ಬಿಡದಿ ಟೌನ್‌ಶಿಪ್ ವಿರೋಧಿ ಪಾದಯಾತ್ರೆ ರೈತ ಸಮಸ್ಯೆಗಳಿಗೆ ಪರಿಹಾರದ ದಿಕ್ಕೂಚಿ: ಹೆಚ್.ಡಿ ಕುಮಾರಸ್ವಾಮಿ

ವೋಟ್ (7)

ಭೈರಮಂಗಲ: ಬೈರಮಂಗಲದಿಂದ ಕೈಗೊಂಡಿರುವ ಬಿಡದಿ ಟೌನ್‌ಶಿಪ್ ವಿರೋಧಿಸುವ ಪಾದಯಾತ್ರೆಯು ರೈತಪರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ದಿಕ್ಕೂಚಿಯಾಗಿದೆ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಮರಣಶಾಸನ ಆಗಲಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.

ಬಿಡದಿಯ ಭೈರಮಂಗಲದಲ್ಲಿ ಟೌನ್‌ಶಿಪ್ ವಿರೋಧಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಸರ್ಕಾರ ಕಿತ್ತೊಗೆಯಲು ಈ ಪಾದಯಾತ್ರೆಯ ಮೂಲಕ ಇಲ್ಲಿನ ರೈತರು ಅಡಿಪಾಯ ಹಾಕಿದ್ದಾರೆ ಎಂದು ಹೇಳಿದರು.

ರಾಜ್ಯದ ಮುಖ್ಯಮಂತ್ರಿ ಈ ಯೋಜನೆ ವಿಷಯದಲ್ಲಿ ಅತಿಯಾದ ಕಾಳಜಿ ವಹಿಸುತ್ತಿದ್ದಾರೆ. ಯಾರಿಗೋ ಲಾಭ ಮಾಡಿಕೊಡಲು ಅವರು ಪ್ರಯತ್ನ ಮಾಡುತ್ತಿದ್ದಾರೆ. ಇದುರೆಗೂ ಒಂದು ಎಕರೆಗೆ ₹2 ಕೋಟಿ ಕೊಡುವುದಾಗಿ ಹೇಳುತ್ತಿದ್ದವರು ಇವತ್ತು ಬೆಳಗ್ಗೆ ವೀಡಿಯೋ ಮಾಡಿ ಒಂದು ಎಕರೆಗೆ ₹3 ಕೋಟಿ ಕೊಡುವುದಾಗಿ ಹೇಳಿದ್ದಾರೆ. ಇದಕ್ಕೆ ನೀವು ಮರುಳಾಗಬೇಡಿ. ಈ ಮುಖ್ಯಮಂತ್ರಿ ನಿಮಗೆ ಮೋಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಜನರನ್ನು ಎಚ್ಚರಿಸಿದರು.

ನೈಸ್ (ಬಿಎಂಐಸಿ) ಯೋಜನೆಗೆ ಭೂಸ್ವಾಧೀನ ಮಾಡಿಕೊಂಡು 30 ವರ್ಷ ಕಳೆದರೂ ಭೂಮಿ.ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿಲ್ಲ, ನಿವೇಶನವನ್ನೂ ಕೊಟ್ಟಿಲ್ಲ ಎಂದು ಆರೋಪಿಸಿದ ಸಚಿವರು; ಬಿಡದಿಯಲ್ಲಿ ಭೂಸ್ವಾದೀನ ಮಾಡಿಕೊಳ್ಳುವ ಜಮೀನಿಗೆ ಒಂದು ಎಕರೆಗೆ 3 ಕೋಟಿ ರೂ. ಕೊಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಯಾವ ಆಧಾರದ ಮೇಲೆ ಹೇಳಿದ್ದಾರೆ. ಇದೇನು ಚೌಕಾಸಿ ವ್ಯಾಪಾರವೇ? ಎಂದು ಖಾರವಾಗಿ ಪ್ರಶ್ನಿಸಿದರು.

ಬಿಡದಿ ಟೌನ್‌ಶಿಪ್ ಯೋಜನೆ ಹಾಗೂ ಬ್ರಹ್ಮಾಂಡ ಭ್ರಷ್ಟಾಚಾರದ ನೈಸ್ ಯೋಜನೆಗಳು ಎರಡೂ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆಯೇ ಎಂದು ಸಚಿವರು ದೂರಿದರು.

