ಗ್ರಾಹಕರ ಗಮನಕ್ಕೆ! ಸಿಲಿಂಡರ್ ಬುಕಿಂಗ್ ನಿಯಮದಲ್ಲಿ ಭಾರಿ ಬದಲಾವಣೆ

Untitled design 2026 03 09T212602.203

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಭೀತಿಯಿಂದಾಗಿ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ಉಂಟಾಗಬಹುದು ಎಂಬ ಆತಂಕದ ನಡುವೆಯೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ಅಡುಗೆ ಅನಿಲದ ಕೃತಕ ಅಭಾವ ಮತ್ತು ಕಾಳಸಂತೆಯನ್ನು ತಡೆಗಟ್ಟಲು ಇಂಧನ ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಗ್ರಾಹಕರು ಗ್ಯಾಸ್ ಸಿಲಿಂಡರ್‌ಗಳನ್ನು ಅತಿಯಾಗಿ ದಾಸ್ತಾನು (Hoarding) ಮಾಡುವುದನ್ನು ತಡೆಯುವುದು ಈ ಹೊಸ ನಿಯಮಗಳ ಮುಖ್ಯ ಉದ್ದೇಶವಾಗಿದೆ.

21 ದಿನಗಳ ನಿಯಮದಲ್ಲಿ ಬದಲಾವಣೆ

ಹೊಸ ಮಾರ್ಗಸೂಚಿಯ ಪ್ರಕಾರ, ಎರಡು ಸಿಲಿಂಡರ್ ಬುಕ್ಕಿಂಗ್‌ಗಳ ನಡುವಿನ ಕನಿಷ್ಠ ಅವಧಿಯನ್ನು ಈಗ 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ. ಅಂದರೆ, ಒಂದು ಸಿಲಿಂಡರ್ ಬುಕ್ ಮಾಡಿದ ನಂತರ ಮತ್ತೊಂದು ಸಿಲಿಂಡರ್ ಬುಕ್ ಮಾಡಲು ಗ್ರಾಹಕರು ಕನಿಷ್ಠ 25 ದಿನಗಳ ಕಾಲ ಕಾಯಬೇಕಾಗುತ್ತದೆ. ಯುದ್ಧದ ಭೀತಿಯಿಂದಾಗಿ ಈ ಹಿಂದೆ 55 ದಿನಗಳಿಗೊಮ್ಮೆ ಬುಕ್ ಮಾಡುತ್ತಿದ್ದ ಗ್ರಾಹಕರು, ಈಗ ಕೇವಲ 15-20 ದಿನಗಳಲ್ಲೇ ಸಿಲಿಂಡರ್ ಬುಕ್ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ರೀತಿಯ ಅನಗತ್ಯ ಬುಕ್ಕಿಂಗ್‌ಗಳಿಂದ ಮಾರುಕಟ್ಟೆಯಲ್ಲಿ ತುರ್ತು ಅಗತ್ಯವಿರುವವರಿಗೆ ಸಿಲಿಂಡರ್ ಸಿಗದೆ ಅಭಾವ ಸೃಷ್ಟಿಯಾಗುತ್ತಿದೆ. ಇದನ್ನು ತಡೆಯಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ವಾಣಿಜ್ಯ (Commercial) ಉದ್ದೇಶದ ಸಿಲಿಂಡರ್‌ಗಳಿಗಿಂತ ಮನೆ ಬಳಕೆಯ (Domestic) ಗ್ರಾಹಕರಿಗೆ ಅನಿಲ ಪೂರೈಕೆಯಲ್ಲಿ ಮೊದಲ ಆದ್ಯತೆ ನೀಡುವಂತೆ ತೈಲ ಕಂಪನಿಗಳಿಗೆ ಸರ್ಕಾರ ಸೂಚಿಸಿದೆ. ಸಾಮಾನ್ಯ ಜನರ ಅಡುಗೆ ಮನೆಯಲ್ಲಿ ಅನಿಲದ ಕೊರತೆಯಾಗದಂತೆ ನೋಡಿಕೊಳ್ಳುವುದು ನಮ್ಮ ಮೊದಲ ಕರ್ತವ್ಯ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದರೊಂದಿಗೆ ದೇಶೀಯ ರಿಫೈನರಿಗಳಿಗೆ ಎಲ್‌ಪಿಜಿ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವಂತೆ ಆದೇಶ ನೀಡಲಾಗಿದೆ.

ಇರಾನ್ ಮತ್ತು ಇಸ್ರೇಲ್ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಿಂದ ಅನಿಲ ಆಮದು ಮಾಡಿಕೊಳ್ಳುವಲ್ಲಿ ಉಂಟಾಗಬಹುದಾದ ವ್ಯತ್ಯಯವನ್ನು ಸರಿದೂಗಿಸಲು ಭಾರತ ಈಗ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ. ಅಲ್ಜೀರಿಯಾ, ಆಸ್ಟ್ರೇಲಿಯಾ, ಕೆನಡಾ ಮತ್ತು ನಾರ್ವೆ ದೇಶಗಳು ಭಾರತಕ್ಕೆ ಎಲ್‌ಪಿಜಿ ಪೂರೈಸಲು ಮುಂದೆ ಬಂದಿವೆ. ಈ ದೇಶಗಳೊಂದಿಗೆ ಮಾತುಕತೆ ನಡೆಸಿ ಅನಿಲ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಈ ಕ್ರಮದಿಂದಾಗಿ ಯುದ್ಧದ ಅವಧಿಯಲ್ಲೂ ಭಾರತದಲ್ಲಿ ಅನಿಲ ಕೊರತೆ ಉಂಟಾಗುವುದಿಲ್ಲ ಎಂಬ ಭರವಸೆಯನ್ನು ಸರ್ಕಾರ ನೀಡಿದೆ.

Exit mobile version