ಗಂಡನ ಹತ್ಯೆಯ ಆರೋಪಿಯನ್ನು ಪತ್ತೆಹಚ್ಚಿದ ಪತ್ನಿ

ಇಂದ್ರ ಬಿಸ್ವಾನ್
ADVERTISEMENT
ADVERTISEMENT

ಬೆಂಗಳೂರು: ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಂಭೀರ ಕೊಲೆ ಪ್ರಕರಣವೊಂದರಲ್ಲಿ, ಗಂಡನ ಹತ್ಯೆಯ ಸತ್ಯವನ್ನು ಆತನ ಪತ್ನಿಯೇ ಬಯಲಿಗೆಳೆದಿದ್ದಾಳೆ. ನೇಪಾಳ ಮೂಲದ ದೀಪಕ್ ಎಂಬಾತನ ಹತ್ಯೆಯನ್ನು ಆತನ ಪತ್ನಿ ಸುಷ್ಮಾ ತನ್ನ ಧೈರ್ಯ ಮತ್ತು ನಿರಂತರ ಪರಿಶ್ರಮದಿಂದ ಪತ್ತೆ ಹಚ್ಚಿದ್ದಾರೆ. ವರ್ತೂರು ಪೊಲೀಸರು ಕೊಲೆ ಕೇಸ್‌ನ ಆರೋಪಿಯನ್ನು ಪತ್ತೆ ಹಚ್ಚಲು ನಿರ್ಲಕ್ಷ್ಯ ತೋರಿದ್ದು, ಸುಷ್ಮಾ ತನ್ನ ಗಂಡನ ಕೊಲೆಗಾರನನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯ ವಿವರ:
ಕಳೆದ ಮೇ 1ರಂದು ವರ್ತೂರಿನ ಮೋರಿಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ದೀಪಕ್‌ನ ಮೃತದೇಹ ಪತ್ತೆಯಾಗಿತ್ತು. ಎದೆ ಭಾಗದಲ್ಲಿ ಗಾಯದ ಗುರುತು ಕಂಡುಬಂದಿದ್ದರಿಂದ, ಸುಷ್ಮಾ ಇದು ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ವರ್ತೂರು ಪೊಲೀಸರು ಈ ಪ್ರಕರಣವನ್ನು ಕೇವಲ ಅಸಹಜ ಮರಣ ವರದಿ (ಯುಡಿಆರ್) ಎಂದು ದಾಖಲಿಸಿ, ತನಿಖೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ, ಸುಷ್ಮಾ ತನ್ನ ಗಂಡನ ಸಾವಿನ ಸತ್ಯವನ್ನು ಕಂಡುಹಿಡಿಯಲು ದೃಢನಿಶ್ಚಯದಿಂದ ಮುಂದಾದರು.

ಗಂಡನ ಕೊಲೆಯ ಶಂಕೆಯನ್ನು ಕೈಬಿಡದ ಸುಷ್ಮಾ, ಸ್ವತಃ ತನಿಖೆಗಿಳಿದಿದ್ದು, ಜೂನ್ 5ರಂದು ಸಂಬಂಧಿಯೊಬ್ಬರಾದ ಕರುಣ್ ಸಿಂಗ್‌ಗೆ ಆರೋಪಿ ಇಂದ್ರ ಬಿಸ್ಪಾ ತಾನೇ ದೀಪಕ್‌ನನ್ನು ಕೊಂದಿರುವುದಾಗಿ ದೂರವಾಣಿಯಲ್ಲಿ ಒಪ್ಪಿಕೊಂಡಿದ್ದ. ಈ ಮಾಹಿತಿಯನ್ನು ಕರುಣ್ ಸಿಂಗ್ ಸುಷ್ಮಾಳಿಗೆ ತಿಳಿಸಿದರು. ಕೂಡಲೇ ಸುಷ್ಮಾ ವರ್ತೂರು ಪೊಲೀಸರಿಗೆ ದೂರು ಸಲ್ಲಿಸಿದರು. ಆಕೆಯ ಈ ಧೈರ್ಯಕ್ಕೆ ಮೆಚ್ಚಿದ ಪೊಲೀಸರು, ಆರೋಪಿ ಇಂದ್ರ ಬಿಸ್ಪಾನನ್ನು ಬಂಧಿಸಿ, ಕೊಲೆ ಪ್ರಕರಣದ ತನಿಖೆಗೆ ಚುರುಕುಗೊಳಿಸಿದ್ರು.

ಕೊಲೆಯ ಹಿನ್ನೆಲೆ
ಪ್ರಾಥಮಿಕ ತನಿಖೆಯಿಂದ ತಿಳಿದುಬಂದ ಮಾಹಿತಿಯಂತೆ, ಏಪ್ರಿಲ್ 11ರಂದು ದೀಪಕ್ ಮತ್ತು ಸುಷ್ಮಾ ನಡುವೆ ಜಗಳ ನಡೆದಿತ್ತು. ಈ ಜಗಳವನ್ನು ಬಿಡಿಸಲು ಮಧ್ಯಪ್ರವೇಶಿಸಿದ ಸಂಬಂಧಿ ಇಂದ್ರ ಬಿಸ್ಪಾ ಮೇಲೆ ದೀಪಕ್ ಕೈಯೆತ್ತಿದ್ದ. ಈ ಘಟನೆಯಿಂದ ಕೋಪಗೊಂಡ ಇಂದ್ರ, ದೀಪಕ್‌ನನ್ನು ಕೊಂದು ಮೃತದೇಹವನ್ನು ಮೋರಿಯಲ್ಲಿ ಎಸೆದಿದ್ದ ಎಂದು ತಿಳಿದುಬಂದಿದೆ. ಮೃತದೇಹ ಕೊಳೆತ ವಾಸನೆ ಬಂದಾಗ ಸ್ಥಳೀಯರಿಗೆ ಗೊತ್ತಾಗಿ, ಪೊಲೀಸರಿಗೆ ಮಾಹಿತಿ ತಲುಪಿಸಿದರು.

ಪೊಲೀಸರು ಆರಂಭದಲ್ಲಿ ಈ ಪ್ರಕರಣವನ್ನು ಯುಡಿಆರ್ ಎಂದು ದಾಖಲಿಸಿ, ಸುಷ್ಮಾಳ ಆರೋಪವನ್ನು ಗಂಭೀರವಾಗಿ ಪರಿಗಣಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಆದರೆ, ಸುಷ್ಮಾಳ ಧೈರ್ಯದಿಂದ ಕೊಲೆಯ ಸತ್ಯ ಬಯಲಿಗೆ ಬಂದಿದೆ.

Exit mobile version