ಹೋಟೆಲ್‌‌ಗಳ ಮೇಲೆ ಅಧಿಕಾರಿಗಳ ದಾಳಿ: ಯುಬಿ ಸಿಟಿಯಲ್ಲಿ ಕೊಳೆತ ಮಾಂಸ ಪತ್ತೆ!

ವೋಟ್ (11)

ಬೆಂಗಳೂರು, ಆಗಸ್ಟ್ 09: ರಾಜಧಾನಿ ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಮೆಗಾ ಕಾರ್ಯಾಚರಣೆ ಇಂದು ಕೂಡ ಮುಂದುವರೆದಿದೆ. ವೀಕೆಂಡ್ ಹಿನ್ನೆಲೆಯಲ್ಲಿ ಐಷಾರಾಮಿ ಹೋಟೆಲ್ಗಳು, ಸ್ಟಾರ್ ಹೋಟೆಲ್ಗಳು ಹಾಗೂ ಪ್ರಸಿದ್ಧ ಮಾಲ್‌ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲಿಸಲಾಗಿದೆ.

ಯುಬಿ ಸಿಟಿಯಲ್ಲಿ ಅಧಿಕಾರಿಗಳ ದಾಳಿ: ಕೊಳೆತ ಮಾಂಸ ಪತ್ತೆ

ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಗರದ ಹಲವೆಡೆ ಏಕಕಾಲಕ್ಕೆ ದಾಳಿ ನಡೆಸಲಾಯಿತು. ಯುಬಿ ಸಿಟಿಯ ಸ್ಕೈ ಹೋಟೆಲ್‌ನಲ್ಲಿ ತಂಡವು ದಾಳಿ ನಡೆಸಿದಾಗ ಕೊಳೆತ ಮಾಂಸ ಹಾಗೂ ಹುಳ ಹಿಡಿದಿರುವ ಆಹಾರ ಸಾಮಾಗ್ರಿಗಳು ಪತ್ತೆಯಾಗಿವೆ. ಪ್ರತಿಷ್ಠಿತ ಹೋಟೆಲ್‌ನಲ್ಲಿ ಬೂಸ್ಟ್ ಬಂದಿರುವ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.

ವೀಕೆಂಡ್ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹೋಟೆಲ್‌ಗಳಿಗೆ ಭೇಟಿ ನೀಡುವ ಕಾರಣ, ಅವರಿಗೆ ಗುಣಮಟ್ಟದ ಹಾಗೂ ಸುರಕ್ಷಿತ ಆಹಾರ ಪೂರೈಕೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತಾ ಇಲಾಖೆ ರಾತ್ರಿ ಹೊತ್ತಲ್ಲಿಯೂ ಕಾರ್ಯಾಚರಣೆ ಕೈಗೊಂಡಿದೆ.

3, 5, 7 ಸ್ಟಾರ್ ಹೋಟೆಲ್‌ಗಳಲ್ಲಿ ತಪಾಸಣೆ

ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ನಗರದ ಐಷಾರಾಮಿ ಹೋಟೆಲ್‌ಗಳ ವಿರುದ್ಧ ಸಮರ ಸಾರಿದ್ದಾರೆ. 3 ಸ್ಟಾರ್, 5 ಸ್ಟಾರ್, 7 ಸ್ಟಾರ್ ಹೋಟೆಲ್‌ಗಳ ಕಿಚನ್‌ಗಳನ್ನು ಜಾಲಾಡುತ್ತಿದ್ದಾರೆ. ಬ್ರಿಗೇಡ್ ರೋಡ್, ಎಂ.ಜಿ. ರೋಡ್ ಹಾಗೂ ಯುಬಿ ಸಿಟಿಯಲ್ಲಿರುವ ಪ್ರಮುಖ ಹೋಟೆಲ್ಗಳ ಮೇಲೆ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿ ತಪಾಸಣೆ ನಡೆಸಿದರು.

