ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ ಮುನ್ಸೂಚನೆ

Untitled design 2025 12 03T094531.489

ಬೆಂಗಳೂರು, ಡಿಸೆಂಬರ್ 3: ಚಳಿಗಾಲದ ಆರಂಭದಲ್ಲೇ ಇಂದು ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಉತ್ತರ ಕರ್ನಾಟಕದಲ್ಲಿ ಮಾತ್ರ ಒಣ ಹವೆಯ ಆಧಿಪತ್ಯ ಮುಂದುವರೆಯಲಿದೆ.

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗುಡುಗು-ಗರ್ಜನೆ ಸಹಿತ ಮಳೆಯಾಗಲಿದೆ. ಇದು ಕರಾವಳಿ ನಿವಾಸಿಗಳಿಗೆ ತಂಪು ಗಾಳಿಯ ಜೊತೆಗೆ ಸ್ವಲ್ಪ ತೊಂದರೆಯನ್ನೂ ಉಂಟುಮಾಡಬಹುದು. ಮೀನುಗಾರರು ಮತ್ತು ಪ್ರಯಾಣಿಕರು ಎಚ್ಚರ ವಹಿಸಬೇಕು ಎಂದು ಹವಾಮಾನ ಇಲಾಖೆ ಸೂಚಿಸಿದೆ.

ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಒಂದಷ್ಟು ಚಿಮುಕಿಸಲು ಮಳೆ ಸಾಧ್ಯತೆ ಹೆಚ್ಚಿದೆ.

ಬೆಂಗಳೂರಿನ  ಹವಾಮಾನ

ನಗರದ ಜನರೇ, ಇಂದು ಛತ್ರಿ ಮರೆಯದಿರಿ! ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಲಘು ಮಳೆಯ ಸಾಧ್ಯತೆ ಇದೆ. ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಮಳೆ ಬೀಳಬಹುದು. ಗರಿಷ್ಠ ತಾಪಮಾನ: 27° ಸೆಲ್ಸಿಯಸ್, ಕನಿಷ್ಠ ತಾಪಮಾನ: 17° ಸೆಲ್ಸಿಯಸ್, ಗಾಳಿಯ ವೇಗ: ಗಂಟೆಗೆ 10-11 ಕಿ.ಮೀ. ಈ ತಂಪು ತಾಪಮಾನ ಮತ್ತು ಲಘು ಮಳೆಯ ಕಾಂಬಿನೇಷನ್ ನಗರದ ಚಳಿಗಾಲದ ರೊಮಾಂಟಿಕ್ ಫೀಲ್ ಅನ್ನು ಇನ್ನಷ್ಟು ಹೆಚ್ಚಿಸಲಿದೆ. ಬೈಕ್ ಸವಾರರು, ರೈಡರ್‌ಗಳು  ರಸ್ತೆಗಳಲ್ಲಿ ಜಾರುವ ಸಾಧ್ಯತೆ ಇದೆ.

ಉತ್ತರ ಕರ್ನಾಟಕಕ್ಕೆ ಒಣ ಹವೆ

ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಧಾರವಾಡ, ಹಾವೇರಿ, ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ, ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯಲಿದೆ. ಇಲ್ಲಿ ಮಳೆಯ ಯಾವುದೇ ಸಾಧ್ಯತೆ ಇಲ್ಲ. ರೈತರು ನೀರಾವರಿ ವ್ಯವಸ್ಥೆಗೆ ಆದ್ಯತೆ ನೀಡಬೇಕಿದೆ.

ಅರಬ್ಬಿ ಸಮುದ್ರದಲ್ಲಿ ರೂಪುಗೊಳ್ಳುತ್ತಿರುವ ವಾಯುಭಾರ ಕುಸಿತ ಮತ್ತು ಬಂಗಾಳ ಕೊಲ್ಲಿಯಿಂದ ಬರುತ್ತಿರುವ ಗಾಳಿ ಈ ಮಳೆಗೆ ಕಾರಣ. ನಾಳೆಯೂ ಇದೇ ರೀತಿಯ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ. ಆದರೆ ಡಿಸೆಂಬರ್ 5-6ರ ನಂತರ ಮಳೆಯ ಪ್ರಮಾಣ ಕಡಿಮೆಯಾಗಿ, ರಾಜ್ಯದಾದ್ಯಂತ ಚಳಿಗಾಲದ ಒಣ ಹವೆ ಪ್ರಾರಂಭವಾಗುವ ನಿರೀಕ್ಷೆ ಇದೆ.

Exit mobile version