ಬೆಂಗಳೂರು: ಐದಾರು ತಿಂಗಳ ಹಿಂದೆ ನಡೆದ ಮದುವೆ, ಕೆಲವೇ ವಾರಗಳಲ್ಲಿ ಗಲಾಟೆಗೆ ತಿರುಗಿ, ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಅಚ್ಚರಿ ಪ್ರಕರಣ ಬೆಂಗಳೂರಿನ ನೆಲಮಂಗಲ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಹೆಸರಘಟ್ಟದ 26 ವರ್ಷದ ಯುವತಿ ಮತ್ತು ನೆಲಮಂಗಲದ 30 ವರ್ಷದ ಚಾರ್ಟೆಡ್ ಅಕೌಂಟೆಂಟ್ ಜೋಡಿ ಜೂನ್ 9ರಂದು ವೈಭವದಿಂದ ಮದುವೆಯಾಗಿದ್ದರು. ಸಾಕಷ್ಟು ವರದಕ್ಷಿಣೆ ಹಾಗೂ ಚಿನ್ನಾಭರಣ ನೀಡಿ ಮದುವೆ ಮಾಡಿದರೂ, ಫಸ್ಟ್ ನೈಟ್ನಿಂದಲೇ ಸಮಸ್ಯೆಗಳ ಸರಮಾಲೆ ಆರಂಭವಾಯಿತು.
ಫಸ್ಟ್ ನೈಟ್ನಲ್ಲಿ ನಿರಾಸೆ
ವೈವಾಹಿಕ ಜೀವನ ಸುಂದರವಾಗಿರುತ್ತದೆ ಎಂದು ಕನಸು ಕಂಡಿದ್ದ ವಧುವಿಗೆ ದಿನದಿಂದ ದಿನಕ್ಕೆ ನಿರಾಶೆಯೇ ಸಿಗುತ್ತಿತ್ತು. ದಂಪತಿಗೆ ಮಕ್ಕಳಾಗದಿರುವ ಬಗ್ಗೆ ಮನೆಯವರಲ್ಲಿ ಆತಂಕ ಹೆಚ್ಚಾಗುತ್ತಿದ್ದಂತೆ, ಎರಡೂ ಕುಟುಂಬಗಳು ವೈದ್ಯಕೀಯ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಬಂದಿವೆ.
ಕನ್ಯತ್ವ–ಪುರುಷತ್ವ ಪರೀಕ್ಷೆಯಲ್ಲಿ ತಿರುವು
ಬೆಂಗಳೂರಿನ ಕ್ಲೌಡ್ ನೈನ್ ಫರ್ಟಿಲಿಟಿ ಆಸ್ಪತ್ರೆಯಲ್ಲಿ ತಪಾಸಣೆ ನಡೆದಿದ್ದು, ವಧುವಿನ ಎಲ್ಲಾ ವೈದ್ಯಕೀಯ ವರದಿಗಳು ಸಾಮಾನ್ಯವಾಗಿದ್ದವು. ಆದರೆ ಪತಿಯು ಪುರುಷತ್ವ ಪರೀಕ್ಷೆ ಮಾಡಿಸದೇ, ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ ಎಂಬುದು ಬಯಲಾಗಿದೆ.
ಮನೆಗೆ ಹಿಂತಿರುಗಿ ಬಂದಾಗ ಹಲ್ಲೆ
ಆಸ್ಪತ್ರೆಯಿಂದ ಓಡಿಹೋಗಿ ಮನೆಗೆ ಬಂದ ಪತಿ ಮತ್ತು ಅತ್ತೆಯು ವಧುವಿಗೆ ಹಲ್ಲೆ ನಡೆಸಿದರಂತೆ. ಮಾನಸಿಕ ಮತ್ತು ದೈಹಿಕ ಹಿಂಸೆ ಜೊತೆಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ಇದರಿಂದ ನೊಂದ ಮಹಿಳೆ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಆರೋಪಿಗಳು ಪರಾರಿ
ಪತಿ, ಅತ್ತೆ ಹಾಗೂ ಮಾವನ ವಿರುದ್ಧ ಸೆಕ್ಷನ್ 85 (BNS) ಮತ್ತು ಡೌರಿ ಪ್ರೊಹಿಬಿಷನ್ ಆಕ್ಟ್ನ ಸೆಕ್ಷನ್ 3, 4 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಬಗ್ಗೆ ಸಂಪೂರ್ಣ ತನಿಖೆ ಆರಂಭಿಸಿದ ನೆಲಮಂಗಲ ಪೊಲೀಸರು, ಆರೋಪಿಗಳ ಶೋಧ ಕಾರ್ಯವನ್ನು ಇದೀಗ ತೀವ್ರಗೊಳಿಸಿದ್ದಾರೆ. ಒಟ್ಟಾರೆ ನವವಿವಾಹಿತೆಯ ಕನಸುಗಳನ್ನೇ ಕಿತ್ತುಕೊಂಡ ಈ ಘಟನೆ, ಸ್ಥಳೀಯರಲ್ಲಿ ಕುತೂಹಲ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ವರದಿ ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ
