ಸಿಲಿಕಾನ್ ಸಿಟಿಯ ಅತ್ಯಂತ ಪ್ರಾಚೀನ ಹಾಗೂ ಜನಪ್ರಿಯ ಹಬ್ಬವಾದ ಬೆಂಗಳೂರು ಕರಗ ಶಕ್ರೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ತಿಗಳರಪೇಟೆಯ ಪ್ರಸಿದ್ಧ ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಅದ್ಧೂರಿ ಆಚರಣೆಗಳು ಜರುಗಲಿವೆ. ಈ ಬಾರಿ ಒಟ್ಟು 11 ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಈ ಸಂಭ್ರಮ ನಡೆಯಲಿದೆ.
ಜ್ಞಾನೇಂದ್ರ ಸ್ವಾಮಿ ಅವರಿಗೆ ಸತತ 16ನೇ ಬಾರಿ ಕರಗ ಹೊರುವ ಭಾಗ್ಯ
ಈ ಬಾರಿಯ ಉತ್ಸವದ ವಿಶೇಷವೆಂದರೆ, ಅನುಭವೀ ಅರ್ಚಕರಾದ ಜ್ಞಾನೇಂದ್ರ ಸ್ವಾಮಿ ಅವರು ಸತತ 16ನೇ ಬಾರಿಗೆ ಬೆಂಗಳೂರು ಕರಗವನ್ನು ಹೊರಲಿದ್ದಾರೆ. ಅವರ ಅಚಲ ಭಕ್ತಿ ಮತ್ತು ದಶಕಗಳ ಅನುಭವವು ಈ ಸಾಂಪ್ರದಾಯಿಕ ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಲಿದೆ. ಮಲ್ಲಿಗೆ ಹೂವಿನಿಂದ ಅಲಂಕೃತವಾದ ಭಾರೀ ಕರಗವನ್ನು ಹೊತ್ತು, ಸಮತೋಲನ ತಪ್ಪದಂತೆ ನಗರದಾದ್ಯಂತ ಸಂಚರಿಸುವ ಅವರ ಕಲೆ ಕರಗದ ಪ್ರಮುಖ ಆಕರ್ಷಣೆಯಾಗಿದೆ.
ಕರಗ ಮಹೋತ್ಸವದ ಪ್ರಮುಖ ದಿನಾಂಕಗಳು
ಉತ್ಸವದ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ್ ತಿಂಗಳಿನಿಂದಲೇ ಆರಂಭವಾಗಲಿದ್ದು, ಪ್ರಮುಖ ಘಟ್ಟಗಳು ಇಲ್ಲಿವೆ:
-
ಧ್ವಜಾರೋಹಣ (ಮಾರ್ಚ್ 24, 2026): ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ 11 ದಿನಗಳ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.
-
ಹಸಿಕರಗ (ಮಾರ್ಚ್ 30, 2026): ರಾತ್ರಿಯ ವೇಳೆಯಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ‘ಹಸಿಕರಗ’ ಮಹೋತ್ಸವ ಜರುಗಲಿದೆ. ಇದು ಮುಖ್ಯ ಕರಗಕ್ಕೆ ಪೂರ್ವಭಾವಿಯಾಗಿ ನಡೆಯುವ ಪವಿತ್ರ ಆಚರಣೆಯಾಗಿದೆ.
-
ವಿಶ್ವವಿಖ್ಯಾತ ಹೂವಿನ ಕರಗ (ಏಪ್ರಿಲ್ 1, 2026): ಚೈತ್ರ ಪೌರ್ಣಮಿಯ ಶುಭ ದಿನದಂದು ಮಧ್ಯರಾತ್ರಿ ವಿಶ್ವವಿಖ್ಯಾತ ಹೂವಿನ ಕರಗ ಮೆರವಣಿಗೆ ಆರಂಭವಾಗಲಿದೆ.
ತವಕಲ್ ಮಸ್ತಾನ್ ದರ್ಗಾ ಭೇಟಿ
ಸಂಪ್ರದಾಯದಂತೆ ಕರಗ ಹೊತ್ತ ಅರ್ಚಕರು ನಗರದ ತವಕಲ್ ಮಸ್ತಾನ್ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಶತಮಾನಗಳಿಂದ ನಡೆದು ಬಂದಿರುವ ಈ ಸಂಪ್ರದಾಯವು ನಗರದ ಭಾವೈಕ್ಯತೆಯನ್ನು ಎತ್ತಿ ಹಿಡಿಯುತ್ತದೆ.
ಮೆರವಣಿಗೆಯ ಉದ್ದಕ್ಕೂ ಸಾವಿರಾರು ವೀರಕುಮಾರರು ‘ಗೋವಿಂದಾ ಗೋವಿಂದಾ…’ ಎಂಬ ಉದ್ಘೋಷದೊಂದಿಗೆ ಕತ್ತಿ ವರಸೆ ಪ್ರದರ್ಶಿಸುತ್ತಾ ಕರಗಕ್ಕೆ ರಕ್ಷಣೆ ನೀಡುತ್ತಾ ಸಾಗಲಿದ್ದಾರೆ. ಕೆಂಪು ವಸ್ತ್ರಧಾರಿಗಳಾದ ವೀರಕುಮಾರರ ಸಾಹಸಮಯ ಪ್ರದರ್ಶನ ನೋಡುಗರ ಮೈಮನ ರೋಮಾಂಚನಗೊಳಿಸುತ್ತದೆ.
ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಯ ಸನ್ನದ್ಧತೆ
ಲಕ್ಷಾಂತರ ಭಕ್ತರು ದೇಶ-ವಿದೇಶಗಳಿಂದ ಈ ಉತ್ಸವ ನೋಡಲು ಬರುವ ಹಿನ್ನೆಲೆಯಲ್ಲಿ, ಬಿಬಿಎಂಪಿ (BBMP) ಮತ್ತು ಬೆಂಗಳೂರು ಪೊಲೀಸ್ ಇಲಾಖೆ ಈಗಿನಿಂದಲೇ ಸಿದ್ಧತೆ ಕೈಗೊಂಡಿವೆ. ಈ ಕುರಿತಂತೆ ಮೆರವಣಿಗೆ ಸಾಗುವ ಪೇಟೆ ಬೀದಿಗಳ ರಸ್ತೆ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮತ್ತು ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಯೋಜನೆ ರೂಪಿಸಲಾಗಿದ್ದು, ಹೆಚ್ಚು ಭದ್ರತೆ ವಹಿಸಲಾಗಿದೆ. ಇನ್ನು ಈ ಕರಗವನ್ನ ವೀಕ್ಷಿಸಲು ಸಾವಿರಾರು ಭಕ್ತರು ಜಮಾಯಿಸಲಿದ್ದು, ಕರಗ ಸಾಗುವ ರಸ್ತೆಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ ಮತ್ತು ಬೀದಿ ದೀಪಗಳ ವ್ಯವಸ್ಥೆಯನ್ನು ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.





