ಬೆಂಗಳೂರು: ಇಷ್ಟಪಟ್ಟ ಹುಡುಗನ ಜೊತೆ ಮದುವೆಯಾಗಿ ಹೊಸ ಜೀವನ ಆರಂಭಿಸಬೇಕಿದ್ದ 29 ವರ್ಷದ ಯುವತಿ ವಿದ್ಯಾಜ್ಯೋತಿ, ಜ್ಯೋತಿಷಿಯೊಬ್ಬರು ಹೇಳಿದ ಭವಿಷ್ಯಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ
ಎಂಇಐ ಲೇಔಟ್ ನಿವಾಸಿಯಾದ ವಿದ್ಯಾಜ್ಯೋತಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದ ಇವರು, ಕೊಡಗು ಮೂಲದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದರು. ಮಗಳ ಇಷ್ಟದಂತೆ ಪೋಷಕರು ಮದುವೆಗೆ ಒಪ್ಪಿಗೆ ನೀಡಿದ್ದರು. ಎರಡೂ ಕುಟುಂಬಗಳಲ್ಲಿ ಸಂಭ್ರಮದ ವಾತಾವರಣವಿತ್ತು. ಆದರೆ ಜ್ಯೋತಿಷಿಯ ಆ ಭವಿಷ್ಯ ಯುವತಿ ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ಮಾಡಿದೆ.
ಕೆಲ ದಿನಗಳ ಹಿಂದೆ ವಿದ್ಯಾಜ್ಯೋತಿಯ ಜಾತಕ ನೋಡಿದ್ದ ಜ್ಯೋತಿಷಿಯೊಬ್ಬರು, ಈಕೆ ಅಲ್ಪಾಯುಷಿ (ಕಡಿಮೆ ಕಾಲ ಬದುಕುವವಳು) ಎಂದು ಭವಿಷ್ಯ ನುಡಿದಿದ್ದರು. ಅಷ್ಟೇ ಅಲ್ಲದೆ, ಇದಕ್ಕೆ ಪರಿಹಾರವಾಗಿ 9 ದಿನಗಳ ಕಾಲ ವಿಶೇಷ ಪೂಜೆ ಮಾಡುವಂತೆ ಮತ್ತು 9ನೇ ದಿನ ದೇವರಿಗೆ ಚಿನ್ನದ ತಾಳಿಯನ್ನು ಅರ್ಪಿಸುವಂತೆ ತಾಕೀತು ಮಾಡಿದ್ದರು. ಜ್ಯೋತಿಷಿಯ ಈ ಮಾತು ಯುವತಿಯ ಮನಸ್ಸಿನ ಮೇಲೆ ತೀವ್ರವಾದ ಪರಿಣಾಮ ಬೀರಿದೆ ಎನ್ನಲಾಗಿದೆ.
ಪೂಜೆಯ ವಿಧಿವಿಧಾನದಂತೆ ಕುಟುಂಬದವರು ಮಾರಮ್ಮ ದೇವರಿಗೆ ತಾಳಿ ಅರ್ಪಿಸಲು ಸಿದ್ಧತೆ ನಡೆಸಿದ್ದರು. ಘಟನೆಯ ದಿನ ಮಧ್ಯಾಹ್ನ ಊಟದ ನಂತರ ವಿದ್ಯಾಜ್ಯೋತಿ ತನ್ನ ಕೋಣೆಗೆ ತೆರಳಿದ್ದರು. ಮನೆಯವರು ಆಕೆ ಕೆಲಸ ಮಾಡುತ್ತಿರಬಹುದು ಎಂದು ಭಾವಿಸಿದ್ದರು. ಆದರೆ, ಸಂಜೆ ಎಷ್ಟು ಕರೆದರೂ ಆಕೆ ಪ್ರತಿಕ್ರಿಯಿಸಲಿಲ್ಲ. ರಾತ್ರಿ 8 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಹೋಗಲು ತಾಯಿ ಮಗಳನ್ನು ಕರೆಯಲು ಹೋದಾಗಲೂ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಪೋಷಕರು ಕಿಟಕಿಯಿಂದ ನೋಡಿದ್ದಾರೆ. ಆಗ ವಿದ್ಯಾಜ್ಯೋತಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪೊಲೀಸ್ ತನಿಖೆ:
ಸ್ಥಳಕ್ಕೆ ಧಾವಿಸಿದ ಬಾಗಲಗುಂಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಜ್ಯೋತಿಷಿಯ ಭವಿಷ್ಯವಾಣಿಯಿಂದ ಉಂಟಾದ ಮಾನಸಿಕ ಆತಂಕವೇ ಈ ಆತ್ಮಹತ್ಯೆಗೆ ಪ್ರೇರೇಪಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
