ಸಿಲಿಂಡರ್ ಕೊರತೆ: ರಾಜ್ಯದಲ್ಲಿ ಮತ್ತಷ್ಟು ರೆಸ್ಟೋರೆಂಟ್, ಹೋಟೆಲ್‌ಗಳು ಬಂದ್

Untitled design 2026 03 22T215359.460

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಯುದ್ಧದ ಪರಿಣಾಮ ಈಗ ರಾಜ್ಯದ ಹೋಟೆಲ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ವಾಣಿಜ್ಯ ಅನಿಲ ಸಿಲಿಂಡರ್‌‌ಗಳ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಹೋಟೆಲ್‌ಗಳು ಬಂದ್ ಆಗುವ ಪರಿಸ್ಥಿತಿ ಎದುರಾಗಿದೆ. ಕೇಂದ್ರ ಸರ್ಕಾರ ಕಮರ್ಷಿಯಲ್ ಗ್ಯಾಸ್ ಪೂರೈಕೆ ಭರವಸೆ ನೀಡಿದ್ದರೂ, ಇನ್ನೂ ಪರಿಸ್ಥಿತಿ ಸಾಮಾನ್ಯವಾಗಿಲ್ಲ.

ನಗರದ ಮೆಜೆಸ್ಟಿಕ್ ಪ್ರದೇಶದಲ್ಲಿರುವ ಪ್ರಸಿದ್ಧ ಚಿಕನ್ ಕೌಂಟಿ ಫ್ಯಾಮಿಲಿ ರೆಸ್ಟೋರೆಂಟ್ ಗ್ಯಾಸ್ ಕೊರತೆಯಿಂದಾಗಿ ಸಂಪೂರ್ಣವಾಗಿ ಬಂದ್ ಆಗಿದೆ. ಮಾಂಸಹಾರಿ ಹೋಟೆಲ್‌ಗಳು ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದು, ಅಡುಗೆಗೆ ಅಗತ್ಯವಾದ ಅನಿಲದ ಕೊರತೆಯಿಂದಾಗಿ ತಮ್ಮ ಬಾಗಿಲು ಮುಚ್ಚುವ ಸ್ಥಿತಿ ಎದುರಾಗಿದೆ.

ನಗರದ ಎಂಪೈರ್ ಹೋಟೆಲ್‌ಗಳಲ್ಲೂ ಗ್ಯಾಸ್ ಕೊರತೆ ಉಂಟಾಗಿದೆ. ಇಲ್ಲಿ ಶೇಕಡಾ 60 ರಷ್ಟು ಮೆನು ಐಟಂಗಳನ್ನು ಕಡಿತಗೊಳಿಸಲಾಗಿದೆ. ಮಟನ್, ಗ್ರಿಲ್ ಚಿಕನ್, ಶವರ್ಮಾ ಸೇರಿದಂತೆ ಹೆಚ್ಚು ಗ್ಯಾಸ್ ಬಳಕೆಯಾಗುವ ಐಟಂಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಿಲಿಂಡರ್ ಸಮಸ್ಯೆ ಪರಿಹಾರವಾಗುವವರೆಗೂ ಈ ಐಟಂಗಳು ಲಭ್ಯವಿರುವುದಿಲ್ಲ ಎಂದು ಹೋಟೆಲ್ ಮೂಲಗಳು ತಿಳಿಸಿವೆ.

ಪ್ರಿಯದರ್ಶಿನಿ ಹೋಟೆಲ್‌ಗಳಲ್ಲಿ ಸೌತ್ ಮತ್ತು ನಾರ್ಥ್ ಇಂಡಿಯನ್ ಮೀಲ್ಸ್, ಚೈನೀಸ್ ಐಟಂಗಳು, ಕರೀಸ್ ಎಲ್ಲವನ್ನೂ ನಿಲ್ಲಿಸಲಾಗಿದೆ. ಗ್ಯಾಸ್ ಕೊರತೆಯಿಂದ ಅನ್ನ-ಸಾಂಬಾರ್ ಹಾಗೂ ಸೀಮಿತ ತಿಂಡಿಗಳು ಮಾತ್ರ ಲಭ್ಯವಾಗುತ್ತಿವೆ. ಇದೇ ರೀತಿ ನಗರದ ಇತರ ಹೋಟೆಲ್‌ಗಳಲ್ಲೂ ಪರಿಸ್ಥಿತಿ ಚಿಂತಾಜನಕವಾಗಿದೆ.

