ಬೆಂಗಳೂರು: ಬೆಂಗಳೂರಿನ ಜಯದೇವ ಡೇರಿ ಸರ್ಕಲ್ನಲ್ಲಿ ಇಂದು ಮಧ್ಯಾಹ್ನ ನಡೆದ ₹7.11 ಕೋಟಿ ಬೃಹತ್ ಹಗಲು ದರೋಡೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಘಟನೆ ನಡೆದ 24 ಗಂಟೆಗಳೊಳಗೆ ಬೆಂಗಳೂರು ನಗರದಾದ್ಯಂತ ಬಿಗಿ ಪೊಲೀಸ್ ನಾಕಾಬಂದಿ ಜಾರಿಗೊಳಿಸಲಾಗಿದ್ದು, ಎಲ್ಲಾ ರಾಜ್ಯದ ಗಡಿ ಚೆಕ್ಪೋಸ್ಟ್ಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ವಿಭಾಗದ ಡಿಸಿಪಿ ಶಿಲ್ಪಾ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆಯಾಗಿದೆ.
ಈಗಾಗಲೇ ದರೋಡೆ ನಡೆದ ಕ್ಯಾಶ್ ವ್ಯಾನ್ನ ಚಾಲಕ ಮತ್ತು ಮೂವರು ಸಿಬ್ಬಂದಿ (ಇಬ್ಬರು ಗನ್ಮ್ಯಾನ್ ಮತ್ತು ಒಬ್ಬ ಕ್ಯಾಶ್ ಕಸ್ಟೋಡಿಯನ್) ಅನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಈ ನಾಲ್ವರಿಂದ ತೀವ್ರ ವಿಚಾರಣೆ ನಡೆಯುತ್ತಿದೆ. ಮೇಲ್ನೋಟಕ್ಕೆ ಸಿಎಂಎಸ್ (Cash Management Service) ಕಂಪನಿಯ ಸಿಬ್ಬಂದಿಯ ಮೇಲೆ ಗಂಭೀರ ಅನುಮಾನ ಮೂಡಿದೆ ಎನ್ನಲಾಗುತ್ತಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಲವು ಅನುಮಾನಾಸ್ಪದ ಅಂಶಗಳು ಬೆಳಕಿಗೆ ಬಂದಿವೆ:
- ದರೋಡೆ ನಡೆದ ಬಳಿಕ ಸಿಬ್ಬಂದಿ ತಕ್ಷಣ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡದೇ ಒಂದು ಗಂಟೆಗೂ ಹೆಚ್ಚು ತಡವಾಗಿ ದೂರು ದಾಖಲಿಸಿದ್ದಾರೆ.
- ಇಬ್ಬರು ಗನ್ಮ್ಯಾನ್ಗಳ ಬಳಿ ಲೋಡೆಡ್ ಆಯುಧಗಳಿದ್ದರೂ ದುಷ್ಕರ್ಮಿಗಳ ಧಾಳಿಯ ಸಂದರ್ಭದಲ್ಲಿ ಒಂದೇ ಒಂದು ರೌಂಡ್ ಫೈರಿಂಗ್ ಕೂಡ ಮಾಡಿಲ್ಲ. ಆಯುಧವನ್ನೇ ಬಳಸಿಲ್ಲ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
- ಹಣ ವರ್ಗಾವಣೆ ನಡೆಯುತ್ತಿದ್ದ ಸ್ಥಳವು ಜನಜಂಗುಳಿ ಪ್ರದೇಶವಾದರೂ ಸುತ್ತಮುತ್ತ ಯಾವುದೇ ಸೆಕ್ಯುರಿಟಿ ವ್ಯವಸ್ಥೆ ಇರಲಿಲ್ಲ.
- ದುಷ್ಕರ್ಮಿಗಳು ಕೇವಲ 4-5 ನಿಮಿಷಗಳಲ್ಲಿ ₹7.11 ಕೋಟಿ ಹೊತ್ತೊಯ್ದು ಎಸ್ಕೇಪ್ ಆಗಿರುವುದು ಮುಂಚಿತವಾಗಿ ಒಳಗಿನ ಮಾಹಿತಿ ಇದ್ದಂತೆ ಕಾಣುತ್ತಿದೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಿಬ್ಬಂದಿಯ ಒಳಗಿನ ಪಾತ್ರದ ಬಗ್ಗೆಯೂ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿಂಮತ್ ಕುಮಾರ್ ಸಿಂಗ್ ಮಾಧ್ಯಮದೊಂದಿಗೆ ಮಾತನಾಡಿ, ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ದಕ್ಷಿಣ ವಿಭಾಗ ಡಿಸಿಪಿ ನೇತೃತ್ವದಲ್ಲಿ ವಿಶೇಷ ತಂಡ ಕಾರ್ಯನಿರ್ವಹಿಸುತ್ತಿದೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುತ್ತೇವೆ.
ಇನ್ನು ಘಟನಾ ಸ್ಥಳದ ಸುತ್ತಲಿನ 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ದುಷ್ಕರ್ಮಿಗಳು ಬಳಸಿದ ಎರಡು ಬಿಳಿ ಬಣ್ಣದ ಇನ್ನೋವಾ ಕ್ರಿಸ್ಟಾ ಕಾರುಗಳ ರಿಜಿಸ್ಟ್ರೇಷನ್ ಸಂಖ್ಯೆಯನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ. ಆ ಕಾರುಗಳು ಘಟನೆಯ ನಂತರ ಜೆ.ಪಿ. ನಗರದಿಂದ ಬನ್ನೇರಘಟ್ಟ ರಸ್ತೆ ಕಡೆಗೆ ಹೋಗಿರುವುದು ದೃಢಪಟ್ಟಿದೆ.