ಈ ತಪಾಸಣೆಯಲ್ಲಿ ಅಡುಗೆ ಕೊಠಡಿಗಳ ಸ್ವಚ್ಛತೆ, ಆಹಾರ ಸಾಮಾಗ್ರಿಗಳ ಗುಣಮಟ್ಟ, ಅವಧಿ ಮೀರಿದ ಪದಾರ್ಥಗಳ ಬಳಕೆ, ಹಾಗೂ ಆಹಾರ ಸಂಗ್ರಹಣಾ ವಿಧಾನಗಳನ್ನು ಪರಿಶೀಲಿಸಲಾಯಿತು. ಹಲವು ಹೋಟೆಲ್‌ಗಳಲ್ಲಿ ನಿಯಮಗಳ ಉಲ್ಲಂಘನೆ ಕಂಡುಬಂದಿದ್ದು, ಅಧಿಕಾರಿಗಳು ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

‘ತಪ್ಪು ಮಾಡಿದರೆ ಕ್ಷಮಿಸುವುದಿಲ್ಲ’: ಸಚಿವ ಯು.ಟಿ.ಖಾದರ್ ಖಡಕ್ ಎಚ್ಚರಿಕೆ

ಬೆಂಗಳೂರಿನ ಹೋಟೆಲ್ಗಳ ಮೇಲೆ ಆಹಾರ ಇಲಾಖೆ ದಾಳಿ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಆರೋಗ್ಯ ಸಚಿವ ಯು.ಟಿ.ಖಾದರ್, “ತಪಾಸಣೆ ನಮ್ಮ ಜವಾಬ್ದಾರಿ, ಅದು ಮುಂದುವರಿಯುತ್ತದೆ. ಬಹಳಷ್ಟು ಕಡೆ ದಾಳಿ ಮಾಡಿ ಸ್ಯಾಂಪಲ್ಸ್ ಪಡೆಯಲಾಗಿದೆ. ಯಾವುದೇ ಪ್ರದೇಶಕ್ಕೆ ಈ ದಾಳಿಯನ್ನು ಸೀಮಿತ ಮಾಡಲ್ಲ” ಎಂದು ಸ್ಪಷ್ಟಪಡಿಸಿದರು.

“ಕಿಡ್ನಿ ಸಮಸ್ಯೆ, ಕ್ಯಾನ್ಸರ್ನಂತಹ ಪ್ರಕರಣಗಳೆಲ್ಲವೂ ಆಹಾರದ ಗುಣಮಟ್ಟದಿಂದಲೇ ಬರುತ್ತಿವೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಮಾತ್ರ ನಮ್ಮ ಉದ್ದೇಶವಲ್ಲ. ಪಂಚತಾರಾ ಹೋಟೆಲ್ಗಳು ಸರಿಪಡಿಸಿಕೊಂಡು ಹೋಗಬೇಕು. ತಪ್ಪು ಮಾಡಿದರೆ ಕ್ಷಮಿಸುವುದಿಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದರು.

ಅಧಿಕಾರಿಗಳ ಕಾರ್ಯಾಚರಣೆ ಮುಂದುವರಿಯಲಿದೆ

ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಅವರು ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿ, “ನಾಗರಿಕರ ಆರೋಗ್ಯದ ದೃಷ್ಟಿಯಿಂದ ಈ ತಪಾಸಣೆ ಅತ್ಯಗತ್ಯ. ದಾಳಿ ಕಾರ್ಯಾಚರಣೆಯು ಮುಂದಿನ ದಿನಗಳಲ್ಲೂ ಮುಂದುವರಿಯಲಿದೆ. ಯಾವುದೇ ಹೋಟೆಲ್ ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಈ ಕಾರ್ಯಾಚರಣೆ ಮಹತ್ವದ ಪಾತ್ರ ವಹಿಸಿದೆ. ಪ್ರತಿಷ್ಠಿತ ಹೋಟೆಲ್ಗಳಲ್ಲಿಯೇ ಕೊಳೆತ ಆಹಾರ ಪತ್ತೆಯಾದ ಹಿನ್ನೆಲೆಯಲ್ಲಿ, ಸಣ್ಣ ಹೋಟೆಲ್ಗಳ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಆಹಾರ ವ್ಯಾಪಾರಿಗಳು ಗುಣಮಟ್ಟ ಕಾಪಾಡಬೇಕು ಎಂದು ಸಚಿವರು ಸೂಚಿಸಿದ್ದಾರೆ.

Exit mobile version