ತಗ್ಗು ಪ್ರದೇಶದ ನಿವೇಶನಗಳಲ್ಲಿ ಅಂಡರ್ ಗ್ರೌಂಡ್ ವಾಹನ ನಿಲ್ದಾಣ ನಿರ್ಮಾಣಕ್ಕೆ ಅವಕಾಶವಿಲ್ಲ: ಡಿಕೆಶಿ

Untitled design 2025 05 20t221431.203

ಬೆಂಗಳೂರು: “ಕೆರೆಗಳ ಹತ್ತಿರ ಹಾಗೂ ತಗ್ಗು ಪ್ರದೇಶಗಳಲ್ಲಿ ಅಂಡರ್ ಗ್ರೌಂಡ್ ನಿರ್ಮಾಣ ಮಾಡಿ ವಾಹನ ನಿಲ್ದಾಣಕ್ಕೆ ಅವಕಾಶ ನೀಡದಂತೆ ಭವಿಷ್ಯದಲ್ಲಿ ಕಾನೂನು ತರಲಾಗುವುದು. ಮಳೆ ಕಡಿಮೆಯಾದ ನಂತರ ಇದರ ಬಗ್ಗೆ ಕಾರ್ಯಸೂಚಿ ಬಿಡುಗಡೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದ ಉಂಟಾದ ವಿದ್ಯುತ್ ಅವಘಡದಲ್ಲಿ ಬಿ.ಟಿ.ಎಂ 2ನೇ ಹಂತದ ಡಾಲರ್ಸ್ ಕಾಲೋನಿ ಬಳಿಯ ಎಂ.ಎಸ್. ಪಾಳ್ಯದಲ್ಲಿ ಮನಮೋಹನ್ ಕಾಮತ್ ಹಾಗೂ ದಿನೇಶ್ ಎಂಬುವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಘಟನಾ ಸ್ಥಳಕ್ಕೆ ಮಂಗಳವಾರ ಸಂಜೆ ಅಧಿಕಾರಿಗಳ ಜತೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸ್ವಾಂತನ ಹೇಳಿದರು. ನಂತರ ಮಧ್ಯಮಗಳ ಜತೆ ಮಾತನಾಡಿದರು.

“ಅಂಡರ್ ಗ್ರೌಂಡ್ ಹೊರತು ಪಡಿಸಿ ನೆಲ ಮಹಡಿಯಲ್ಲಿ ವಾಹನಗಳನ್ನು ನಿಲ್ಲಿಸುವ ರೀತಿ ಯೋಜನೆ ರೂಪಿಸುವ ಆಲೋಚನೆಯಿದೆ. ಅದರ ಮೇಲೆ ಜನರು ವಾಸಕ್ಕೆ ಮನೆ ನಿರ್ಮಾಣ‌ ಮಾಡಿಕೊಳ್ಳಲಿ” ಎಂದರು.

“ಅಂಡರ್ ಗ್ರೌಂಡ್ ನಲ್ಲಿ ಸಂಗ್ರಹವಾಗಿದ್ದ ನೀರನ್ನು ಪಂಪ್ ಹಾಕಿ ಖಾಲಿ ಮಾಡುವಾಗ ಅಧಿಕಾರಿಗಳು, ಪೊಲೀಸ್ ಹಾಗೂ ಸಹಾಯ ಮಾಡಲು ಬಂದ ವ್ಯಕ್ತಿಗಳಿಗೂ ವಿದ್ಯುತ್ ಆಘಾತವಾಗಿದೆ. ಈ ವೇಳೆ ಮೃತಪಟ್ಟ ನಾಗರಿಕರಿಗೂ ಪರಿಹಾರ ನೀಡಲಾಗುವುದು. ಮಳೆ ಅವಘಡದಿಂದ ಮೃತಪಟ್ಟವರಿಗೆ 5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಜಾನುವಾರುಗಳು ಸಹ ಮೃತಪಟ್ಟಿದ್ದು ಇದಕ್ಕೂ ಪರಿಹಾರ ನೀಡಲಾಗುವುದು. ನಮ್ಮ ಅಧಿಕಾರಿಗಳಿಗೆ ದಿನಪೂರ್ತಿ ಎಚ್ಚರವಹಿಸುವಂತೆ ಸೂಚನೆ ನೀಡಲಾಗಿದೆ” ಎಂದರು.

