ಬೆಂಗಳೂರು, ಜೂನ್ 17: ತನ್ನ ಲಿವ್-ಇನ್ ಗೆಳತಿಯನ್ನು (Live-in Girlfriend) ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಶನಿವಾರ ರಾತ್ರಿ ಬೆಂಗಳೂರಿನ ಮಲ್ಲೇಶ್ವರಂನ ಮನೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೊಲೆಯಾದವರು ಯಾರು?
ಕೊಲೆಯಾದ ಯುವತಿ ಅನುಷಾ (Anusha) ಎಂಬುವವಳು 20 ವರ್ಷದವಳಾಗಿದ್ದು, ಹಾಸನ ಜಿಲ್ಲೆಯ ಸಕಲೇಶಪುರ (Sakleshpur) ಮೂಲದವಳು. ಆರೋಪಿ ಶರತ್ (Sharath) (25) ಕೂಡ ಅದೇ ಊರಿನವನಾಗಿದ್ದು, ವೃತ್ತಿಯಲ್ಲಿ ವಾಟರ್ ಟ್ಯಾಂಕರ್ ಚಾಲಕನಾಗಿ (Water Tanker Driver) ಕೆಲಸ ಮಾಡುತ್ತಿದ್ದ. ಇಬ್ಬರೂ ಸುಮಾರು 6 ತಿಂಗಳ ಹಿಂದೆ ಇನ್ಸ್ಟಾಗ್ರಾಮ್ (Instagram) ಮೂಲಕ ಪರಿಚಯವಾಗಿದ್ದರು. ಆನ್ಲೈನ್ನಲ್ಲಿ ಆರಂಭವಾದ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿದ್ದು, ಇಬ್ಬರೂ ಮಲ್ಲೇಶ್ವರದಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು.
ಘಟನೆಯ ಹಿನ್ನೆಲೆ ಏನು?
6 ತಿಂಗಳ ಹಿಂದೆ ಈ ಜೋಡಿಯು ಮಲ್ಲೇಶ್ವರಂನ ತಾಯಪ್ಪ ಗಾರ್ಡನ್ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಲಿವ್-ಇನ್ ಸಂಬಂಧವನ್ನು ಪ್ರಾರಂಭಿಸಿತ್ತು. ಅನುಷಾ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಆದರೆ ಶರತ್ ಅವಳನ್ನು ತುಂಬಾ ಪ್ರೀತಿಸುತ್ತಿದ್ದನು ಮತ್ತು ಬಟ್ಟೆ, ಪಾತ್ರೆಗಳನ್ನು ಸ್ವತಃ ತೊಳೆಯುತ್ತಿದ್ದನು ಎನ್ನಲಾಗಿದೆ. ಆದರೆ, ಅವರ ನಡುವೆ ಆಗಾಗ್ಗೆ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಜಗಳಗಳು ನಡೆಯುತ್ತಿದ್ದವು.
ಸುಮಾರು ಎರಡು ತಿಂಗಳ ಹಿಂದೆ ಜಗಳದಿಂದಾಗಿ ಅನುಷಾ ಸಕಲೇಶಪುರಕ್ಕೆ ಹೋಗಿ ಅಲ್ಲೇ ಉಳಿದುಕೊಂಡಿದ್ದಳು. ಆದರೆ ಕೆಲವು ದಿನಗಳ ಮೊದಲು ಶರತ್ ಅವಳನ್ನು ಮತ್ತೆ ಬೆಂಗಳೂರಿಗೆ ಕರೆತಂದನು. ಶರತ್ ಅವಳನ್ನು ಕರೆತಂದ ಎರಡೇ ದಿನಕ್ಕೆ ಅಂದರೆ ಶನಿವಾರ ರಾತ್ರಿ ಮತ್ತೆ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಆತ ಕೋಪದಲ್ಲಿ ಅನುಷಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಆರೋಪಿ ಹೇಗೆ ಬಂಧನಕ್ಕೆ?
ಕೊಲೆಯಾದ ಸೋಮವಾರ (ಜೂನ್ 17) ಆರೋಪಿ ಶರತ್ ತನ್ನ ಕೃತ್ಯದ ಬಗ್ಗೆ ವಕೀಲರೊಬ್ಬರಿಗೆ ಮಾಹಿತಿ ನೀಡಿದ್ದ. ವಿಚಾರ ತಿಳಿದು ಬೆಚ್ಚಿಬಿದ್ದ ವಕೀಲರು ತಕ್ಷಣವೇ ಶೇಷಾದ್ರಿಪುರಂ (Seshadripuram) ಪೊಲೀಸ್ ಠಾಣೆಗೆ ವಿಚಾರ ತಿಳಿಸಿದರು. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಪರಿಶೀಲನೆಯಲ್ಲಿ ಅನುಷಾನ ಮೃತದೇಹ ಪತ್ತೆಯಾಯಿತು. ಅಲ್ಲದೆ, ಆರೋಪಿ ಶರತ್ ಕೂಡ ಅಲ್ಲಿದ್ದು, ಆತನನ್ನು ತಕ್ಷಣ ಬಂಧಿಸಲಾಯಿತು. ಪೊಲೀಸರು ಘಟನಾ ಸ್ಥಳದಿಂದ ಮಹತ್ವದ ಪುರಾವೆಗಳನ್ನು ಸಂಗ್ರಹಿಸಿದ್ದು, ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ (Interrogation) ಒಳಪಡಿಸಿದ್ದಾರೆ.
ಪೊಲೀಸರು ಮೃತ ಅನುಷಾ ಅವರ ಮೃತದೇಹವನ್ನು ಪೋಸ್ಟ್ಮಾರ್ಟಮ್ (Post-mortem) ನಂತರ ಅವರ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಅನುಷಾಗೆ ತಂದೆ-ತಾಯಿ ಇಲ್ಲದಿದ್ದು, ಅವಳು ಓರ್ವ ಅಕ್ಕನನ್ನು ಇರುವುದಾಗಿ ತಿಳಿದುಬಂದಿದೆ. ಕುಟುಂಬದವರಿಗೆ ಮಾಹಿತಿ ನೀಡಲಾಗಿದ್ದು, ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಪೊಲೀಸರು ಆರೋಪಿ ಶರತ್ ಅನ್ನು ವಿಚಾರಣೆ ನಡೆಸುತ್ತಿದ್ದಾರೆ.
