ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಮನಸ್ಸು ಕಲುಕುವಂತಹ ಅಮಾನವೀಯ ಘಟನೆ ನಡೆದಿದೆ. ಕಾಡು ಹಂದಿ ಬೇಟೆಗಾಗಿ ಜಮೀನಿನಲ್ಲಿ ಅಕ್ರಮವಾಗಿ ಇಡಲಾಗಿದ್ದ ನಾಡಬಾಂಬ್ ಸ್ಫೋಟಗೊಂಡ ಪರಿಣಾಮ, ಮೇಯುತ್ತಿದ್ದ ಹಸುವಿನ ಬಾಯಿ ಛಿದ್ರಛಿದ್ರವಾದ ದಾರುಣ ಘಟನೆ ಬೆಳಕಿಗೆ ಬಂದಿದೆ.
ಹರಳಹಳ್ಳಿ ಗ್ರಾಮದ ಹೊರವಲಯದ ಜಮೀನಿನಲ್ಲಿ ರಾಜಮ್ಮಣಿ ಎಂಬುವವರಿಗೆ ಸೇರಿದ ಹಸು ಮೇಯುತ್ತಿತ್ತು. ಸಾಮಾನ್ಯವಾಗಿ ಹಸುಗಳು ಹುಲ್ಲು, ಎಲೆಗಳನ್ನು ಮೇಯುತ್ತಾ ಸುತ್ತಾಡುತ್ತಿರುತ್ತವೆ. ಆದರೆ ದುಷ್ಕರ್ಮಿಗಳು ಕಾಡು ಹಂದಿಗಳನ್ನು ಬೇಟೆಯಾಡಲು ಹುಲ್ಲಿನ ಮಧ್ಯೆ ನಾಡಬಾಂಬ್ ಇಟ್ಟು ಹೋಗಿದ್ದರು ಎನ್ನಲಾಗಿದೆ. ಹುಲ್ಲು ಎಂದು ಭಾವಿಸಿ ಹಸು ಅದನ್ನು ಕಚ್ಚಿದಾಗಲೇ ಭಾರೀ ಸ್ಫೋಟ ಸಂಭವಿಸಿದೆ.
ಸ್ಫೋಟದ ಪರಿಣಾಮ ಹಸುವಿನ ಬಾಯಿ ಸಂಪೂರ್ಣವಾಗಿ ಗಾಯಗೊಂಡಿದೆ. ಬಾಯಿ, ದವಡೆ ಹಾಗೂ ನಾಲಿಗೆ ಗಂಭೀರವಾಗಿ ಹಾನಿಗೊಂಡಿದ್ದು, ಹಸು ತೀವ್ರ ನರಳಾಟ ಅನುಭವಿಸಿದೆ. ರಕ್ತಸ್ರಾವದಿಂದ ನೆಲವೇ ಕೆಂಪಾಗಿದ್ದು, ಹಸುವಿನ ಸ್ಥಿತಿ ನೋಡಿದ ಮಾಲೀಕರಾದ ರಾಜಮ್ಮಣಿ ಕಣ್ಣೀರು ಹಾಕಿದ್ದಾರೆ. “ಹುಲ್ಲು ತಿಂದು ಬದುಕುತ್ತಿದ್ದ ಹಸು ಈ ರೀತಿ ಹಾನಿಗೊಳಗಾಗುತ್ತದೆ ಎಂದು ಊಹಿಸಲಿಲ್ಲ” ಎಂದು ಅವರು ಆಕ್ರಂದನ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರು ಘಟನಾ ಸ್ಥಳಕ್ಕೆ ಧಾವಿಸಿ ಹಸುವಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದಾರೆ. ಪಶುವೈದ್ಯರನ್ನು ಕರೆಸಿ ತುರ್ತು ಚಿಕಿತ್ಸೆ ನೀಡಲಾಗಿದೆ. ಆದರೆ ಗಾಯಗಳ ತೀವ್ರತೆಯಿಂದ ಹಸುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಸ್ಥಳೀಯರ ಮಾಹಿತಿ ಮೇರೆಗೆ ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಮಂಡ್ಯದಲ್ಲಿ ರಾಸಾಯನಿಕ ವಿದ್ದ ಬೃಹತ್ ಟ್ಯಾಂಕ್ ಸ್ಫೋಟ
ಮಂಡ್ಯ ಜಿಲ್ಲೆಯ ಬಸರಾಳು ತಾಲ್ಲೂಕಿನ ಕಾರೆಕಟ್ಟೆ ಗ್ರಾಮದ ಬಳಿ ಇರುವ ಕೀರ್ತಿ ಕೆಮಿಕಲ್ಸ್ ಇಂಡಸ್ಟ್ರೀಸ್ನಲ್ಲಿ ಭೀಕರ ರಾಸಾಯನಿಕ ಟ್ಯಾಂಕ್ ಸ್ಫೋಟ ನಡೆದಿದ್ದು, ಘಟನೆಯಲ್ಲಿ ಇಬ್ಬರು ಕಾರ್ಮಿಕರು ಧಾರುಣವಾಗಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮೃತರ ದೇಹಗಳು ಛಿದ್ರಛಿದ್ರವಾಗಿವೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಒಬ್ಬರ ಕೈ ಸಂಪೂರ್ಣವಾಗಿ ಕತ್ತರಿಸಿ ಹೋಗಿದೆ.
ಸ್ಫೋಟ ಸಂಭವಿಸಿದ್ದು ಇಂದು ಬೆಳಗ್ಗೆ. ರಾಸಾಯನಿಕಗಳಿದ್ದ ಬೃಹತ್ ಟ್ಯಾಂಕ್ನಲ್ಲಿ ಏಕಾಏಕಿ ಸ್ಫೋಟವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದೆ. ಮೃತರಿಬ್ಬರು ಬಿಹಾರ ಮೂಲದ ಕಾರ್ಮಿಕರಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ತಕ್ಷಣ ಮೈಸೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (MIMS) ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ಸ್ಫೋಟದ ನಂತರ ಕಾರ್ಖಾನೆಯ ಸಿಬ್ಬಂದಿ ಹಲವರು ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಬಸರಾಳು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಹೆಸರುಗಳು, ಗಾಯಾಳುಗಳ ವಿವರಗಳು ಮತ್ತು ಸ್ಫೋಟದ ನಿಖರ ಕಾರಣವನ್ನು ಕಲೆಹಾಕುತ್ತಿದ್ದಾರೆ. ಅಗ್ನಿಶಾಮಕದಳ ಮತ್ತು ತಜ್ಞರು ಸ್ಥಳದಲ್ಲಿ ತನಿಖೆಯನ್ನು ಮುಂದುವರೆಸಿದ್ದಾರೆ.
ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಹರಡಿದ್ದು, ಕಾರ್ಖಾನೆಯ ಸುರಕ್ಷತಾ ಮಾನದಂಡಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ. ರಾಸಾಯನಿಕ ಕಾರ್ಖಾನೆಗಳಲ್ಲಿ ಸಂಭವಿಸುವ ಅಪಘಾತಗಳು ಪದೇ ಪದೇ ಆಗುತ್ತಿರುವುದರಿಂದ ಕಟ್ಟುನಿಟ್ಟಾದ ನಿಯಮಾವಳಿಗಳ ಅಗತ್ಯತೆಯನ್ನು ಇದು ಮತ್ತೊಮ್ಮೆ ಎತ್ತಿ ತೋರಿಸಿದೆ.
