ಬೆಂಗಳೂರು: ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ದೇಶಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ನಿಜ. ಆದರೆ, ಈ ಸಂಕಷ್ಟವನ್ನೇ ಬಂಡವಾಳ ಮಾಡಿಕೊಂಡಿರುವ ಬೆಂಗಳೂರಿನ ಕೆಲವು ಹೋಟೆಲ್ ಮಾಲೀಕರು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಊಟದ ಬಿಲ್ ಜೊತೆಗೆ ಗ್ಯಾಸ್ ಪೂರೈಕೆ ಸಮಸ್ಯೆ ಎಂಬ ಕಾರಣ ನೀಡಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಏನಿದು ಘಟನೆ ?
ನಗರದ ‘ಮಿಸ್ಟರ್ ಆಂಧ್ರ ಮಿಲ್ಸ್’ (Mr. Andhra Meals) ಎಂಬ ಹೋಟೆಲ್ಗೆ ಹೋದ ಯುವಕನೊಬ್ಬನಿಗೆ ಹೋಟೆಲ್ ಮಾಲೀಕರು ವಿಚಿತ್ರ ಶಾಕ್ ನೀಡಿದ್ದಾರೆ. ಆ ಯುವಕ ಪ್ಲೇನ್ ಪೆಸರ್ ದೋಸೆ ಮತ್ತು ಚಿಕನ್ ಕರಿ ಆರ್ಡರ್ ಮಾಡಿದ್ದರು. ಊಟ ಮುಗಿಸಿ ಬಿಲ್ ನೋಡಿದಾಗ, ಆಹಾರದ ದರದ ಜೊತೆಗೆ ಹೆಚ್ಚುವರಿಯಾಗಿ 30 ರೂಪಾಯಿಗಳನ್ನು ಗ್ಯಾಸ್ ಸರ್ಚಾರ್ಜ್ ಹೆಸರಿನಲ್ಲಿ ವಿಧಿಸಲಾಗಿತ್ತು.
ಈ ಬಿಲ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಯುವಕ, ಹೋಟೆಲ್ ಮಾಲೀಕರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಗ್ಯಾಸ್ ಪೂರೈಕೆ ಸಮಸ್ಯೆ ಇರುವುದು ನಿಜವಿರಬಹುದು, ಆದರೆ ಅದರ ಹೊರೆಯನ್ನು ನೇರವಾಗಿ ಗ್ರಾಹಕರ ಮೇಲೆ ಹಾಕುವುದು ಮತ್ತು ಬಿಲ್ನಲ್ಲಿ ಹೆಚ್ಚುವರಿ ಶುಲ್ಕ ವಿಧಿಸುವುದು ಹಗಲು ದರೋಡೆಯಂತೆ ಕಾಣುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೋಟೆಲ್ನ ಈ ಕ್ರಮವು ಇಂಟರ್ನೆಟ್ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಾಧ್ಯವಾದಷ್ಟು ನಮ್ಮನ್ನು ಲೂಟಿ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ಈಗಾಗಲೇ ಸಿಲಿಂಡರ್ ಕೊರತೆಯಿಂದಾಗಿ ಹೋಟೆಲ್ಗಳನ್ನು ಮುಚ್ಚುವ ಅಥವಾ ಮೆನು ಕಡಿತಗೊಳಿಸುವ ಎಚ್ಚರಿಕೆ ನೀಡಿದೆ. ಆದರೆ, ಕೆಲವು ಹೋಟೆಲ್ಗಳು ಕಾರ್ಯಾಚರಣೆ ಮುಂದುವರಿಸುತ್ತಾ ಇಂತಹ ವಸೂಲಿ ಮಾಡುತ್ತಿರುವುದು ಸರಿಯಲ್ಲ ಎಂಬುದು ಸಾರ್ವಜನಿಕರ ವಾದ.
ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಕಂಗಾಲಾಗಿದ್ದರೆ, ಮತ್ತೊಂದೆಡೆ ಹೋಟೆಲ್ಗಳ ಇಂತಹ ಕ್ರಮಗಳು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇಂತಹ ಹೋಟೆಲ್ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.