2006-07ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ, ಆನಂತರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಡದಿ ಯೋಜನೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿರಲಿಲ್ಲ. ಕಾಂಗ್ರೆಸ್ ಸರ್ಕಾರವೇ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆ ಹೊರಡಿಸಿದೆ. ಮುಖ್ಯಮಂತ್ರಿಯವರ ಇಂದಿನ ಸಂದೇಶದಲ್ಲಿ ವಿದೇಶಗಳಂತೆ ರಸ್ತೆ, ಬೃಹತ್ ಕಾರ್ಖಾನೆ, ಉದ್ಯೋಗ ನಿರ್ಮಿಸಿ ಯುವಕರಿಗೆ ಉದ್ಯೋಗ ಕೊಡುವ ಭರವಸೆ ನೀಡಿದ್ದಾರೆ. ಇದನ್ನು ನಂಬಬೇಕೇ? ಹೀಗೆ ಹೇಳುತ್ತಿರುವ ಇವರು ಕನಕಪುರದಲ್ಲಿ ದಲಿತರ ಭೂಮಿಯನ್ನು ಲೂಟಿ ಹೊಡೆದಿದ್ದಾರೆ ಎಂದು ನೇರ ಆರೋಪ ಮಾಡಿದರು.

ಬಿಡದಿ ಟೌನ್‌ಶಿಪ್ ಭಾಗದಲ್ಲಿ 6 ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ. ಜೊತೆಗೆ ರೇಷ್ಮೆ, ಮಾವು, ಅಡಿಕೆ, ತೆಂಗು ಎಲ್ಲವೂ ಇದೆ. ಇಂತಹ ಭೂಮಿಯನ್ನು ಅವರೇ ನೀಡಿದ್ದ ಸತ್ಯಶೋಧನಾ ಸಮಿತಿ ವರದಿಗೆ ವಿರುದ್ಧವಾಗಿ ಟೌನ್‌ಶಿಪ್ ಮಾಡಲು ಹೊರಟಿದ್ದಾರೆ. ಪಿತ್ರಾರ್ಜಿತ ಆಸ್ತಿ ಹಾಗೂ ಭೂಮಿಯನ್ನೇ ನಂಬಿ ಬದುಕುತ್ತಿರುವ ರೈತರ ಪರವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೋರಾಟ ನಡೆಸುತ್ತಿವೆ. ಎರಡೂ ಪಕ್ಷಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡು ರೈತರಿಗೆ ಬೆಂಬಲ ವ್ಯಕ್ತಪಡಿಸಿವೆ ಎಂದರು ಅವರು.

ಸರ್ಕಾರದ ಕರಾರು ಭೂಮಿಗೆ 15 ವರ್ಷಗಳ ಹಿಂದೆ ಒಂದು ಎಕರೆಗೆ 12 ಕೋಟಿ ರೂ. ನಿಗದಿಪಡಿಸಿ 948 ಕೋಟಿ ರೂ. ಪಾವತಿಸುವಂತೆ ಈಗಲ್ ಟನ್‌ಗೆ ಸೂಚಿಸಲಾಗಿತ್ತು. ಈಗ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮತಿಯನ್ನು ನೇಮಕ ಮಾಡಿದೆ ಎಂದು ಅವರು ಟೀಕಿಸಿದರು.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಬಿಡದಿ ಮಣ್ಣಿನಲ್ಲಿ ರೈತರ ಭಾವನೆ ಅಡಗಿದೆ. ಅವರ ಭಾವನೆಗಳಿಗೆ ಬೆಲೆ ನೀಡುವ ನಿಟ್ಟಿನಲ್ಲಿ ಈ ಪಾದಯಾತ್ರೆಗೆ ಕೈಗೊಂಡಿದ್ದೇವೆ. ಜೊತೆಗೆ ಕಾನೂನಾತ್ಮಕ ಹೋರಾಟವನ್ನೂ ಮಾಡುತ್ತಿದ್ದೇವೆ. ರೈತರ ಅಸ್ತಿತ್ವವನ್ನು ಉಳಿಸಲು ನಮ್ಮ ಹೋರಾಟ ಮತ್ತು ಸರ್ಕಾರ ಬಿಡದಿ ಟೌನ್‌ಶಿಪ್ ನಿಲ್ಲಿಸುವವರೆಗೆ ನಮ್ಮ ಹೋರಾಟ ನಡೆಯಲಿದೆ ಎಂದು ರೈತರಿಗೆ ಭರವಸೆ ನೀಡಿದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮಾತನಾಡಿ, ರಾಜ್ಯ ರಾಜ ಕಾಂಗ್ರೆಸ ಸರ್ಕಾರ ರೈತರ ಜೀವನ ಹಾಳು ಮಾಡಲು ಹೊರಟಿದೆ ಎಂದು ಆರೋಪಿಸಿದರು.

Exit mobile version