ವಿರೋಧ ಪಕ್ಷದ ಟೀಕೆಗಳೆಲ್ಲಾ ಸುಳ್ಳೆಂದು ಸಾಬೀತಾಗಿದೆ: ಸಿಎಂ ಸಿದ್ದರಾಮಯ್ಯ ತಿರುಗೇಟು

Untitled design 2026 05 19T160101.103

ತುಮಕೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಇಂದು ಆಯೋಜಿಸಲಾಗಿದ್ದ ‘ಸಾಧನಾ ಸಮಾವೇಶ’ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಅದ್ಧೂರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರದ ಮೂರು ವರ್ಷಗಳ ಸಾಧನೆಗಳನ್ನು ಜನರೆದುರು ತೆರೆದಿಡುತ್ತಾ ವಿರೋಧ ಪಕ್ಷಗಳ ಟೀಕೆಗಳಿಗೆ ಭರ್ಜರಿ ತಿರುಗೇಟು ನೀಡಿದರು. ಅಲ್ಲದೆ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾವಿರಾರು ಜನತೆಗೆ ಸಿಎಂ ಧನ್ಯವಾದ ಅರ್ಪಿಸಿದರು. “ತುಮಕೂರಿನ ಜನತೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿರುವುದು ಸರ್ಕಾರದ ಸಾಧನೆಗಳ ಮೇಲಿನ ವಿಶ್ವಾಸವನ್ನು ತೋರಿಸುತ್ತದೆ” ಎಂದರು. ಮೇ 20ಕ್ಕೆ ಮೂರು ವರ್ಷ ತುಂಬುವ ಸಂದರ್ಭದಲ್ಲಿ ಸಚಿವ ಜಿ.ಪರಮೇಶ್ವರ್ ಮತ್ತು ಕೃಷ್ಣ ಬೈರೇಗೌಡರ ಪ್ರಸ್ತಾಪದಂತೆ ಈ ಸಮಾವೇಶವನ್ನು ತುಮೂಕುರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಸರ್ಕಾರದ ಸಾಧನೆಗಳ ವಸ್ತುಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.

158 ಭರವಸೆಗಳ ಈಡೇರಿಕೆ

 “ನಾವು 165 ಮುಖ್ಯ ಭರವಸೆಗಳ ಪೈಕಿ 158ನ್ನು ಈಗಾಗಲೇ ಈಡೇರಿಸಿದ್ದೇವೆ. ಪ್ರಣಾಳಿಕೆಯಲ್ಲಿಲ್ಲದಿದ್ದರೂ 30 ಹೊಸ ಯೋಜನೆಗಳನ್ನು ತಂದಿದ್ದೇವೆ. 5 ಗ್ಯಾರಂಟಿ ಯೋಜನೆಗಳನ್ನು ಮೊದಲ ವರ್ಷದಲ್ಲೇ ಜಾರಿಗೊಳಿಸಿದ್ದೇವೆ. ವಿರೋಧ ಪಕ್ಷಗಳು ‘ರಾಜ್ಯ ದಿವಾಳಿಯಾಗುತ್ತದೆ’ ಎಂದು ಟೀಕಿಸಿದ್ದವು. ಆದರೆ ಇಂದು ಆ ಎಲ್ಲಾ ಟೀಕೆಗಳು ಸುಳ್ಳೆಂದು ಸಾಬೀತುಪಡಿಸಿದ್ದೇವೆ” ಎಂದು ಸಿದ್ದರಾಮಯ್ಯ ಘರ್ಜಿಸಿದರು. ಈ ಗ್ಯಾರಂಟಿ ಯೋಜನೆಗಳಿಗೆ ಇದುವರೆಗೆ ₹1,40,000 ಕೋಟಿಗೂ ಅಧಿಕ ಹಣ ವ್ಯಯಿಸಲಾಗಿದೆ ಎಂದು ಅಂಕಿ-ಅಂಶಗಳೊಂದಿಗೆ ವಿವರಿಸಿದರು.

ಗುಜರಾತ್ ಮಾದರಿಯಲ್ಲ, ಕರ್ನಾಟಕ ಮಾದರಿ

 “ಗುಜರಾತ್ ನಲ್ಲಿ ಬಾಡಿಗೆ ಕಟ್ಟಲಾಗದ ಮಹಿಳೆ ಮತ್ತು ಮಗಳ ಮೇಲೆ ಅತ್ಯಾಚಾರ ನಡೆದಿದೆ. ಹಾಗಾಗಿ ದೇಶಕ್ಕೆ ಗುಜರಾತ್ ಅಲ್ಲ, ಕರ್ನಾಟಕ ಮಾದರಿ ಬೇಕು” ಎಂದು ಸಿಎಂ ಕಿಡಿಕಾರಿದರು.