ಬಿಬಿಎಂಪಿ ಹಾಗೂ ಬಿಡ್ಬ್ಲೂ ಎಸ್ ಎಸ್ ಬಿಯವರಿಂದ ಸರಿಯಾದ ಪ್ರತಿಕ್ರಿಯೆ ದೊರೆಯುತ್ತಿಲ್ಲ ಎನ್ನುವ ಸಾರ್ವಜನಿಕರ ದೂರಿನ ಬಗ್ಗೆ ಕೇಳಿದಾಗ, “ಬೆಂಗಳೂರಿನ ಜನಸಂಖ್ಯೆ 1.40 ಕೋಟಿಯಿದೆ. ವಾರ್ ರೂಮಲ್ಲಿ ಹೇಗೆ ಕೆಲಸ ನಡೆಯುತ್ತದೆ ಎಂದು ಮಾಧ್ಯಮಗಳೇ ಒಮ್ಮೆ ಬಂದು ನೋಡಿ. ಎಲ್ಲರು ತಂಡವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು‌

“ಮಳೆ ಬಂದು ಅವಘಡ ಉಂಟಾಗಿರುವ ಭಾಗದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಸಾರ್ವಜನಿಕರು ಸಹ ಸಹಕಾರ ನೀಡುತ್ತಿದ್ದಾರೆ. ವಾರ್ ರೂಮ್ ಮೂಲಕವೂ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ” ಎಂದು ಹೇಳಿದರು.

ಸೋಶಿಯಲ್ ಮೀಡಿಯಾಗಳಲ್ಲಿ ಟೀಕೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಹೀಗೆ ಮಾಡುವವರು, ಸರ್ಕಾರಕ್ಕೆ ಕೆಟ್ಟ ಹೆಸರು ತರುವವರು ಟೀಕೆ ಮಾಡುತ್ತಿಲ್ಲ ಬೆಂಗಳೂರಿನ ಹೆಸರನ್ನು ಹಾಳು ಮಾಡುತ್ತಿದ್ದಾರೆ” ಎಂದರು.

ಬಿಜೆಪಿಯವರು ಮಳೇ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನಿಮ್ಮ ಫೋಟೊ ಹಿಡಿದು ವ್ಯಂಗ್ಯ ಮಾಡಿರುವ ಬಗ್ಗೆ ಕೇಳಿದಾಗ, “ಅವರಿಂದ ಇನ್ನೇನು ಮಾಡಲು ಸಾಧ್ಯವಾಗುತ್ತದೆ, ಮಾಡಲಿ ಬಿಡಿ‌. ನಾವು ಎರಡು ವರ್ಷದ ಸಂಭ್ರಮಾಚರಣೆ ಮಾಡಿದ್ದೇವೆ. ಮೋದಿಯವರ ಸರ್ಕಾರಕ್ಕೆ 5 ವರ್ಷ ತುಂಬಿದಾಗ ಸಂಭ್ರಮ ಮಾಡಿರಲಿಲ್ಲವೇ? ಸಂತೋಷ ಪಡಬೇಡ ಎಂದು ಹೇಳಿದರೆ ಹೇಗೆ, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ‌. ಆಚರಣೆ ಮಾಡಲು ನಮಗೆ ಹಕ್ಕಿಲ್ಲವೇ? ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು, ಆಗ ಮಳೆ ಬಂದಿದೆ.‌ ಈಗ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಲೇ ನಾವಿದ್ದೇವೆ” ಎಂದರು.

ಮುಂದಿನ ನಾಲ್ಕೈದು ದಿನ ಮಳೆ ಬರುತ್ತದೆ ಎನ್ನುವ ವರದಿ ಬಗ್ಗೆ ಕೇಳಿದಾಗ, “ಮಳೆ ಜಾಸ್ತಿ ಬರಬಹುದು. ಇದರ ಬಗ್ಗೆ ನಾವು ಜಾಗೃತರಾಗಿದ್ದೇವೆ” ಎಂದು ಹೇಳಿದರು.

Exit mobile version