ಕಾವೇರಿ ನದಿ ನೀರು ವಿವಾದದಲ್ಲಿ ಮತ್ತೊಂದು ಮಹತ್ತ್ವದ ಬೆಳವಣಿಗೆಯಾಗಿದೆ. ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸಂಪೂರ್ಣ ವಜಾಗೊಳಿಸಿದೆ. ಈ ತೀರ್ಪನ್ನು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನ್ಯಾಯ ಪೀಠದಿಂದ ನಮಗೆ ನ್ಯಾಯ ಸಿಕ್ಕಂತಾಗಿದೆ ಎಂದು ಬಣ್ಣಿಸಿ, ಬೆಂಗಳೂರಿಗರ ಗೆಲುವು ಎಂದು ಘೋಷಿಸಿದ್ದಾರೆ. ತಮಿಳುನಾಡಿಗೆ ಸಹಕಾರ ಕೋರಿ, ಕೇಂದ್ರ ಜಲ ಆಯೋಗ (CWC)ಗೆ ಅನುಮತಿ ನೀಡುವುದು ಬೇರೆ ಆಯ್ಕೆ ಇಲ್ಲ ಎಂದು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಪ್ರತಿಕ್ರಿಯೆ ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಮೇಕೆದಾಟು ಯೋಜನೆಯ ಡಿಪಿಆರ್ (ವಿವರವಾದ ಯೋಜನಾ ವರದಿ) ವಿರೋಧಿಸಿ ತಮಿಳುನಾಡು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಇದು ಯಾವುದೇ ರೀತಿಯ ಹಿನ್ನಡೆಯಲ್ಲ. ಬದಲಿಗೆ ನ್ಯಾಯ ಪೀಠದಿಂದ ನ್ಯಾಯ ಸಿಕ್ಕಂತಾಗಿದೆ. ಮೇಕೆದಾಟು ‘ನಮ್ಮ ನೀರು, ನಮ್ಮ ಹಕ್ಕು’ ಯೋಜನೆ. ನಾವು ತಮಿಳುನಾಡಿಗೆ ಯಾವುದೇ ಅಡ್ಡಿ ಮಾಡುತ್ತಿಲ್ಲ, ಬದಲಿಗೆ ಈ ಯೋಜನೆಯಿಂದ ತಮಿಳುನಾಡಿಗೇ ಹೆಚ್ಚು ಲಾಭವಾಗಲಿದೆ. ರಾಜ್ಯದ ಜನರ ಪ್ರಾರ್ಥನೆ ಮತ್ತು ಕಷ್ಟಕ್ಕೆ ನ್ಯಾಯಾಲಯ ಸ್ಪಂದಿಸಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಮೇಕೆದಾಟು ಸಮತೋಲನ ಜಲಾಶಯವು ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆ ಉದ್ದೇಶ ಹೊಂದಿದೆ. ನಮ್ಮ ನೆಲದಲ್ಲಿ, ನಮ್ಮ ಹಣದಲ್ಲಿ ಯೋಜನೆ ನಿರ್ಮಾಣ. ನೀರು ಕೊರತೆಯ ಸಮಯದಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಹಾಯಕ. ಬೆಂಗಳೂರು ನಗರಕ್ಕೆ 65 TMC ನೀರು ಸಂಗ್ರಹ. ತಮಿಳುನಾಡು ಸೇರಿದಂತೆ ಇತರ ರಾಜ್ಯಗಳ ಜನರಿಗೂ ನೀರು ಒದಗಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನ್ಯಾಯಾಲಯ ತೀರ್ಮಾನದಂತೆ ತಮಿಳುನಾಡು ತನ್ನ ಪಾಲಿನ ನೀರನ್ನು ಪಡೆಯಲಿದೆ. ಆದರೆ ಈ ಯೋಚನೆಯು ಬೆಂಗಳೂರಿಗರ ಗೆಲುವು. ಈಗಲಾದರೂ ತಮಿಳುನಾಡು ಸಹಕಾರ ನೀಡಲಿ. ನಾವೆಲ್ಲರೂ ಮಾನವೀಯತೆಯ ದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡೋಣ” ಎಂದು ಮನವಿ ಮಾಡಿದರು.
