ಕರ್ನಾಟಕದಲ್ಲಿ ಜಾತಿಗಣತಿ ವರದಿ ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ನಡೆದ ಜಾತಿಗಣತಿ ಸಮೀಕ್ಷೆಯನ್ನು ಕಾಟಾಚಾರಕ್ಕೆ ನಡೆಸಲಾಗಿತ್ತು ಎಂದು ಆರೋಪಿಸಲಾಗಿದೆ. ಈ ಸಮೀಕ್ಷೆಯ ಎಡವಟ್ಟುಗಳು ಮತ್ತು ಅವ್ಯವಸ್ಥೆಯ ಬಗ್ಗೆ ಅಂದಿನ ಪತ್ರಿಕಾ ವರದಿಗಳು ಸಾಕ್ಷಿಯಾಗಿವೆ. ಈಗ ಈ ವರದಿಯನ್ನು ಸಂಪುಟದಲ್ಲಿ ಚರ್ಚಿಸುವ ತೀರ್ಮಾನವು ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ.
ಜಾತಿಗಣತಿಯ ಎಡವಟ್ಟುಗಳು: ಆರೋಪಗಳು ಯಾವುವು?
ಜಾತಿ ಜನಗಣತಿಗಾಗಿ ನಿಯೋಜನೆ ಮಾಡಲಾಗಿದ್ದ ಸಿಬ್ಬಂದಿಗಳಿಗೆ ಗಣತಿ ಅರ್ಜಿ ತುಂಬುವ ಬಗ್ಗೆ ತರಬೇತಿಯನ್ನೇ ನೀಡಿರಲಿಲ್ಲ.
ಜಾತಿಗಣತಿ ಸಮೀಕ್ಷೆಯ ಸಂದರ್ಭದಲ್ಲಿ ಹಲವು ತೊಡಕುಗಳು ಎದುರಾಗಿದ್ದವು. ಅಂದಿನ ವರದಿಗಳ ಪ್ರಕಾರ, ಸಮೀಕ್ಷೆಯ ಗಂಭೀರ ಲೋಪಗಳು ಈ ಕೆಳಗಿನಂತಿವೆ:
- ಗಣತಿ ಅರ್ಜಿಯಲ್ಲಿದ್ದ 56 ಕಾಲಂಗಳಲ್ಲಿ ಸಮೀಕ್ಷೆದಾರರು ಪ್ರಾಮಾಣಿಕವಾಗಿ ತುಂಬುತಿದ್ದುದು ಕೇವಲ 8-10 ಕಾಲಂ ಮಾತ್ರ. ಉಳಿದ ಕಾಲಂಗಳ ಭರ್ತಿಗೆ ಮಾನದಂಡ “ಅಂದಾಜು”, “ಅಕ್ಕ-ಪಕ್ಕದ ಮನೆಯವರ ಹೆಸರು”.
- ಉಪಜಾತಿ ಕಾಲಂನಲ್ಲಿ ಏನು ನಮೂದಿಸಬೇಕು ಎಂಬ ಗೊಂದಲದಿಂದ ಕಾಲಂ ಖಾಲಿ.
- ಬಿಸಿಲು, ಮಳೆಯ ನೆಪವೊಡ್ಡಿ ಸಮೀಕ್ಷೆದಾರರು ಮನೆಮನೆಗೂ ತೆರಳಿ ಸಮೀಕ್ಷೆ ನಡೆಸಲು ಹಿಂದೇಟು.
- ಹಲವೆಡೆ 2011ರ ಜನಗತಿಯ ನಕಲು ಪ್ರತಿಗಳನ್ನು ಆಧಾರವನ್ನಾಗಿಟ್ಟುಕೊಂಡು ಮಕ್ಕಳ ಕೈಯಲ್ಲಿ ಜಾತಿ ಗಣತಿ ಅರ್ಜಿ ಭರ್ತಿ.
- ಪುಟಕ್ಕೆ 5-10 ರೂಪಾಯಿ ನೀಡಿ ಶಾಲಾ ಮಕ್ಕಳ ಕೈಯಲ್ಲಿ ಅರ್ಜಿ ಭರ್ತಿ.
- ಸಮೀಕ್ಷೆಗೆ ಒಳಪಟ್ಟವರ ಸಹಿಯನ್ನೂ ಮಕ್ಕಳೇ ಹಾಕುತ್ತಾರೆ. ಅಗತ್ಯವಿದ್ದಲ್ಲಿ ಹೆಬ್ಬೆಟ್ಟನ್ನು ಸಹ ಮಕ್ಕಳೇ ಒತ್ತುತ್ತಾರೆ.
ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬಂತೆ ಇಷ್ಟೆಲ್ಲಾ ಎಡವಟ್ಟುಗಳಿರುವ ಜಾತಿ ಜನಗಣತಿ ವರದಿಯನ್ನ ಸಂಪುಟದಲ್ಲಿ ಚರ್ಚೆ ಮಾಡುವ ಅವಶ್ಯಕತೆ ಏನಿದೆ? ನಿಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು, ಅಲುಗಾಡುತ್ತಿರುವ ಕುರ್ಚಿ ಭದ್ರಪಡಿಸಿಕೊಳ್ಳಲು ಜಾತಿ ಜನಗಣತಿ ಹೆಸರಿನಲ್ಲಿ ಸಮಾಜದಲ್ಲಿ ವಿಷಬೀಜ ಯಾಕೆ ಬಿತ್ತುತ್ತೀರಿ? ಸಿಎಂ @siddaramaiah ನವರೇ, ಇವೆಲ್ಲಾ ನಾವು ಮಾಡುತ್ತಿರುವ ಆರೋಪಗಳಲ್ಲ. ಅಂದಿನ ಸುದ್ದಿ ಮಾದ್ಯಮಗಳಲ್ಲಿ ಬಂದಿರುವ ವರದಿಗಳು ಎಂದು ಆರ್. ಅಶೋಕ್ ತಮ್ಮ ಎಕ್ಸ್ ಪೇಜ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ರಾಜಕೀಯ ಉದ್ದೇಶವೇ ಗುರಿಯಾ?
ಈ ಎಡವಟ್ಟುಗಳಿರುವ ವರದಿಯನ್ನು ಈಗ ಸಂಪುಟದಲ್ಲಿ ಚರ್ಚಿಸುವ ಅವಶ್ಯಕತೆ ಏನು ಎಂದು ವಿರೋಧಿಗಳು ಪ್ರಶ್ನಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಅಸ್ತಿತ್ವ ಮತ್ತು ಅಲುಗಾಡುವ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ಈ ವರದಿಯನ್ನು ಬಳಸಿಕೊಳ್ಳಲಾಗುತ್ತಿದೆಯೇ ಎಂದು ಆರೋಪಿಸಲಾಗಿದೆ. ಸಮಾಜದಲ್ಲಿ ವಿಷಬೀಜ ಬಿತ್ತುವ ಈ ಕ್ರಮವು ಸಾಮಾಜಿಕ ನ್ಯಾಯಕ್ಕಿಂತ ರಾಜಕೀಯ ಲಾಭಕ್ಕಾಗಿಯೇ ಎಂದು ಟೀಕೆಕಾರರು ಗುಡುಗಿದ್ದಾರೆ.
ಈ ಗಂಭೀರ ಲೋಪಗಳಿಂದ ಕೂಡಿರುವ ಜಾತಿಗಣತಿ ವರದಿಯ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗಿದೆ. ಸಮಾಜದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ನಿಖರವಾಗಿ ತಿಳಿಯಲು ಈ ವರದಿಯು ಸಮರ್ಥವಾಗಿದೆಯೇ ಎಂದು ಚರ್ಚೆ ಶುರುವಾಗಿದೆ. ವಿರೋಧಿಗಳು, ಈ ವರದಿಯನ್ನು ಜಾರಿಗೊಳಿಸುವ ಬದಲು ವೈಜ್ಞಾನಿಕ ಮತ್ತು ಪಾರದರ್ಶಕ ಸಮೀಕ್ಷೆಯನ್ನು ನಡೆಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ನಾಳೆ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ವರದಿಯ ಕುರಿತು ಯಾವ ನಿರ್ಧಾರ ಕೈಗೊಳ್ಳಲಾಗುವುದು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ರಾಜಕೀಯ ಲಾಭಕ್ಕಾಗಿ ಈ ವರದಿಯನ್ನು ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಆರೋಪಗಳು ಜೋರಾಗಿವೆ. ಸಮಾಜದ ಏಕತೆಗೆ ಧಕ್ಕೆ ತರುವ ಈ ಕ್ರಮವನ್ನು ಸರ್ಕಾರ ಯಾಕೆ ಮುಂದುವರಿಸುತ್ತಿದೆ ಎಂಬ ಪ್ರಶ್ನೆಯೂ ಜನರ ಮನದಲ್ಲಿ ಮೂಡಿದೆ.
