ನಡು ರಸ್ತೆಯಲ್ಲೇ ವಿಂಗ್‌ ಕಮಾಂಡರ್‌ ಮೇಲೆ ಬೈಕ್‌ ಸವಾರ ಹಲ್ಲೆ!

Untitled design 2025 04 21t170254.066
ADVERTISEMENT
ADVERTISEMENT

ಬೆಂಗಳೂರು, ಏಪ್ರಿಲ್ 21: ಇತ್ತೀಚೆಗೆ ಪ್ರಕಟವಾದ ಇಂಡಿಯನ್ ಜಸ್ಟೀಸ್ ರಿಪೋರ್ಟ್‌ ಪ್ರಕಾರ ಲಾ & ಆರ್ಡರ್‌ನಲ್ಲಿ ಕರ್ನಾಟಕವೇ ದೇಶದಲ್ಲಿಯೇ ನಂಬರ್ 1 ಎಂದು ಗುರುತಿಸಲಾಗಿತ್ತು. ಆದರೆ ಬೆಂಗಳೂರಿನಲ್ಲಿ ದಿನೇ ದಿನೇ ಈ ರೀತಿಯ ಅಪರಾಧಗಳು ನಡೆಯುತ್ತಲೇ ಇವೆ. ರಸ್ತೆಗಳಲ್ಲಿ ವಾಹನ ಚಲಾಯಿಸುವುದೇ ಈಗ ಸಾಹಸ ಪಡುವಂತಾಗಿದೆ.

ಇದೀಗ ಬೆಂಗಳೂರಿನಲ್ಲಿ ವಾಯು ಸೇನೆಯ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್ ಎಂಬುವವರ ಮೇಲೆ ನಡು ರಸ್ತೆಯಲ್ಲೇ ಬೈಕ್ ಸವಾರನೊಬ್ಬ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಶೀಲಾದಿತ್ಯ ಅವರು ಪತ್ನಿ ಮಧುಮಿತಾ ದತ್ತಾ ಜೊತೆ ಏರ್ಪೋರ್ಟ್ ಕಡೆ ಹೋಗುತ್ತಿದ್ದರು. ಅವರು ಸಿವಿ ರಾಮನ್ ನಗರದಿಂದ ಕಾರಿನಲ್ಲಿ ಹೊರಟಿದ್ದರು. ಆದರೆ, ಏರ್ಪೋರ್ಟ್ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಘಟನೆಯ ವಿವರ

ಶೀಲಾದಿತ್ಯ ಅವರ ಪತ್ನಿ ಕಾರ್‌ ಡೋರ್ ತೆಗೆಯುತ್ತಿರುವ ಸಮಯದಲ್ಲಿ ಹಿಂದಿನಿಂದ ವೇಗವಾಗಿ ಬಂದ ಬೈಕ್‌ಗೆ ತಾಕಿದ್ದರಿಂದ ಜಗಳ ಶುರುವಾಗಿದೆ. ಕಾರಿನ ಮೇಲೆ DRDO ಸ್ಟಿಕ್ಕರ್ ನೋಡಿದ ನಂತರ, ಬೈಕ್ ಸವಾರ ಅವಾಚ್ಯ ಶಬ್ದಗಳಲ್ಲಿ ನಿಂದನೆ ಮಾಡಿದ್ದಾರೆ. “ಇದು ಕನ್ನಡ ನಾಡು, ನಿನ್ನನ್ನ ನೋಡಿಕೊಳ್ಳುತ್ತೀನಿ” ಎಂಬಂತೆ ಬೆದರಿಕೆ ಹಾಕಿ ಹಲ್ಲೆಗೆ ಮುಂದಾಗಿದ್ದಾನೆ.

ಕಾರಿನ ಕೀ ಕಿತ್ತುಕೊಂಡು ವಿಂಗ್ ಕಮಾಂಡರ್ ಅವರ ತಲೆಯ ಮೇಲೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾನೆ. ಆ ವೇಳೆ ಇನ್ನೂ ಕೆಲವರು ಕೂಡ ಸ್ಥಳಕ್ಕೆ ಬಂದು ಶೀಲಾದಿತ್ಯ ಬೋಸ್ ಅವರನ್ನು ಕಾರಿನಿಂದ ಎಳೆದುಹಾಕಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಹಲ್ಲೆದಾರರು ಕನ್ನಡದಲ್ಲಿ ಮಾತನಾಡುತ್ತಿದ್ದರು ಎಂದು ಕೂಡ ಮಧುಮಿತಾ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಘಟನೆ ಸಂಬಂಧಿಸಿದಂತೆ ಮಧುಮಿತಾ ದತ್ತಾ ಅವರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, KA53 EA 528 ನಂಬರಿನ ಬೈಕ್‌ನಲ್ಲಿ ಬಂದ ಯುವಕ ರಾಶ್ ಡ್ರೈವಿಂಗ್ ಮಾಡುತ್ತಿದ್ದ. ಅವನು ಕಾರಿಗೆ ಗುದ್ದಿದ್ದರಿಂದ ಹಲ್ಲೆ ನಡೆಸಿದ್ದಾನೆ. ಮಧುಮಿತಾ ಅವರ ಹೇಳಿಕೆ ಪ್ರಕಾರ, ಬೈಕ್ ಸವಾರ ಶೀಲಾದಿತ್ಯ ಅವರನ್ನು ಕಾಲಿನಿಂದ, ಕೈಯಿಂದ ಮತ್ತು ಕಲ್ಲಿನಿಂದ ಮಾರಿದ್ದಾರೆ.

ಪೊಲೀಸರು ಈಗಾಗಲೇ ಎಫ್‌ಐಆರ್ ದಾಖಲಿಸಿ ಆರೋಪಿಗೆ ಬಲೆ ಬೀಸಲು ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ಹಾಗೇ, ಸಿಸಿ ಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿ ತನಿಖೆ ನಡೆಯುತ್ತಿದೆ.

Exit mobile version