ಬಹುನಿರೀಕ್ಷಿತ ಬೆಂಗಳೂರು–ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಸಂಚಾರಕ್ಕೆ ಮಹತ್ವದ ಬೆಳವಣಿಗೆ ನಡೆದಿದೆ. ತಾಂತ್ರಿಕ ಕಾರಣಗಳಿಂದ ಹಿಂದೆ ಮುಂದೂಡಲ್ಪಟ್ಟಿದ್ದ ಈ ರೈಲಿನ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ಇದೀಗ ಆಗಸ್ಟ್ 11ರಿಂದ ಆರಂಭವಾಗಲಿದ್ದು, ಆಗಸ್ಟ್ 20ರವರೆಗೆ ವಿವಿಧ ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ. ವಿಶೇಷವಾಗಿ ಸಕಲೇಶಪುರ–ಸುಬ್ರಹ್ಮಣ್ಯ ನಡುವಿನ ಕ್ಲಿಷ್ಟಕರ ಘಾಟ್ ಮಾರ್ಗದಲ್ಲಿ ರೈಲಿನ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಟ್ರಯಲ್ ನಡೆಸಲಾಗುತ್ತಿದೆ.
ಈ ಹಿಂದೆ ಜೂನ್ ತಿಂಗಳಲ್ಲಿ ಟ್ರಯಲ್ ರನ್ ನಡೆಸಲು ಯೋಜಿಸಲಾಗಿತ್ತು. ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಕೂಡ ಜೂನ್ನಲ್ಲೇ ಬೆಂಗಳೂರು–ಮಂಗಳೂರು ವಂದೇ ಭಾರತ್ ಸೇವೆ ಆರಂಭಿಸುವ ಭರವಸೆ ನೀಡಿದ್ದರು. ಆದರೆ ಘಾಟ್ ಪ್ರದೇಶದಲ್ಲಿ ಸಂಚರಿಸಲು ಅಗತ್ಯವಾದ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (AEB) ವ್ಯವಸ್ಥೆ ಹೊಂದಿದ ವಿಶೇಷ ರೇಕ್ ಲಭ್ಯವಾಗದ ಕಾರಣ ಪರೀಕ್ಷಾರ್ಥ ಸಂಚಾರವನ್ನು ಮುಂದೂಡಲಾಗಿತ್ತು.
ಈಗ AEB ವ್ಯವಸ್ಥೆ ಹೊಂದಿರುವ ವಿಶೇಷ ರೇಕ್ ಲಭ್ಯವಾಗಿರುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಟ್ರಯಲ್ ರನ್ಗೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಭಾರತೀಯ ರೈಲ್ವೆಯ ಸಂಶೋಧನೆ, ವಿನ್ಯಾಸ ಮತ್ತು ಮಾನಕ ಸಂಸ್ಥೆ (RDSO) ಅಧಿಕಾರಿಗಳ ತಂಡವು ಕೂಡ ಪರೀಕ್ಷಾರ್ಥ ಸಂಚಾರದ ಮೇಲ್ವಿಚಾರಣೆ ನಡೆಸಲಿದೆ. ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಅವರು ಟ್ರಯಲ್ ರನ್ಗೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ RDSO ತಂಡ ಆಗಮಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರು–ಮಂಗಳೂರು ರೈಲು ಮಾರ್ಗದ ಅತ್ಯಂತ ಸವಾಲಿನ ಭಾಗವೆಂದರೆ ಸಕಲೇಶಪುರ–ಸುಬ್ರಹ್ಮಣ್ಯ ನಡುವಿನ ಸುಮಾರು 55 ಕಿಲೋಮೀಟರ್ ಘಾಟ್ ಪ್ರದೇಶ. ಈ ಮಾರ್ಗದಲ್ಲಿ 57 ಸುರಂಗಗಳು, 258 ಸೇತುವೆಗಳು ಹಾಗೂ 108 ತೀಕ್ಷ್ಣ ತಿರುವುಗಳು ಇರುವುದರಿಂದ ರೈಲು ಸಂಚಾರ ಅತ್ಯಂತ ಎಚ್ಚರಿಕೆಯಿಂದ ನಡೆಯಬೇಕಾಗುತ್ತದೆ. ವಿಶೇಷವಾಗಿ ಕಡಿದಾದ ಇಳಿಜಾರಿನ ಕಾರಣ ರೈಲಿನ ವೇಗ ನಿಯಂತ್ರಣಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಅಗತ್ಯವಿದೆ.
