ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ದ: ಸಿಎಂ ಸಿದ್ದರಾಮಯ್ಯ

Untitled design 2025 11 28T211453.919

ಬೆಂಗಳೂರು, ನವೆಂಬರ್ 28: ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿಯ ಸಮರ ಇದೀಗ ತಾರಕಕ್ಕೇರಿದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಹೈಕಮಾಂಡ್ ನಿರ್ಧಾರಕ್ಕೆ ತಾವು ಈಗಲೂ ಸಂಪೂರ್ಣ ಬದ್ಧರಿದ್ದೇವೆಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. “ಹೈಕಮಾಂಡ್ ನಾಯಕರು ಏನು ನಿರ್ಧರಿಸಿದರೂ ಅದು ಅಂತಿಮ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ, ಇರಲೂ ಸಾಧ್ಯವಿಲ್ಲ” ಎಂದು ಅವರು ದೃಢವಾಗಿ ಹೇಳಿದರು.

ಉಪಾಹಾರಕ್ಕೆ ಆಹ್ವಾನ
ಪಕ್ಷದ ವರಿಷ್ಠರು ನನಗೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೂ ಕರೆ ಮಾಡಿ ನೀವಿಬ್ಬರೂ ಭೇಟಿ ಮಾಡಿ ಎಂದು ತಿಳಿಸಿರುತ್ತಾರೆ. ಹಾಗಾಗಿ ಅವರನ್ನು ನಾನು ಉಪಹಾರಕ್ಕಾಗಿ ಕರೆದಿದ್ದು, ಅಲ್ಲಿ ಚರ್ಚೆ ಮಾಡುತ್ತೇವೆ. ಡಿ.ಕೆ ಶಿವಕುಮಾರ್ ಅವರು ಹೈಕಮಾಂಡ್ ಹೇಳಿದ್ದನ್ನು ಒಪ್ಪುದಾಗಿ ಹೇಳಿದ್ದಾರೆ ಎಂದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಹಲವು ಬಾರಿ “ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ” ಎಂದು ತಿಳಿಸಿದ್ದಾರೆ ಎಂದು ಸಿಎಂ ತಿಳಿಸಿದರು. “ಅವರು ಕೂಡ ಅನೇಕ ಬಾರಿ ಅದೇ ಮಾತು ಹೇಳಿದ್ದಾರೆ. ನಾನು ಕೂಡ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎಂದೇ ಹೇಳಿದ್ದಾರೆ. ನಮ್ಮಿಬ್ಬರ ನಿಲುವು ಒಂದೇ,” ಎಂದು ಸಿದ್ದರಾಮಯ್ಯ ಹೇಳಿದರು.

ನಂತರ “ಯಾವುದೇ ವಿಷಯ ಇದ್ದರೂ ಹೈಕಮಾಂಡ್ ಎದುರೇ ಚರ್ಚೆ ಮಾಡುತ್ತೇನೆ. ಅವರು ಕರೆದರೆ ದೆಹಲಿಗೆ ಹೋಗುತ್ತೇನೆ. ಈಗಲೂ ನಾನು ಸ್ಟಾಂಡ್ ಬದಲಾಯಿಸಿಲ್ಲ. ಹೈಕಮಾಂಡ್ ಏನು ಹೇಳುತ್ತಾರೋ ಅದನ್ನೇ ಅನುಸರಿಸುತ್ತೇನೆ” ಎಂದು ಹೇಳಿದರು.

ಸಿಎಂ ಕುರ್ಚಿ ಕದನ: ನಾಳೆ ಸಿದ್ದರಾಮಯ್ಯ-ಡಿ.ಕೆ ಶಿವಕುಮಾರ್ ಬ್ರೇಕ್‌‌ ಫಾಸ್ಟ್‌ ಮೀಟಿಂಗ್‌

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿರುವ ಯುದ್ಧ ರಾಜ್ಯದಾದ್ಯಂತ ಚರ್ಚೆಯಾಗುತ್ತಿದೆ. ಸಿಎಂ ಕುರ್ಚಿಯ ವಾರಸುದಾರ ಯಾರು ಎನ್ನುವ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರವಿಲ್ಲದ ನಡುವೆ, ಇಬ್ಬರೂ ನಾಯಕರು ನಾಳೆ (ಶನಿವಾರ) ಬೆಳಗ್ಗೆ 9:20ಕ್ಕೆ ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಡೆಸಲಿದ್ದಾರೆ.

ಕಾಂಗ್ರೆಸ್ ಒಳಗೆ ಸಿದ್ದರಾಮಯ್ಯ ಬಣ ಮತ್ತು ಡಿಕೆಶಿ ಬಣದ ನಡುವೆ ನಡೆಯುತ್ತಿರುವ ಈ ಕಿತ್ತಾಟ ಕೇಂದ್ರ ನಾಯಕತ್ವದವರೆಗೂ ತಲುಪಿದೆ. 2028ರ ವಿಧಾನಸಭೆ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿ ಇರುವಾಗಲೇ “ಯಾರು ಮುಂದಿನ ಸಿಎಂ?” ಎಂಬ ಪ್ರಶ್ನೆ ತೀವ್ರಗೊಂಡಿದೆ. ಡಿ.ಕೆ. ಶಿವಕುಮಾರ್ ಅವರು ತಾವೇ ಮುಂದಿನ ಮುಖ್ಯಮಂತ್ರಿ ಎಂಬುದಾಗಿ ತಮ್ಮ ಬಣದ ಶಾಸಕರ ಮುಂದೆ ಘೋಷಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಸಿದ್ದರಾಮಯ್ಯ ಬಣ ತಿರುಗೇಟು ನೀಡುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ದೆಹಲಿಯಿಂದ ಹೈಕಮಾಂಡ್‌ನಿಂದ ಬುಲಾವ್ ಬರುವ ಸಾಧ್ಯತೆ ಇರುವುದಾಗಿ ವದಂತಿಗಳು ಹಬ್ಬಿದ್ದವು.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ಆರ್. ಸುರ್ಜೇವಾಲಾ ಮತ್ತು ಕೆ.ಸಿ. ವೇಣುಗೋಪಾಲ್ ಅವರು ಈಗಾಗಲೇ ರಾಜ್ಯಕ್ಕೆ ಆಗಾಗ ಬಂದು ಇಬ್ಬರು ನಾಯಕರನ್ನೂ ಭೇಟಿಯಾಗಿ ಒಗ್ಗಟ್ಟಿನ ಸಂದೇಶ ನೀಡಿದ್ದಾರೆ. ಆದರೆ ಒಳಗೊಳಗೆ ಕಿಚಾಯಿಸುತ್ತಿರುವ ಬೆಂಕಿ ಈ ಬ್ರೇಕ್‌ಫಾಸ್ಟ್‌ ಮೀಟಿಂಗ್‌ನಲ್ಲಿ ತಂಪಾಗುತ್ತದೆಯೇ ಎಂಬುದು ಕುತೂಹಲ.

Exit mobile version