ಅಂಬಾನಿ-ಅದಾನಿಗೆ ಮಾತ್ರ ಲಾಭ

 “ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ಲಾಭ ಪಡೆದುಕೊಂಡದ್ದು ಅಂಬಾನಿ, ಅದಾನಿ ಇಬ್ಬರು ಮಾತ್ರ. 2014ರಲ್ಲಿ ಗೌತಮ್ ಅದಾನಿ ಅವರ ಆದಾಯ ₹16,500 ಕೋಟಿ ಇತ್ತು, ಇಂದು ₹8 ಲಕ್ಷ ಕೋಟಿಗೆ ಏರಿಕೆಯಾಗಿದೆ. ಮುಕೇಶ್ ಅಂಬಾನಿ ಕೂಡ ಆರ್ಥಿಕವಾಗಿ ಬೆಳೆದಿದ್ದಾರೆ. ಆದರೆ ಸಾಮಾನ್ಯ ಮತ್ತು ಮಧ್ಯಮ ವರ್ಗದವರಿಗೆ ಲಾಭವಾಗಿಲ್ಲ. ‘ಮೋದಿ ಮೋದಿ’ ಎಂದು ವೋಟ್ ಹಾಕಿದವರಿಗೆ ಇಂದು ಭ್ರಮನಿರಸನವಾಗಿದೆ” ಎಂದು ಸಿಎಂ ಕುಟುಕಿದರು.

ನೀಟ್ ಹಗರಣಕ್ಕೆ ಕೇಂದ್ರದ ಹೊಣೆ

 “ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಮೋದಿ ಸರ್ಕಾರವೇ ನೇರ ಕಾರಣ. 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದರೂ ಮರು ಪರೀಕ್ಷೆ ಮಾಡಿಸಲಾಗುತ್ತಿದೆ. ಇದರಿಂದ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೋದಿ ಅವರೇ ಜವಾಬ್ದಾರಿ ತೆಗೆದುಕೊಳ್ಳಬೇಕು” ಎಂದು ಆರೋಪಿಸಿದರು.

ನಿರುದ್ಯೋಗ ಮತ್ತು ಸಾಲ ಏರಿಕೆ

 “12 ವರ್ಷಗಳಲ್ಲಿ 24 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದರೆ ಮೋದಿ ಒಂದೇ ಒಂದು ಉದ್ಯೋಗವನ್ನೂ ಸೃಷ್ಟಿ ಮಾಡಿಲ್ಲ. ದೇಶದಲ್ಲಿ ನಿರುದ್ಯೋಗ ಪ್ರಮಾಣ 67% ಗೆ ಏರಿಕೆಯಾಗಿದೆ. ಸ್ವಾತಂತ್ರ್ಯ ನಂತರದಿಂದ ಮನಮೋಹನ್ ಸಿಂಗ್ ಅಧಿಕಾರದವರೆಗೆ ದೇಶದ ಸಾಲ ₹53,11,000 ಕೋಟಿ ಇತ್ತು. ಇಂದು ₹220 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದೇನಾ ‘ಅಚ್ಚೇ ದಿನ್’?” ಎಂದು ಲೇವಡಿ ಮಾಡಿದರು.

ದೇಶವನ್ನು ಇಬ್ಭಾಗಿಸುವ ಪ್ರಯತ್ನ

 “ಹಿಂದೂ-ಮುಸ್ಲಿಮರ ಮಧ್ಯೆ ಬೆಂಕಿ ಹಚ್ಚಿ ಇಡೀ ದೇಶವನ್ನು ಹಾಳುಗೆಡವಿದ್ದಾರೆ. ಸಮಾಜವನ್ನು ಇಬ್ಭಾಗ ಮಾಡುವ ಕೆಲಸ ನಡೆಯುತ್ತಿದೆ. ಇನ್ನೂ ಎರಡು ವರ್ಷ ಸರ್ಕಾರದಲ್ಲಿರುತ್ತೇವೆ. ಉಳಿದ ಭರವಸೆಗಳನ್ನು ಈಡೇರಿಸುತ್ತೇವೆ. 2028ಕ್ಕೂ ನಾವೇ ಅಧಿಕಾರಕ್ಕೆ ಬರ್ತೀವಿ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

Exit mobile version