ಸಾಮಾನ್ಯವಾಗಿ ವಂದೇ ಭಾರತ್ ರೈಲು ಎಲೆಕ್ಟ್ರೋ-ನ್ಯೂಮ್ಯಾಟಿಕ್ (EP) ಡಿಸ್ಕ್ ಬ್ರೇಕ್ ಹಾಗೂ ರಿಜೆನೆರೇಟಿವ್ ಬ್ರೇಕಿಂಗ್ ವ್ಯವಸ್ಥೆ ಹೊಂದಿರುತ್ತದೆ. ಆದರೆ ಈ ಘಾಟ್ ಮಾರ್ಗದಲ್ಲಿ ಹೆಚ್ಚುವರಿ ಸುರಕ್ಷತೆಗಾಗಿ ವಿಶೇಷ ತಂತ್ರಜ್ಞಾನ ಅಗತ್ಯವಾಗಿದೆ. ಪ್ರಸ್ತುತ ಈ ಮಾರ್ಗದಲ್ಲಿ ಸಂಚರಿಸುವ ಕೆಲ ರೈಲುಗಳಿಗೆ ಬ್ಯಾಂಕರ್ ಇಂಜಿನ್ಗಳನ್ನು ಜೋಡಿಸಿ ಇಳಿಜಾರಿನಲ್ಲಿ ಸುರಕ್ಷಿತ ಸಂಚಾರ ಖಚಿತಪಡಿಸಲಾಗುತ್ತದೆ. ಆದರೆ ವಂದೇ ಭಾರತ್ ರೈಲಿಗೆ ಬ್ಯಾಂಕರ್ ಇಂಜಿನ್ ಜೋಡಿಸುವ ಪ್ರಕ್ರಿಯೆ ಹೆಚ್ಚು ಸಮಯ ತೆಗೆದುಕೊಳ್ಳುವುದಲ್ಲದೆ, ರೈಲಿನ ಮುಂಭಾಗದ ನೋಸ್ ಭಾಗವನ್ನು ತೆರವುಗೊಳಿಸಬೇಕಾಗುತ್ತದೆ.
ಈ ಎಲ್ಲ ತಾಂತ್ರಿಕ ಸವಾಲುಗಳಿಗೆ ಪರಿಹಾರವಾಗಿ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (AEB) ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನವು ಘಾಟ್ ಪ್ರದೇಶದಲ್ಲಿ ರೈಲಿನ ಗರಿಷ್ಠ ವೇಗವನ್ನು ಸ್ವಯಂಚಾಲಿತವಾಗಿ 30 ಕಿಲೋಮೀಟರ್ ವೇಗದೊಳಗೆ ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ಬ್ಯಾಂಕರ್ ಇಂಜಿನ್ ಅವಶ್ಯಕತೆ ಕಡಿಮೆಯಾಗುವ ಜೊತೆಗೆ ಸಂಚಾರದ ಸುರಕ್ಷತೆಯೂ ಹೆಚ್ಚಲಿದೆ.
ಆಗಸ್ಟ್ 11ರಿಂದ ಆರಂಭವಾಗುವ ಈ ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡರೆ, ಬೆಂಗಳೂರು–ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ಗೆ ರೈಲ್ವೆ ಮಂಡಳಿಯಿಂದ ಶೀಘ್ರದಲ್ಲೇ ವಾಣಿಜ್ಯ ಸಂಚಾರಕ್ಕೆ ಅಧಿಕೃತ ಅನುಮೋದನೆ ದೊರೆಯುವ ಸಾಧ್ಯತೆ ಇದೆ. ಇದರಿಂದ ಕರಾವಳಿ ಮತ್ತು ರಾಜ್ಯ ರಾಜಧಾನಿಯ ನಡುವಿನ ವೇಗದ, ಸುರಕ್ಷಿತ ಮತ್ತು ಆಧುನಿಕ ರೈಲು ಸೇವೆಯ ಕನಸು ನನಸಾಗುವ ನಿರೀಕ್ಷೆ ಮತ್ತಷ್ಟು ಬಲಗೊಂಡಿದೆ.





