾಗಿದ್ದ ರೌಡಿ ಶೀಟರ್ ಫೂಟ್ ಇರ್ಫಾನ್ ಅವರ ಮಗ ಅರ್ಬಾಜ್ ಹಂಚಿನಮನಿ ಮತ್ತು ರೌಡಿ ಶೀಟರ್ ಮುತ್ತುಂ ಸೊಗಲದ್ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈ ಎಲ್ಲಾ ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗುತ್ತಿದೆ. ಪರಾರಿಯಾಗಿರುವ ಕೈಫ್ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ.

ಮೊದಲೇ ಯೋಜಿಸಿದಂತೆ, ಆರೋಪಿಗಳು ಫೈರೋಜ್ ಪಠಾಣ್ ಅವರ ಮನೆಗೆ ನುಗ್ಗಿ, ಚಾಕುಗಳಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದರು. ನಂತರ ಸ್ಥಳದಿಂದ ಪರಾರಿಯಾಗಿದ್ದರು.. ಫೈರೋಜ್ ಪಠಾಣ್ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾಗಿದ್ದು, ಅವರ ಸಕ್ರಿಯತೆ ಮತ್ತು ವ್ಯಕ್ತಿತ್ವಕ್ಕೆ ಅನೇಕ ಅಭಿಮಾನಿಗಳಿದ್ದರು.

ಉಪನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ವಿವಿಧೆಡೆ ದಾಳಿ ಮಾಡಿ 8 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪರಾರಿಯಾಗಿರುವ ಕೈಫ್ ಮೊಬೈಲ್ ಸಿಗ್ನಲ್ ಮತ್ತು ತಂತ್ರಜ್ಞಾನ ನೆರವಿನಿಂದ ಆತನ ಪತ್ತೆಗೆ ಪ್ರಯತ್ನ ನಡೆದಿದೆ. ರಿಯಲ್ ಎಸ್ಟೇಟ್ ವ್ಯವಹಾರದ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Exit mobile version