ಸಿಲಿಂಡರ್‌ ಕೊರತೆ: ಪ್ರಧಾನಿ ಮೋದಿಗೆ ಪತ್ರ ಬರೆದ ಬೆಂಗಳೂರು ಹೋಟೆಲ್ ಅಸೋಸಿಯೇಷನ್‌

Untitled design 2026 03 19T163309.985

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೋಟೆಲ್ ಉದ್ಯಮವು ಹಿಂದೆಂದೂ ಕಾಣದ ಸಂಕಷ್ಟಕ್ಕೆ ಸಿಲುಕಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧದ ಪರಿಣಾಮವಾಗಿ ಕರ್ನಾಟಕದಲ್ಲಿ ಕಮರ್ಷಿಯಲ್ (ವಾಣಿಜ್ಯ) ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ರಾಜಧಾನಿಯ ಸಾವಿರಾರು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಬಾಗಿಲು ಹಾಕುವ ಸ್ಥಿತಿಗೆ ತಲುಪಿವೆ. ಈ ತುರ್ತು ಪರಿಸ್ಥಿತಿಯನ್ನು ಬಗೆಹರಿಸುವಂತೆ ಕೋರಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಸಹಾಯ ಯಾಚಿಸಿದೆ.

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧವು ಸ್ಥಳೀಯ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಪೆಟ್ರೋಲಿಯಂ ಉತ್ಪನ್ನಗಳ ಆಮದು ಮತ್ತು ಪೂರೈಕೆ ಸರಪಳಿಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ವಾಣಿಜ್ಯ ಸಿಲಿಂಡರ್‌ಗಳ ಲಭ್ಯತೆ ಕ್ಷೀಣಿಸಿದೆ. ಬೆಂಗಳೂರು ನಗರವೊಂದರಲ್ಲೇ ಸುಮಾರು 40,000ಕ್ಕೂ ಹೆಚ್ಚು ಹೋಟೆಲ್‌ಗಳು ಕಾರ್ಯಾಚರಿಸುತ್ತಿವೆ. ಇವುಗಳಲ್ಲಿ ಪ್ರತಿದಿನ ಲಕ್ಷಾಂತರ ಜನರು ಆಹಾರ ಸೇವಿಸುತ್ತಾರೆ. ಆದರೆ ಸಿಲಿಂಡರ್ ಸಿಗದೆ ಅಡುಗೆ ಮನೆಗಳು ತಣ್ಣಗಾಗುತ್ತಿದ್ದು, ಮಾಲೀಕರು ಅಸಹಾಯಕರಾಗಿದ್ದಾರೆ.

ಪ್ರಧಾನಿಗೆ ಬರೆದ ಪತ್ರದಲ್ಲಿ ಏನಿದೆ ?

ಹೋಟೆಲ್ ಅಸೋಸಿಯೇಷನ್ ತನ್ನ ಪತ್ರದಲ್ಲಿ , ನಾವು ಅಗತ್ಯ ಸೇವೆಗಳ ವಿಭಾಗಕ್ಕೆ ಸೇರುತ್ತೇವೆ. ಹೋಟೆಲ್‌ಗಳು ಕೇವಲ ವ್ಯಾಪಾರ ಕೇಂದ್ರಗಳಲ್ಲ, ಅವು ಸಾಮಾನ್ಯ ಜನರಿಗೆ, ವಿಶೇಷವಾಗಿ ಆಟೋ-ಟ್ಯಾಕ್ಸಿ ಚಾಲಕರು, ಆನ್‌ಲೈನ್ ಡೆಲಿವರಿ ಬಾಯ್ಸ್, ನಿರ್ಮಾಣ ಕಾರ್ಮಿಕರು, ಆಸ್ಪತ್ರೆಯ ರೋಗಿಗಳು ಮತ್ತು ಹಿರಿಯ ನಾಗರಿಕರಿಗೆ ಪ್ರತಿದಿನದ ಆಹಾರ ಒದಗಿಸುವ ತಾಣಗಳು. ಪೂರೈಕೆ ಸ್ಥಗಿತಗೊಂಡಿರುವುದರಿಂದ ಕನಿಷ್ಠ ಶೇ. 50ರಷ್ಟು ಸರಬರಾಜು ಮಾಡುವಂತೆ ಪೆಟ್ರೋಲಿಯಂ ಸಚಿವರಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಹೋಟೆಲ್ ಉದ್ಯಮವನ್ನು ನಂಬಿಕೊಂಡಿರುವ ಸುಮಾರು 6 ಲಕ್ಷಕ್ಕೂ ಹೆಚ್ಚು ಕಾರ್ಮಿಕರ ಬದುಕು ಈಗ ಬೀದಿಗೆ ಬೀಳುವ ಆತಂಕದಲ್ಲಿದೆ. ಹೋಟೆಲ್‌ಗಳು ಬಂದ್ ಆದರೆ ಕೇವಲ ಮಾಲೀಕರಿಗೆ ಮಾತ್ರವಲ್ಲದೆ, ಅವರಿಗೆ ಹಾಲು, ಹಣ್ಣು, ತರಕಾರಿ ಪೂರೈಸುವ ರೈತರು ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಮೇಲೂ ಇದು ಕೆಟ್ಟ ಪರಿಣಾಮ ಬೀರಲಿದೆ. ಈಗಾಗಲೇ ಹೋಟೆಲ್ ಅಸೋಸಿಯೇಷನ್ ಈ ಕುರಿತು ಹೈಕೋರ್ಟ್‌ಗೆ ರಿಟ್ ಅರ್ಜಿಯನ್ನೂ ಸಲ್ಲಿಸಿದೆ.

ಕೇವಲ ಪೂರೈಕೆ ಮಾತ್ರವಲ್ಲದೆ, ಈ ಕ್ಷೇತ್ರದಲ್ಲಿ ಉದ್ಭವಿಸಿರುವ ಒಟ್ಟಾರೆ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಪ್ರಧಾನಿಯವರ ಭೇಟಿಗೆ ಸಮಯ ಕೋರಲಾಗಿದೆ. ಸ್ವಯಂ ಉದ್ಯೋಗಿಗಳಾದ 40,000 ಹೋಟೆಲ್ ಮಾಲೀಕರ ಹಿತದೃಷ್ಟಿಯಿಂದ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ತಕ್ಷಣದ ಕ್ರಮ ಅಗತ್ಯವಿದೆ ಎಂದು ಅಸೋಸಿಯೇಷನ್ ಒತ್ತಿ ಹೇಳಿದೆ.

Exit mobile version