CWCಗೆ ಬೇರೆ ಆಯ್ಕೆ ಇಲ್ಲ ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಕೇಂದ್ರ ಜಲ ಆಯೋಗಕ್ಕೆ ಮಾರ್ಗದರ್ಶನ ನೀಡಿದ್ದು, ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. CWC ಯೋಜನೆಗೆ ಸಹಕಾರ ನೀಡುವುದೇ ಎಂದು ಕೇಳಿದಾಗ, ಶಿವಕುಮಾರ್ ಅವರು, ಅನುಮತಿ ನೀಡದೇ ಬೇರೆ ಆಯ್ಕೆ ಅವರ ಮುಂದೆ ಇಲ್ಲ. ಅವರು ನ್ಯಾಯ ಒದಗಿಸಿಕೊಡಲೇಬೇಕು. ಯೋಜನೆಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ದೃಢವಾಗಿ ತಿಳಿಸಿದರು.
ತೀರ್ಪಿನ ಹಿನ್ನೆಲೆ ತಮಿಳುನಾಡು ಅರ್ಜಿಯಲ್ಲಿ:
- ಯೋಜನೆಯು ಕಾವೇರಿ ಜಲ ವಿವಾದ ನ್ಯಾಯಾಧಿಕರಣ (CWDT) ತೀರ್ಪಿಗೆ ವಿರೋಧ.
- ಪರಿಸರ ಹಾನಿ, ನೀರು ಕಡಿತ ಆಧಾರದ ಮೇಲೆ ತಡೆಯಾಜ್ಞೆ ಕೋರಿತ್ತು.
ಆದರೆ ಸುಪ್ರೀಂ ಕೋರ್ಟ್:
- ಯೋಜನೆಯು ಸಮತೋಲನ ಜಲಾಶಯ ಮಾತ್ರ.
- ತಮಿಳುನಾಡಿನ ಹಕ್ಕುಗಳಿಗೆ ಧಕ್ಕೆಯಿಲ್ಲ.
- ಕರ್ನಾಟಕದ ಪರಿಸರ ಅನುಮತಿ, ತಾಂತ್ರಿಕ ವರದಿ ಸಾಕಷ್ಟು.
ಯೋಜನೆಯ ಮುಂದಿನ ಹಂತ
CWC ಅಂತಿಮ ಅನುಮತಿ ನೀಡಿ , ಟೆಂಡರ್ ಪ್ರಕ್ರಿಯೆ ಆರಂಭವಾಗುತ್ತದೆ. ನಂತರ ಸುಮಾರು ₹9,000 ಕೋಟಿ ವೆಚ್ಚದಲ್ಲಿ ಯೋಜನೆ ಆರಂಭವಾಗುತೆತದೆ. ಜೊತೆಗೆ ಈ ಯೋಜನೆಯಿಂದ ಬೆಂಗಳೂರು, ರಾಮನಗರ, ಮಂಡ್ಯಕ್ಕೆ ನೀರು ಹಾಗೂ ಸುಮಾರು 400 MW ವಿದ್ಯುತ್ ದೊರಕಲಿದೆ.ಜನರ ನಿರೀಕ್ಷೆ ಬೆಂಗಳೂರಿನ ನೀರು ಬಿಕ್ಕಟ್ಟು ನಿವಾರಣೆಗೆ ಈ ತೀರ್ಪು ದೊಡ್ಡ ಆಸರೆ. ಆದರೆ ಅಂತರ್ರಾಜ್ಯ ಸೌಹಾರ್ದತೆಯನ್ನು ಕಾಪಾಡುವುದು ಸವಾಲು. ಡಿ.ಕೆ. ಶಿವಕುಮಾರ್ ಅವರ ಮನವಿಯಂತೆ, ತಮಿಳುನಾಡು ಸಹಕಾರ ನೀಡಿದರೆ ಎಲ್ಲರಿಗೂ ಲಾಭದಾಯಕ.
