BREAKING: ಶಾಲೆಯ ಶೌಚಾಲಯದಲ್ಲಿ ಪಟಾಕಿ ಸ್ಫೋಟ: ಬಾಂಬ್‌ ಎಂದು ಬೆಚ್ಚಿಬಿದ್ದ ವಿದ್ಯಾರ್ಥಿಗಳು

Untitled design 2025 11 11T124452.833

ಬೆಂಗಳೂರು: ಶಾಲೆಯ ಶೌಚಾಲಯದಲ್ಲಿ ಪಟಾಕಿ ಸ್ಫೋಟಗೊಂಡಿದ್ದು, ಬಾಂಬ್‌ ಎಂದು ತಿಳಿದು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಬೆಚ್ಚಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬನ್ನೇರುಘಟ್ಟ ಸಮೀಪದ ಎಸ್. ಬಂಗೀಪುರದ ಬಿ.ಎಸ್. ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ಹಿನ್ನೆಲೆ ಕೆಲ ಕಾಲ ಶಾಲೆಯ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಘಟನೆಯ ವಿವರ

ಬೆಳಿಗ್ಗೆ ಸುಮಾರು 10.30ರ ಸಮಯದಲ್ಲಿ ಈ ಘಟನೆ ನಡೆದಿದೆ. ಶಾಲೆಯ ಕೆಲವು ವಿದ್ಯಾರ್ಥಿಗಳು ಶೌಚಾಲಯದೊಳಗೆ ಪಟಾಕಿ ಇಟ್ಟು ಸ್ಫೋಟಿಸಿದ್ದಾರೆ. ಸ್ಫೋಟವಾಗುತ್ತಿದ್ದಂತೆ ಶಾಲೆಯ ಇತರ ವಿದ್ಯಾರ್ಥಿಗಳು ಭಯಭೀತರಾಗಿ ಕೂಗಾಡಿದ್ದಾರೆ.  ತಕ್ಷಣ ಶಾಲಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ನಂತರ ಬಾಂಬ್‌‌ ಅಲ್ಲ ಪಟಾಕಿ ಎಂದು ತಿಳಿದು ಬಂದಿದೆ.

ಈ ಘಟನೆ ನಂತರ ಬೆನ್ನಲ್ಲೇ ವಿದ್ಯಾರ್ಥಿಯೊಬ್ಬರ ಪೋಷಕ ಆನಂದ್ ರೆಡ್ಡಿ ಎಂಬುವವರು, ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು. “ಶಾಲೆಯಲ್ಲಿ ದೊಡ್ಡ ಸ್ಫೋಟದ ಶಬ್ದ ಕೇಳಿ ಬಂದಿದೆ. ವಿದ್ಯಾರ್ಥಿಗಳು ಭಯಪಡುತ್ತಿದ್ದಾರೆ. ತಕ್ಷಣ ಬಂದು ಪರಿಶೀಲಿಸಿ” ಎಂದು ತಿಳಿಸಿದರು.

ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದರು. ಅಧಿಕಾರಿಗಳ ನೇತೃತ್ವದಲ್ಲಿ ತಂಡವೊಂದು ಪರಿಶೀಲನೆ ನಡೆಸಿದರು. ಶೌಚಾಲಯದಲ್ಲಿ ಸ್ಫೋಟಗೊಂಡಿದ್ದು ಪಟಾಕಿ ಎಂದು ದೃಢಪಡಿಸಿದ್ದಾರೆ. ನಂತರ, ಶಾಲಾ ಆಡಳಿತ ಮಂಡಳಿಯ ಸಿಬ್ಬಂದಿಗಳನ್ನು ಠಾಣೆಗೆ ಕರೆಸಿ ವಿಚಾರಣೆ ಆರಂಭಿಸಿದ್ದಾರೆ.

ಗಣಪತಿ ಮೆರವಣಿಗೆಯಲ್ಲಿ ಪಟಾಕಿ ಬಾಕ್ಸ್ ಸ್ಫೋಟಗೊಂಡು ಬಾಲಕ ಸಾ*ವು: ಪೊಲೀಸ್ ಸೇರಿ ಐವರಿಗೆ ಗಾಯ

ಬೆಂಗಳೂರು: ಬೆಂಗಳೂರು ಗ್ರಾಮಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮುತ್ತೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಪಟಾಕಿ ಬಾಕ್ಸ್ ಸ್ಫೋಟಗೊಂಡ ಘಟನೆಯಲ್ಲಿ 15 ವರ್ಷದ ಬಾಲಕ ಸಾವನ್ನಪ್ಪಿದ್ದು, ಪೊಲೀಸ್ ಕಾನ್ಸ್‌ಟೇಬಲ್ ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತಪಟ್ಟ ಬಾಲಕನನ್ನು ಮುತ್ತೂರು ನಿವಾಸಿಯಾದ ತನುಷ್ ರಾವ್ (15) ಎಂದು ಗುರುತಿಸಲಾಗಿದೆ. ಫ್ರೆಂಡ್ಸ್ ಯುವಕರ ಬಳಗವು ಆಯೋಜಿಸಿದ್ದ ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೆರವಣಿಗೆಯಲ್ಲಿ ಬಳಸಲಾಗಿದ್ದ ಲಿಫ್ಟಿಂಗ್ ವಾಹನದಲ್ಲಿ ಪಟಾಕಿ ಬಾಕ್ಸ್‌ಗಳನ್ನು ಇಡಲಾಗಿತ್ತು. ವಾಹನದ ಸೈಲೆನ್ಸರ್‌ನಿಂದ ಉಂಟಾದ ಬಿಸಿಯಿಂದಾಗಿ ಪಟಾಕಿ ಬಾಕ್ಸ್‌ಗೆ ಬೆಂಕಿ ತಗುಲಿ ಸ್ಫೋಟಗೊಂಡಿರಬಹುದು ಎಂದು ಶಂಕಿಸಲಾಗಿದೆ.

ಗಾಯಗೊಂಡವರನ್ನು ಗಣೇಶ್ (16), ಯೋಗೇಶ್ (15), ಮುನಿರಾಜು (27), ನಾಗರಾಜು (35), ಮತ್ತು ಕಾನ್ಸ್‌ಟೇಬಲ್ ಜಾಕಿರ್ ಹುಸೇನ್ ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ತಕ್ಷಣವೇ ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಬಗ್ಗೆ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸ್ಫೋಟದ ನಿಖರ ಕಾರಣವನ್ನು ತಿಳಿಯಲು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Exit mobile version