ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕರ್ಪೂರು ಗ್ರಾಮದಲ್ಲಿರುವ ಒಂದು ಅಪಾರ್ಟ್ಮೆಂಟ್ನಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿ ಮೌಲ್ಯದ 100 ಕಿಲೋಗ್ರಾಂ ಗಾಂಜಾ ಪತ್ತೆಯಾಗಿದೆ. ಈ ಘಟನೆಯಲ್ಲಿ ಕೇರಳ ಮೂಲದ ಆರೋಪಿ ಸಚಿನ್ನನ್ನು ಆನೇಕಲ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಇತರ ಆರೋಪಿಗಳಾದ ರಾಶಿ, ಸಂಜು ಮತ್ತು ಉಮೇದ್ ಪರಾರಿಯಾಗಿದ್ದಾರೆ.
ಸಚಿನ್ ಕೂಡ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಪಾರ್ಟ್ಮೆಂಟ್ನ ಮೊದಲ ಮಹಡಿಯಿಂದ ಹಾರಿ ಪರಾರಿಯಾಗಲು ಯತ್ನಿಸಿದನು. ಆದರೆ, ಈ ಪ್ರಯತ್ನದಲ್ಲಿ ಕಾಲು ಮುರಿದು ಕುಸಿದು ಬಿದ್ದಿದ್ದಾನೆ. ಗಾಯಗೊಂಡ ಸಚಿನ್ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೇಕಲ್ ಠಾಣೆ ಪೊಲೀಸರು ಅಪಾರ್ಟ್ಮೆಂಟ್ನಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಮತ್ತು ಆನೇಕಲ್ ಉಪವಿಭಾಗದ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತನಿಖೆಯಲ್ಲಿ ಆರೋಪಿಗಳು ಹೊರರಾಜ್ಯಗಳಿಂದ ಗಾಂಜಾವನ್ನು ತರಿಸಿ, ಅಪಾರ್ಟ್ಮೆಂಟ್ನಲ್ಲಿ ಸಣ್ಣ ಸಣ್ಣ ಪ್ಯಾಕೆಟ್ಗಳಾಗಿ ಪ್ಯಾಕ್ ಮಾಡುತ್ತಿದ್ದರು ಎಂಬುದು ಬಯಲಾಗಿದೆ. ಈ ಪ್ಯಾಕೆಟ್ಗಳನ್ನು ಬಳಿಕ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು. ಆರೋಪಿಗಳ ಕೊಠಡಿಯಲ್ಲಿ ವೇಯಿಂಗ್ ಸ್ಕೇಲ್, ಪ್ಯಾಕಿಂಗ್ ಟೇಪ್, ಮತ್ತು ರಾಶಿಯಾಗಿ ಗಾಂಜಾ ಪಾಕೆಟ್ಗಳು ಪತ್ತೆಯಾಗಿವೆ.
ಪೊಲೀಸರ ಭರ್ಜರಿ ಕಾರ್ಯಾಚರಣೆ
ಬೆಂಗಳೂರು ಪೊಲೀಸರು ಕಳೆದ ಒಂದು ತಿಂಗಳಲ್ಲಿ ಡ್ರಗ್ಗಳ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ. ಈ ಅವಧಿಯಲ್ಲಿ ಡ್ರಗ್ ಕೇಸ್ಗಳಲ್ಲಿ ಒಟ್ಟು 59 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಬಳಿಯಿಂದ 208 ಕಿಲೋಗ್ರಾಂ ಗಾಂಜಾ, 22 ಗ್ರಾಂ ಹೆರಾಯಿನ್, 1 ಕಿಲೋಗ್ರಾಂ ಎಂಡಿಎಂಎ, ಮತ್ತು 32 ಟೈಡಲ್ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.