ಕೃತಕ ಬುದ್ಧಿಮತ್ತೆ (Artificial Intelligence – AI) ಜಗತ್ತಿನ ಎಲ್ಲಾ ಕ್ಷೇತ್ರಗಳನ್ನು ಬದಲಾಯಿಸುತ್ತಿರುವಂತೆ, ಬೆಂಗಳೂರಿನ ಐಟಿ ನಗರವನ್ನೂ ಹೊಸ ಎತ್ತರಕ್ಕೆ ಕೊಂಡೊಯ್ಯುವ ದೊಡ್ಡ ಯೋಜನೆಗೆ ಕರ್ನಾಟಕ ಸರ್ಕಾರ ಸಿದ್ಧತೆ ನಡೆಸಿದೆ. ಬೆಂಗಳೂರಿನ ಹೊರವಲಯದ ಬಿಡದಿ ಪ್ರದೇಶದಲ್ಲಿ AI ಸಿಟಿ ನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಈ ಯೋಜನೆಯು ಬೆಂಗಳೂರನ್ನು ವಿಶ್ವದ ಪ್ರಮುಖ AI ಎಕಾನಾಮಿಕ್ ಹಬ್ ಆಗಿ ಮಾರ್ಪಡಿಸುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಬಿಡದಿಯಲ್ಲಿ ಸ್ಥಾಪನೆಯಾಗುತ್ತಿರುವ AI ನಗರ :
ಕರ್ನಾಟಕ ಸರ್ಕಾರವು ಯುವಜನತೆಯ ಉದ್ಯೋಗ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಬಿಡದಿಯಲ್ಲಿ ವಿಶೇಷ AI ನಗರವನ್ನು ಸ್ಥಾಪಿಸಲು ಯೋಜಿಸಿದೆ. ಭೈರಮಂಗಲ, ಅರಳಸಂದ್ರ, ಮಂಡಲಹಳ್ಳಿ, ಗೊಲ್ಲರಪಾಳ್ಯ, ವಡೇರಹಳ್ಳಿ ಸೇರಿದಂತೆ ಹಲವು ಹಳ್ಳಿಗಳನ್ನು ಒಳಗೊಳ್ಳುವ ಈ ಯೋಜನೆಯಲ್ಲಿ ಸುಮಾರು 7841 ಎಕರೆ ಭೂಮಿ ಬಳಕೆಯಾಗಲಿದೆ.
ರೈತರಿಗೆ ಬಂಗಾರದ ಬೆಲೆ? ಆದರೆ ವಿರೋಧವೂ ಇದೆ
ಸರ್ಕಾರವು ರೈತರ ಭೂಮಿಯನ್ನು ಎಕರೆಗೆ 2 ರಿಂದ 3 ಕೋಟಿ ರೂಪಾಯಿ ನೀಡಿ ಖರೀದಿಸುವ ಯೋಜನೆಯನ್ನು ಹಾಕಿಕೊಂಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ಶೇ.70 ರಷ್ಟು ರೈತರು ಈ ಯೋಜನೆಗೆ ಒಪ್ಪಿಗೆ ನೀಡಿದ್ದರೂ, ಕೆಲವು ರೈತರು ಎಕರೆಗೆ 6 ರಿಂದ 7 ಕೋಟಿ ಬೇಡುತ್ತಿದ್ದಾರೆ. ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸರ್ಕಾರ ರೈತರೊಂದಿಗೆ ಮಾತುಕತೆ ನಡೆಸುತ್ತಿದೆ.
ಯುವಕರಿಗೆ ಅಪಾರ ಉದ್ಯೋಗಾವಕಾಶಗಳು :
AI ಸಿಟಿಯು ಕೇವಲ ತಂತ್ರಜ್ಞಾನ ಕೇಂದ್ರವಾಗುವುದಲ್ಲದೆ, ಕಾರು ತಯಾರಿಕಾ ಘಟಕಗಳನ್ನೂ ಒಳಗೊಳ್ಳುವ ಸಾಧ್ಯತೆ ಇದೆ. ಇಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಭೂಮಿ ಮಾರುವ ರೈತರಿಗೆ ಉತ್ತಮ ಪುನರ್ವಸತಿ ಮತ್ತು ಉದ್ಯೋಗ ಅವಕಾಶಗಳನ್ನು ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ.
AI ಬೆಳವಣಿಗೆಯು ಐಟಿ ಕ್ಷೇತ್ರದಲ್ಲಿ ಕೆಲಸ ಕಳೆದುಕೊಳ್ಳುವ ಆತಂಕವನ್ನು ಹುಟ್ಟುಹಾಕಿದ್ದರೂ, ಹೊಸ ಉದ್ಯೋಗಗಳು ಮತ್ತು ಆರ್ಥಿಕ ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಬಿಡದಿ AI ಸಿಟಿ ಯಶಸ್ವಿಯಾದರೆ ಬೆಂಗಳೂರು ಜಗತ್ತಿನ ಪ್ರಮುಖ AI ಹಬ್ ಆಗಿ ಹೊರಹೊಮ್ಮುವ ಸಾಧ್ಯತೆ ದಟ್ಟವಾಗಿದೆ.