ಧಾರವಾಡದಲ್ಲಿ ಸೌದೆಯ ಅಡುಗೆ

ಧಾರವಾಡದಲ್ಲೂ ಗ್ಯಾಸ್ ಕೊರತೆ ತೀವ್ರವಾಗಿದೆ. ಕೆಲವು ಕಡೆಗಳಲ್ಲಿ ಹೋಟೆಲ್‌ಗಳು ಸೌದೆ ಬಳಸಿ ಅಡುಗೆ ಮಾಡುತ್ತಿವೆ. ಚಿಕನ್ ಬಿರಿಯಾನಿ, ಎಗ್ ಮಸಾಲಾ ಮಾತ್ರ ಲಭ್ಯವಿದ್ದು, ಕಬಾಬ್ ಸೇರಿದಂತೆ ಫಾಸ್ಟ್ ಫುಡ್ ಐಟಂಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಉದ್ಯಮಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಬೀದರ್‌ನಲ್ಲಿ ಸಿಲಿಂಡರ್ ಬೆಲೆ 700 ರೂ.ಗೆ ಏರಿಕೆ

ಬೀದರ್ ಜಿಲ್ಲೆಯಲ್ಲಿ 5 ಕೆಜಿ ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಇದರಿಂದಾಗಿ ಬೆಲೆ 700 ರೂಪಾಯಿಗೆ ಏರಿಕೆಯಾಗಿದೆ. ವಿದ್ಯಾರ್ಥಿಗಳು, ಬ್ಯಾಚುಲರ್ಸ್ ಮತ್ತು ಸಣ್ಣ ಉದ್ಯಮಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನನಿತ್ಯದ ಅಡುಗೆಗೂ ಸಿಲಿಂಡರ್ ಸಿಗದ ಪರಿಸ್ಥಿತಿ ಎದುರಾಗಿದೆ.

ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೂ ಹೊಡೆತ

ಕೊಡಗು ಜಿಲ್ಲೆಯಲ್ಲೂ ಅನೇಕ ಹೋಟೆಲ್‌ಗಳು ಬಂದ್ ಆಗಿವೆ. ಪ್ರವಾಸೋದ್ಯಮ ಪ್ರದೇಶವಾದ ಕೊಡಗಿನಲ್ಲಿ ಹೋಟೆಲ್‌‌ಗಳು ಮುಚ್ಚಿರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲೂ ಕುಸಿತ ಕಂಡುಬಂದಿದೆ. ಪ್ರವಾಸಿಗರ ಕೊರತೆಯಿಂದ ಜೀಪ್ ಚಾಲಕರು ಕೂಡ ಸಂಕಷ್ಟಕ್ಕೆ ಸಿಲುಕಿದ್ದು, ಹಲವರು ಬೇರೆ ಕೆಲಸಗಳಿಗೆ ತಿರುಗಿದ್ದಾರೆ.

ಯುದ್ಧದ ಪರಿಣಾಮ ಅಬ್ಬರ

ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಎಲ್ಪಿಜಿ ಪೂರೈಕೆ ಸರಪಳಿ ತೀವ್ರವಾಗಿ ಪರಿಣಾಮ ಬೀರಿದೆ. ವಾಣಿಜ್ಯ ಸಿಲಿಂಡರ್‌ಗಳ ಕೊರತೆ ರಾಜ್ಯದಾದ್ಯಂತ ಹೋಟೆಲ್ ಉದ್ಯಮವನ್ನು ತತ್ತರಿಸುವಂತೆ ಮಾಡಿದೆ. ಗ್ಯಾಸ್ ಪೂರೈಕೆ ಸರಿಯಾಗದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಹೋಟೆಲ್ ಉದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Exit mobile version