ಬೆಂಗಳೂರು: ಬೆಂಗಳೂರಿನ ಚೇಮಸಂದ್ರ ಗ್ರಾಮದಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಜಮೀನು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಜೀವಂತವಾಗಿರುವ ವ್ಯಕ್ತಿಯಾದ ಮುನಿಯಪ್ಪನ ಹೆಸರಿನಲ್ಲಿ ನಕಲಿ ಮರಣ ಪ್ರಮಾಣ ಪತ್ರ (ಡೆತ್ ಸರ್ಟಿಫಿಕೇಟ್) ಸೃಷ್ಟಿಸಿ, ಆತನ ಜಮೀನನ್ನು ಲಪಟಾಯಿಸಿರುವ ಆರೋಪದ ಮೇಲೆ 21 ಜನರ ವಿರುದ್ಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಪೂರ್ವ ತಾಲೂಕಿನ ಚೇಮಸಂದ್ರ ಗ್ರಾಮದ ನಿವಾಸಿಯಾದ ಮುನಿಯಪ್ಪ, ತನ್ನ ಜಮೀನನ್ನು ಎಚ್ಎಎಲ್ನಲ್ಲಿ ಕೆಲಸ ಮಾಡುವಾಗ ಖರೀದಿಸಿದ್ದ. ಆದರೆ, ಆತನನ್ನು 50 ವರ್ಷಗಳ ಹಿಂದೆ ಮೃತಪಟ್ಟಿದ್ದಾನೆ ಎಂದು ತೋರಿಸಲು ನಕಲಿ ಡೆತ್ ಸರ್ಟಿಫಿಕೇಟ್ ಸೃಷ್ಟಿಸಿ, ಜಮೀನನ್ನು ನಾಗೇಶ್ ಮತ್ತು ನರೇಂದ್ರ ಸೇರಿದಂತೆ ಒಟ್ಟು 21 ಜನರು ವಂಚನೆಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮುನಿಯಪ್ಪ ತನ್ನ ಪತ್ನಿಯ ಸಮಾಧಿಯ ಮುಂದೆ ನಿಂತು ಕಣ್ಣೀರು ಹಾಕಿದ್ದು, “ಅಧಿಕಾರಿಗಳು ಯಾವುದೇ ಪರಿಶೀಲನೆ ನಡೆಸದೆ ಜಮೀನನ್ನು ಪರಭಾರೆ ಮಾಡಿದ್ದಾರೆ,” ಎಂದು ಆಕ್ರಂದನ ಮಾಡಿದ್ದಾರೆ. ಈ ವಂಚನೆಯಿಂದ ಕೋಟ್ಯಾಂತರ ರೂಪಾಯಿ ಮೌಲ್ಯದ ಜಮೀನು ಕಳೆದುಕೊಂಡಿರುವ ಮುನಿಯಪ್ಪ, ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಅವಲಹಳ್ಳಿ ಪೊಲೀಸರು ಈ ಪ್ರಕರಣದಲ್ಲಿ ಭಾರತೀಯ ದಂಡ ಶಾಸನ ಸಂಹಿತೆಯ (BNS) ಸೆಕ್ಷನ್ಗಳ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ತನಿಖೆಯು ಆರಂಭವಾಗಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿದವರ ಜೊತೆಗೆ ಈ ವಂಚನೆಯಲ್ಲಿ ಭಾಗಿಯಾದ ಎಲ್ಲರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.